ಬಂಗಾಳದಲ್ಲಿ ಹೆಚ್ಚಿದ ಬಿಜೆಪಿ ಪ್ರಭಾವ ತಗ್ಗಿಸಲು 'ದೀದಿಗೆ ಹೇಳಿ'!
ಕೊಲ್ಕತ್ತಾ, ಜುಲೈ 29: ಪಶ್ಚಿಮ ಬಂಗಾಳದಲ್ಲಿ ಊಹೆಗೂ ಮೀರಿ ಹೆಚ್ಚುತ್ತಿರುವ ಬಿಜೆಪಿ ಪ್ರಭಾವ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಲೆನೋವಾಗಿದೆ. 2021 ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾದೀತು ಎಂಬುದನ್ನು ಅರಿತ ಮಮತಾ, ಈಗಿನಿಂದಲೇ ಮತದಾರರನ್ನು ಸೆಳೆವ, ಮತದಾರರ ಮನದಿಂಗಿತ ಅರಿವ ಕಾರ್ಯಕ್ರಮಕ್ಕೆ ಕೈ ಹಾಕಿದ್ದಾರೆ. ಆ ಕಾರ್ಯಕ್ರಮದ ಹೆಸರು 'ದೀದಿ ಕೆ ಬೊಲೋ' ಅಥವಾ 'ದೀದಿಗೆ ಹೇಳಿ'!
ಸೋಮವಾರ ಕೊಲ್ಕತ್ತಾದಲ್ಲಿ ಈ ವೆಬ್ ಸೈಟ್ ಮತ್ತು ಪಕ್ಷದ ಸಹಾಯವಾಣಿಯನ್ನು ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ, ಈ ವಿಷಯ ತಿಳಿಸಿದರು.
ಜನರ ಸಮಸ್ಯೆಗಳನ್ನು ಮತ್ತು ಸರ್ಕಾರದಿಂದ ಅವರ ನಿರೀಕ್ಷೆಗಳನ್ನು ಜನರ ಬಾಯಿಂದಲೇ ಆಲಿಸುತ್ತೇವೆ. ಜನರು ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೇರವಾಗಿ ನಮ್ಮೊಂದಿಗೇ ಮಾತನಾಡಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.
"ಜೊತೆಗೆ ನೂರು ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 1000 ಕ್ಕೂ ಹೆಚ್ಚು ಕಾರ್ಯಕರ್ತರು 10000 ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಲ್ಲೇ ಸಮಯ ಕಳೆದು, ಸಮಸ್ಯೆಗಳನ್ನು ಅರಿಯಲಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಈ ಬಾರಿ ಲೋಕಸಭೆ ಚುನಾವಣೆಯ ವರೆಗೂ ಬಿಜೆಪಿಯನ್ನು ತನಗೊಂದು ಪ್ರತಿಸ್ಪರ್ಧಿ ಎಂದೇ ನೋಡಿರದ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಮುಖಭಂಗವಾಗಿತ್ತು.

ಲೋಕಸಭೆ ಚುನಾವಣೆಯಲ್ಲಿ ಟಾರ್ಗೆಟ್ ರೀಚ್ಡ್!
2014 ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ 18(42) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅಷ್ಟೇ ಅಲ್ಲ ಬಿಜೆಪಿಯ ಮತಹಂಚಿಕೆಯ ಪ್ರಮಾಣ 2014 ಕ್ಕೆ ಹೋಲಿಸಿದರೆ ಶೇ.40 ರಷ್ಟು ಹೆಚ್ಚಾಗಿತ್ತು. ಇದು ತೃಣಮೂಲ ಕಾಂಗ್ರೆಸ್ ಗೆ ಎಚ್ಚರಿಕೆ ಗಂಟೆ ಎನ್ನಿಸಿತ್ತು. ಲೋಕಸಭೇ ಚುನಾವಣೆಗೂ ಮುನ್ನ ಅಮಿತ್ ಶಾ ಅವರು ಟಾರ್ಗೆಟ್ 20 ಅನ್ನು ತಲುಪುವುದು ನಮ್ಮ ಗುರಿ ಎಂದಿದ್ದರು. ಆಂತೆಯೇ ತಮ್ಮ ಗುರಿಯನ್ನು ಬಹುತೇಕ ಮುಟ್ಟಿದ್ದರು ಸಹ.

