ಕೋವಿಡ್ ಕಡಿಮೆಯಾದ ಬಳಿಕ ಸಿಎಎ ಜಾರಿ: ಅಮಿತ್ ಶಾ
ಕೋಲ್ಕತ್ತಾ, ಮೇ 5: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಳಿಕ ನೆನೆಗುದಿಗೆ ಬಿದ್ದಂತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತೆ ಸದ್ದು ಮಾಡುತ್ತಿದೆ. ಕೋವಿಡ್ ಪರಿಸ್ಥಿತಿ ತಣ್ಣಗಾದ ಬಳಿಕ ಸಿಎಎ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುರುವಾರ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ಬರುವುದಿಲ್ಲ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡುತ್ತಿರುವ ಹೇಳಿಕೆಯನ್ನು ಖಂಡಿಸಿದರು.
CAA Rules : ಸಿಎಎ ನಿಯಮಗಳನ್ನು ರೂಪಿಸಲು 6 ತಿಂಗಳ ಕಾಲಾವಕಾಶ ಕೇಳಿದ ಕೇಂದ್ರ ಸರ್ಕಾರ
"ನಾನೀಗ ಉತ್ತರ ಬಂಗಾಳಕ್ಕೆ ಬಂದಿದ್ದೇನೆ. ಸಿಎಎ ಜಾರಿಗೆ ಬರಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹರಡುತ್ತಿದೆ. ಕೋವಿಡ್ ಅಲೆ ತಗ್ಗಿದ ಕೂಡಲೇ ಸಿಎಎ ಜಾರಿಗೆ ತರುತ್ತೇವೆ. ಸಿಎಎ ವಾಸ್ತವಿಕವಾಗಿತ್ತು. ಮುಂದೆಯೂ ಅದು ವಾಸ್ತವವೇ ಆಗಿರಲಿದೆ. ತೃಣಮೂಲ ಪಕ್ಷ ಏನೂ ಮಾಡಲು ಸಾಧ್ಯವಿಲ್ಲ" ಎಂದು ಅಮಿತ್ ಶಾ ಕುಟುಕಿದರು.
ಸಿಎಎ ಪ್ರತಿಭಟನೆಗಳಿಗೆ ದಂಡ ವಿಧಿಸುವ ಕುರಿತು ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಸಿಎಎ ಜಾರಿಗೆ ತರುತ್ತೇವೆ ಎಂದು ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದರು. "ಇದು ಅವರ ಪ್ಲಾನ್. ಸಂಸತ್ಗೆ ಈ ಮಸೂದೆಯನ್ನು ಯಾಕೆ ತರುತ್ತಿಲ್ಲ ಅವರು?. 2024ರಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ. ಯಾವುದೇ ನಾಗರಿಕರು ಕಷ್ಟಕ್ಕೊಳಗಾಗುವುದು ನಮಗೆ ಬೇಕಿಲ್ಲ. ಒಗ್ಗಟ್ಟೇ ನಮ್ಮ ಬಲ. ಒಂದು ವರ್ಷದ ಬಳಿಕ ಅವರು ಬಂದಿದ್ದಾರೆ. ಪ್ರತೀ ಬಾರಿ ಬಂದಾಗಲೂ ಅಸಂಬದ್ಧ ಮಾತುಗಳನ್ನೇ ಆಡಿ ಹೋಗುತ್ತಾರೆ" ಎಂದು ತಿರುಗೇಟು ನೀಡಿದರು.
ಏನಿದು ಸಿಎಎ ಜಾರಿ ವಿವಾದ?
ಇದು ಪೌರತ್ವ ತಿದ್ದುಪಡಿ ಕಾಯ್ದೆ. ದೇಶದ ಪೌರತ್ವ ನೀಡುವ ಕಾನೂನಿನಲ್ಲಿ ತುಸು ಮಾರ್ಪಾಡು ಮಾಡಲಾಗಿದೆ. ತಿದ್ದುಪಡಿ ಕಾಯ್ದೆ ಪ್ರಕಾರ ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ತುಳಿತಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ.
