ಬಿಜೆಪಿಗೆ ಸುಲಿಗೆಕೋರ ಪಕ್ಷ ಎಂದು ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್ 20: ಜಗತ್ತಿನಲ್ಲಿಯೇ ಬಿಜೆಪಿ ದೊಡ್ಡ ಸುಲಗೆಕೋರ ಪಕ್ಷವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಖೆಜುರಿಯಲ್ಲಿ ಶನಿವಾರ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯನೊಬ್ಬ ಸುಮಾರು 500 ರೂ. ಕದ್ದರೂ ಸಾಕು ಆತನನ್ನು ಸುಲುಗೆಕೋರ ಎಂದು ಕರೆಯುತ್ತಾರೆ, ಆದರೆ ಬಿಜೆಪಿ ಜನಸಾಮಾನ್ಯರಿಂದ ಲಕ್ಷ ಕೋಟಿ ರೂಗಳನ್ನು ಕೊಳ್ಳೆ ಹೊಡೆದಿದೆ ಬಿಜೆಪಿಯನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಚುನಾವಣೆ ಆರಂಭವಾಗಲಿದ್ದು, ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ.
ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಆದರೆ ಜನರಿಗೆ ಸರಿಯಾಗಿ ಕೋವಿಡ್ ಲಸಿಕೆಗಳು ಸಿಗುವ ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿಲ್ಲ. ಕೊರೊನಾ ಸೋಂಕು ಮತ್ತೆ ದೇಶಾದ್ಯಂತ ಹರಡುತ್ತಿದೆ ಎಂದರು.
ಬಿಜೆಪಿಯು ಗಲಭೆಗಳನ್ನು ಆಯೋಜಿಸುವ, ಜನರನ್ನು ಕೊಲ್ಲುವ ಹಾಗೂ ದಲಿತ ಮಹಿಳೆಯರನ್ನು ಹಿಂಸಿಸುವ ಕಾರ್ಯದಲ್ಲಿ ತೊಡಗಿದೆ. ಬಂಗಾಳದ ಜನರಿಗೆ ಶಾಂತಿ ಬೇಕೆಂದರೆ, ರಾಜ್ಯವು ಗಲಭೆಗಳಿಂದ ಮುಕ್ತವಾಗಿ ಇರಬೇಕೆಂದರೆ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂದರು.
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಲು ಬಿಜೆಪಿಯಂತಹ ಪಕ್ಷಗಳಿಗೆ ಎಂದೂ ಅಧಿಕಾರ ನೀಡಬಾರದು ಎಂದು ಪುನರುಚ್ಚರಿಸಿದರು.