ವಿಧಾನಸಭೆ ಚುನಾವಣೆಗೆ ಬಿಜೆಪಿ ಟಾರ್ಗೆಟ್ 250!
ಇದೀಗ 2021 ರ ವಿಧಾನಸಭೆ ಚುನಾವಣೆಗೆ 250(294) ಕ್ಷೇತ್ರಗಳಲ್ಲಿ ಗೆಲ್ಲುವುದು ತಮ್ಮ ಟಾರ್ಗೆಟ್ ಎಂದು ಬಿಜೆಪಿ ಹೇಳಿದೆ. ಈಗಾಗಲೇ ಆ ನಿಟ್ತಿನಲ್ಲಿ ಕೆಲಸವನ್ನೂ ಆರಂಭಿಸಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತಿದೆ. ಅಷ್ಟೇ ಅಲ್ಲ, ಟಿಎಂಸಿ ಯಲ್ಲಿ ಟಿಕೆಟ್ ಸಿಗದೆ ನಿರಾಸೆ ಅನುಭವಿಸಿದವರನ್ನೂ, ಹಾಲಿ ಶಾಸಕರನ್ನೂ, ಮಮತಾ ಬ್ಯಾನರ್ಜಿ ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲದ ಮುಖಂಡರನ್ನೂ ಈಗಲೇ ತನ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಲೋಕಸಭೆ ಚುನಾವಣೆಯ ನಂತರವೂ ಹಲವು ಬಿಜೆಪಿ ನಾಯರು ಟಿಎಂಸಿ ಪಕ್ಷವನ್ನು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲ ನೀಡೀತೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ?
ಈ ಎಲ್ಲವುಗಳಿಂದ ಆತಂಕಗೊಂಡಿರುವ ಮಮತಾ ಬ್ಯಾನರ್ಜಿ ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನೂ ತಮ್ಮ ಪಕ್ಷದ ಸಲಹೆಗಾರರನ್ನಾಗಿ ನಿಯೋಜಿಸಿಕೊಂಡಿದೆ. ಈ ಎಲ್ಲವೂ ಮತ್ತೊಮ್ಮೆ ಪಶ್ಚಿಮ ಬಂಗಾಳ ದೀದಿ ಕೈಸೇರುವಂತೆ ಮಾಡುತ್ತದೆಯಾ? ಅಥವಾ ಲೋಕಸಭೆ ಚುನಾವಣೆಯ ಹೊತ್ತಿನ ಋಣಾತ್ಮಕ ಪ್ರಚಾರ, ನಂತರ ವೈದ್ಯರ ಮುಷ್ಕರ, ಜೈ ಶ್ರೀರಾಮ್ ವಿವಾದ ಸೇರಿ ದೀದಿ ಅವರತ್ತ ಮತದಾರರು ತಿರುಗಿ ನೋಡದಂತೆ ಮಾಡುತ್ತದದೆಯೇ ಎಂಬುದನ್ನು ಕಾದು ನೋಡಬೇಕು! ವಿಧಾನಸಭೆ ಚುನಾವಣೆಯ ಸಮಯದಲ್ಲಿ ತಮ್ಮ ನಿರೀಕ್ಷೆಯನ್ನೂ ಮೀರಿ ಮತದಾರರು ಬಿಜೆಪಿಯನ್ನು ಬೆಂಬಲಿಸಲು ಮುಂದಾದರೆ ಎಡಪಕ್ಷ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸುವ ಬಗ್ಗೆಯೂ ಮಮತಾ ಬ್ಯಾನರ್ಜಿ ಯೋಚಿಸುತ್ತಿದ್ದಾರೆ!

ಲೋಕಸಭೆಯಲ್ಲಿ ಕೈ ಕೊಟ್ಟ ಟಿಎಂಸಿ ಮತದಾರರು
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಮಾತ್ರವಲ್ಲದೆ, ಒಬಿಸಿ, ದಲಿತ, ಆದಿವಾಸಿ ಮತದಾರರು ಟಿಎಂಸಿಗಿಂತ ಸಹ ಬಿಜೆಪಿಗೇ ಹೆಚ್ಚು ಮತ ಚಲಾಯಿಸಿರುವುದು ಮಮತಾ ಬ್ಯಾನರ್ಜಿ ಅವರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಮುಸ್ಲಿಮ್ ಮತಗಳು ಮಾತ್ರವೇ ಲೋಕಸಭೆ ಚುನಾವಣೆಯಲ್ಲಿ ದೀದಿ ಅವರ ಕೈ ಹಿಡಿದಿದ್ದು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications