"ಮುಸ್ಲಿಂ ಮತಗಳು ಟಿಎಂಸಿಗೆ ಫಿಕ್ಸಡ್ ಡೆಪಾಸಿಟ್; ಇನ್ನುಳಿದ 70% ನಮ್ಮ ಪರ"
ಕೋಲ್ಕತ್ತಾ, ಜನವರಿ 21: ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಗೆಲುವಿಗೆ ಅಲ್ಪಸಂಖ್ಯಾತರ ಮತಗಳ ಓಲೈಕೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಸಿಎಂ ಮಮತಾ ಬ್ಯಾನರ್ಜಿ ತೊಡಗಿಕೊಂಡಿರುವ ಕುರಿತು ಟೀಕೆ ಮಾಡಿರುವ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ, ಶೇ 30ರಷ್ಟು ಅಲ್ಪಸಂಖ್ಯಾತರ ಮತಗಳು ನಿಮಗಿರಬಹುದು. ಆದರೆ ಶೇ.70ರಷ್ಟು ಅಲ್ಪಸಂಖ್ಯೇತರ ಜನರ ಮತಗಳು ಬಿಜೆಪಿಗಾಗಿ ಮೀಸಲಿವೆ ಎಂದು ಹೇಳಿದ್ದಾರೆ.
ಹೂಗ್ಲಿಯ ಚಂದನ್ ನಗರದಲ್ಲಿ ಬುಧವಾರ ಬಿಜೆಪಿ ಪ್ರಚಾರ ಮೆರವಣಿಗೆ ಹಮ್ಮಿಕೊಂಡಿದ್ದು, ಈ ಸಂದರ್ಭ ಮಾತನಾಡಿದ ಸುವೇಂದು ಅಧಿಕಾರಿ, "ತೃಣಮೂಲ ಕಾಂಗ್ರೆಸ್ ಖಾಸಗಿ ಕಂಪನಿಯಂತೆ ನಡೆಯುತ್ತಿದೆ. ಅದಕ್ಕೆ ಮಮತಾ ಬ್ಯಾನರ್ಜಿ ಅಧ್ಯಕ್ಷೆ. ಅಭಿಷೇಕ್ ಬ್ಯಾನರ್ಜಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಈ ಕಂಪನಿ ನೋಡಿಕೊಳ್ಳಲು ಪ್ರಶಾಂತ್ ಕಿಶೋರ್ ಎಂಬ ವ್ಯಕ್ತಿಯನ್ನು ಹೊರಗುತ್ತಿಗೆ ಪಡೆದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಮುಂದೆ ಓದಿ...

"70% ಮತಗಳು ನಮ್ಮ ಕಡೆಗಿವೆ"
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 30% (ಮುಸ್ಲಿಂ ಮತದಾರರ) ಮತವನ್ನು ಹೇಗೋ ಪಡೆಯಬಹುದು ಎಂದುಕೊಂಡಿದ್ದಾರೆ. ಆದರೆ ನಮಗೆ ಇನ್ನುಳಿದ 70% ಮತವಿದೆ. ಆಡಳಿತ ಪಕ್ಷವನ್ನು ಉಚ್ಚಾಟಿಸಲು ಸೂಕ್ತವಾಗುವ ಒಳ್ಳೆ ಉತ್ತರವನ್ನು ಚುನಾವಣೆಯಲ್ಲಿ ನೀಡುತ್ತೇನೆ ಎಂದರು.

"ನಂದಿಗ್ರಾಮದಲ್ಲಿ ಬಿಜೆಪಿ ಗೆಲುವು 100% ಖಚಿತ"
ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ನಂದಿಗ್ರಾಮದಿಂದ ಬಿಜೆಪಿ ಕಡೆಯಿಂದ ಯಾರು ಚುನಾವಣೆಗೆ ನಿಂತರೂ ಸರಿ, ಅಲ್ಲಿಂದ ಬಿಜೆಪಿ ಗೆಲುವು ಖಚಿತ. ನಂದಿಗ್ರಾಮದಿಂದ ಬಿಜೆಪಿಗೆ ಗೆಲುವು ತರುವ ಜವಾಬ್ದಾರಿ ನನ್ನದು. ತೃಣಮೂಲ ಕಾಂಗ್ರೆಸ್ 62,000 ಮತಗಳ ಮೇಲೆ ಅವಲಂಬಿತವಾಗಿದ್ದಾರೆ. ಆದರೆ ನನಗೆ 2.13 ಲಕ್ಷ ಜನರ ಬೆಂಬಲವಿದೆ ಎಂದು ತಿರುಗೇಟು ನೀಡಿದರು.

"ಟಿಎಂಸಿಯಲ್ಲಿ ನೌಕರನಂತೆ ಇದ್ದೆ"
ತೃಣಮೂಲ ಕಾಂಗ್ರೆಸ್ ನಿಂದ ಶಾಸಕ ಅರಿಂದಂ ಭಟ್ಟಾಚಾರ್ಯ ಬಿಜೆಪಿಗೆ ಸೇರ್ಪಡೆಯಾದ ಕುರಿತು ಮಾತನಾಡಿದ ಅವರು, "ತೃಣಮೂಲ ಕಾಂಗ್ರೆಸ್ ನಲ್ಲಿ ನೌಕರರಂತೆ ದುಡಿಯುತ್ತಿರುವವರು ಹಲವರಿದ್ದಾರೆ. ನೌಕರರಂತೆಯೇ ದುಡಿಯುವ ಬದಲು ಸಹವರ್ತಿಗಳಂತೆ ಇರಲು ಬಯಸುವವರು ಬಿಜೆಪಿಗೆ ಬನ್ನಿ. ನಾನೂ ನೌಕರನಂತೆ ಕೆಲಸ ಮಾಡಲು ಬಯಸದೇ ಟಿಎಂಸಿ ತೊರೆದೆ. ನನಗೆ ಸಹವರ್ತಿಯಂತೆ ಕೆಲಸ ಮಾಡಲು, ಸಹ ಯೋಧನಂತೆ ಕೆಲಸ ಮಾಡಲು ಇಷ್ಟ" ಎಂದರು.

"ಲೋಭಿಗಳು ನಮ್ಮ ಪಕ್ಷದಲ್ಲಿರಬಾರದು"
ಸುವೇಂದು ಅಧಿಕಾರಿಯನ್ನುದ್ದೇಶಿಸಿ ಬುಧವಾರ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಸುವೇಂದು ಅಧಿಕಾರಿ ಪಕ್ಷದಿಂದ ಹೋಗಿದ್ದು ಒಳ್ಳೆಯದೇ ಆಯಿತು. ಇಲ್ಲವೆಂದರೆ ಪಕ್ಷದಲ್ಲೇ ಇದ್ದು ತೊಂದರೆ ಸೃಷ್ಟಿ ಮಾಡುತ್ತಿದ್ದರು. ಬಿಜೆಪಿ ಜನರನ್ನು ಕೊಂಡುಕೊಳ್ಳಬಹುದು. ಆದರೆ ಬಂಗಾಳವನ್ನು ಮಾರಲು ನಾನು ಬಿಡುವುದಿಲ್ಲ. ಮೂರು ರೀತಿಯ ನಾಯಕರಿರುತ್ತಾರೆ. ಲೋಭಿ, ಭೋಗಿ ಹಾಗೂ ತ್ಯಾಗಿ ಎಂದು. ಭೋಗಿ ಹಾಗೂ ಲೋಭಿಗಳು ತಮ್ಮ ಸಿದ್ಧಾಂತಗಳನ್ನು ಮಾರಲು ಸಿದ್ಧರಿರುತ್ತಾರೆ. ಆದರೆ ತ್ಯಾಗಿಗಳು ಹಾಗಲ್ಲ. ಲೋಭಿಗಳು ಟಿಎಂಸಿ ಬಿಟ್ಟು ಹೋಗಿದ್ದಕ್ಕೆ ಸಂತಸವಾಗುತ್ತಿದೆ" ಎಂದಿದ್ದರು.












Click it and Unblock the Notifications