ಸಿಎಎಗೆ ಯಾಕೆ ವಿರೋಧ?
ಸಿಎಎ ಕಾಯ್ದೆಯು ಧರ್ಮಾಧಾರಿತವಾಗಿ ತಾರತಮ್ಯ ಮಾಡುತ್ತದೆ. ಕಾಯ್ದೆಯಲ್ಲಿ ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಒಳಗೊಳ್ಳಲಾಗಿಲ್ಲ ಎಂಬುದು ವಿರೋಧಕ್ಕೆ ಒಂದು ಕಾರಣವಾಗಿದೆ. ಮತ್ತೊಂದು ಕಾರಣ ಎಂದರೆ, ಸಿಎಎ ಜೊತೆಗೆ ಎನ್ಆರ್ಸಿ ಯೋಜನೆಯನ್ನೂ ಒಳಗೊಂಡು ಈ ಎರಡು ಡೆಡ್ಲಿ ಕಾಂಬಿನೇಶನ್ ಮೂಲಕ ಮುಸ್ಲಿಮರನ್ನು ದೇಶದಿಂದ ಹೊರಹಾಕುವ ಸಂಚಾಗಿದೆ. ಇದರ ಭಾಗವಾಗಿ ಸಿಎಎ ಇದೆ ಎಂಬುದು ಪ್ರಮುಖ ಆಕ್ಷೇಪ.
ಸಿಎಎಗೆ ಅನುಮೋದನೆ ಸಿಕ್ಕಿಲ್ಲ
ಕೇಂದ್ರ ಸರ್ಕಾರ ಈ ಆಕ್ಷೇಪಗಳನ್ನು ಅಲ್ಲಗಳೆದಿದೆ. ತುಳಿಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದರಲ್ಲಿ ಏನು ತಪ್ಪು ಎಂಬುದು ಸರಕಾರದ ಅಭಿಪ್ರಾಯ. 2019ರಲ್ಲಿ ತಿದ್ದುಪಡಿ ಮಸೂದೆ ತರಲಾಯಿತು. ಆದರೆ, ಸಂಸತ್ನಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಆ ವರ್ಷದ ದೇಶಾದ್ಯಂತ ಸಿಎಎ ವಿರುದ್ಧ ವ್ಯಾಪಕವಾದ ಬೃಹತ್ ಪ್ರತಿಭಟನೆಗಳು ನಡೆದವು.
ಹಿನ್ನಲೆಗೆ ಸರಿದ ವಿವಾದ
ಅಷ್ಟರಲ್ಲಿ 2020ರ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಕೋವಿಡ್ ರೋಗ ಹರಡಲು ಆರಂಭಿಸಿತು. ಮಾರ್ಚ್ ತಿಂಗಳಿನಿಂದ ಲಾಕ್ ಡೌನ್ ಘೋಷಿಸಲಾಯಿತು. ಕೋವಿಡ್ ಮುನ್ನೆಲೆಗೆ ಬರುತ್ತಿದ್ದಂತೆಯೇ ಸಿಎಎ ಇತ್ಯಾದಿ ವಿವಾದಗಳು ಹಿನ್ನೆಲೆಗೆ ಸರಿದುಕೊಂಡವು.
ಆದರೆ, ಸಿಎಎ ಯಾವತ್ತೂ ಬಿಜೆಪಿಯ ಅಜೆಂಡಾ ಆಗಿರುತ್ತದೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ಕಾಯ್ದೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರಕಾರ ಕಳೆದ ಎರಡು ವರ್ಷಗಳಿಂದ ಸ್ಪಷ್ಟಪಡಿಸಿಕೊಂಡು ಬರುತ್ತಲೇ ಇದೆ. ಈಗಲೂ ಅಮಿತ್ ಶಾ ಈ ವಿಚಾರವನ್ನು ಪುನರುಚ್ಚರಿಸಿದ್ಧಾರೆ.
(ಒನ್ಇಂಡಿಯಾ ಸುದ್ದಿ)