ಕೋಮಾದಲ್ಲಿರುವ ವೈದ್ಯರ ಭೇಟಿ ರದ್ದುಪಡಿಸಿದ ದೀದಿ ಮಮತಾ
ಕೋಲ್ಕತಾ, ಜೂನ್ 15 : ರೋಗಿಯ ಸಂಬಂಧಿ ನಡೆಸಿದ ಹಲ್ಲೆಯಿಂದಾಗಿ ಕೋಮಾಗೆ ಜಾರಿರುವ ಜ್ಯೂನಿಯರ್ ವೈದ್ಯ ಪರಿಬಾಹ ಮುಖ್ಯೋಪಾಧ್ಯಾಯ್ ಅವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಠಾತ್ತನೆ ರದ್ದುಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಹಠಮಾರಿತನದಿಂದಾಗಿ ಮತ್ತು ಮುಷ್ಕರ ನಿರತ ವೈದ್ಯರು ಮುಖ್ಯಮಂತ್ರಿಯೇ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದಿರುವುದರಿಂದ, ಇದೀಗ ಉದ್ಭವಿಸಿರುವ ಸಮಸ್ಯೆಗೆ ಯಾವುದೇ ಪರಿಹಾರ ದೊರಕಿಸಿಕೊಡುತ್ತಿಲ್ಲ.
ತಮ್ಮ ಕಚೇರಿಯಲ್ಲಿಯೇ ಮುಚ್ಚಿದ ಕೋಣೆಯಲ್ಲಿ ವೈದ್ಯರ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಲು ಮಮತಾ ಬ್ಯಾನರ್ಜಿ ಸಿದ್ಧರಿದ್ದರು ಮತ್ತು ಮಾತುಕತೆಗೆ ಅವರನ್ನು ಆಹ್ವಾನಿಸಿದ್ದರು. ಆದರೆ, ಅಲ್ಲಿ ಹೋದರೆ ತಮಗೆ ಭದ್ರತೆ ಸಿಗಲಾರದು ಎಂಬ ಕಾರಣ ನೀಡಿ ಮಾತುಕತೆಯನ್ನು ವೈದ್ಯರು ತಿರಸ್ಕರಿಸಿದ್ದಾರೆ.

ಜೂನ್ 15ರಂದು ರೋಗಿ ಸತ್ತ ಹಿನ್ನೆಲೆಯಲ್ಲಿ ರೋಗಿಯ ಸಂಬಂಧಿಕರು ತರಬೇತಿ ಪಡೆಯುತ್ತಿದ್ದ ವೈದ್ಯರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಇದರಿಂದ ಪರಿಬಾಹ ಮುಖ್ಯಾಪಾಧ್ಯಾಯ್ ಎಂಬ ವೈದ್ಯರ ತಲೆ ಬುರುಡೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರು ಕೋಮಾಗೆ ಜಾರಿದ್ದಾರೆ.
ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಜ್ಯೂನಿಯರ್ ವೈದ್ಯರು, ಹಲ್ಲೆಕೋರರ ಮೇಲೆ ಕ್ರಮ ಜರುಗಿಸಬೇಕು, ತಮಗೆ ಪೊಲೀಸ್ ಭದ್ರತೆ ನೀಡಬೇಕು, ರಕ್ಷಣೆ ನೀಡದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಒಡ್ಡಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಈ ನಡುವೆ, ಈ ಘಟನೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಅವರು ಕ್ರಮ ಜರುಗಿಸದ ವಿರುದ್ಧ ಜೂನ್ 17, ಸೋಮವಾರ ಇಡೀ ದೇಶದಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.












Click it and Unblock the Notifications