ಮೊದಲು ವಾಸ್ತವ ತಿಳಿದುಕೊಳ್ಳಿ: ಸಂಸದೆ ಮೊಯಿತ್ರಾಗೆ ಮಾಜಿ ಸಿಜೆಐ ರಂಜನ್ ಗೊಗೊಯ್ ತಿರುಗೇಟು
ಕೋಲ್ಕತಾ, ಫೆಬ್ರವರಿ 11: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿರುವ ಆರೋಪಗಳನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಳ್ಳಿಹಾಕಿದ್ದಾರೆ. ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡಿರುವ ಅವರು, ನ್ಯಾಯಾಧೀಶರು ದಾಳಿಗಳಿಂದ ತಲೆಬಾಗಬಾರದು ಎಂದಿದ್ದಾರೆ.
ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ರಂಜನ್ ಗೊಗೊಯ್ ಅವರು, ತಮ್ಮ ವಿರುದ್ಧ ಸಂಸತ್ನಲ್ಲಿ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಹಕ್ಕುಚ್ಯುತಿ ನಿರ್ಣಯ
ಮೋಯಿತ್ರಾ ಅಥವಾ ಅವರ ಪಕ್ಷವನ್ನು ನೇರವಾಗಿ ಉಲ್ಲೇಖಿಸದ ಗೊಗೊಯ್, 'ಏನಿದು ದಾಳಿ? ದಾಳಿಗಳಿಂದ ನಿವೃತ್ತ ನ್ಯಾಯಾಧೀಶರು ಎಂದಾದರೂ ಹೆದರಿದ್ದಾರಾ? ಆಕೆ ಮುಖ್ಯವಾಗಿ ವಾಸ್ತವ ಸಂಗತಿಗಳನ್ನೇ ಸರಿಯಾಗಿ ಹೊಂದಿರಲಿಲ್ಲ. ನೀವು ಆರೋಪವೊಂದನ್ನು ಮಾಡುವಾಗ ಕಡೇಪಕ್ಷ ವ್ಯಕ್ತಿಯ ಹೆಸರು ಹೇಳಿ. ನನಗೆ ಒಂದು ಹೆಸರಿದೆ. ಮತ್ತು ಹೆಸರು ಹೇಳಿಸಿಕೊಳ್ಳುವ ಅರ್ಹತೆ ಇದೆ. ವಾಸ್ತವವಾಗಿ ಆ ಆರೋಪಗಳು ಸುಳ್ಳು' ಎಂದು ಹೇಳಿದ್ದಾರೆ.
ಕೋಲ್ಕತಾದಲ್ಲಿ 'ಇಂಡಿಯಾ ಟುಡೆ' ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಂಜನ್ ಗೊಗೊಯ್, ನ್ಯಾಯಾಧೀಶರಿಗೆ ಎಚ್ಚರಿಕೆಯ ಸಂದೇಶ ನೀಡುವ ಸಲುವಾಗಿ ತಮ್ಮನ್ನು ಒಳಗೊಂಡ ಪ್ರಕರಣವನ್ನು ಸಂಸತ್ನಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
'ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕು ಎಂದು ಅವರು ಬಯಸುತ್ತಾರೆ. ಒಂದು ವೇಳೆ ನೀವು ಹಾಗೆ ಮಾಡದೆ ಇದ್ದರೆ ಅವರು ನಿಮ್ಮ ಮೇಲೆ ದಾಳಿ ನಡೆಸುತ್ತಾರೆ. ನ್ಯಾಯಾಧೀಶರು ಅಂತಹ ದಾಳಿಗಳಿಂದ ಹಿಂಜರಿಯಬೇಕೇ? ದುರದೃಷ್ಟವಶಾತ್ ಅನೇಕರು ಮಾಡುತ್ತಾರೆ' ಎಂದು ಹೇಳಿದ್ದಾರೆ.
ಅಸ್ಸಾಂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗ್ತಾರಾ ಮಾಜಿ ಸಿಜೆಐ ರಂಜನ್ ಗೊಗೊಯ್?
ಅಂತಹ ಆರೋಪಗಳನ್ನು ಮಾಡುವ ಮುನ್ನ ಕಡೇಪಕ್ಷ ಸರಿಯಾದ ಮಾಹಿತಿಗಳನ್ನು ಪಡೆದುಕೊಳ್ಳಿ. ನಮ್ಮ ದೇಶದ ಸಮಸ್ಯೆಯೆಂದರೆ ವಾಸ್ತವಗಳಿಲ್ಲದೆಯೇ ನಾವು ಮುನ್ನುಗ್ಗುತ್ತೇವೆ. ತಮ್ಮ ವಿರುದ್ಧದ ಪ್ರಕರಣದ ವಿಚಾರಣೆಗೆ ಸಮಿತಿ ರಚಿಸಿದ್ದು ಎರಡನೆಯ ಹಿರಿಯ ನ್ಯಾಯಮೂರ್ತಿಯಾಗಿದ್ದ ಈಗಿನ ಸಿಜೆಐ ಎಸ್ಎ ಬೊಬ್ಡೆ ಎಂದು ಮೊಯಿತ್ರಾ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.