ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಅತಿಥಿಗಳು!
ಕೋಲ್ಕತಾ, ಮೇ 29: ನರೇಂದ್ರ ಮೋದಿ ಅವರು ಎರಡನೆಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ದೇಶ ವಿದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಆದರೆ, ಈ ಗಣ್ಯರಲ್ಲದೆ ಇನ್ನೂ ವಿಶೇಷ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್, ಮಾರಿಷಿಯಸ್, ನೇಪಾಳ ಮುಂತಾದ ದೇಶಗಳಿಂದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ವಿವಿಧ ಹಿಂಸಾಚಾರದ ಘಟನೆಗಳಲ್ಲಿ ಮೃತಪಟ್ಟ ಬಿಜೆಪಿಯ ಸುಮಾರು 50 ಕಾರ್ಯಕರ್ತರ ಕುಟುಂಬದವರನ್ನು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಮೇ 30ರಂದು ಈ ಕಾರ್ಯಕ್ರಮ ನಡೆಯಲಿದೆ.
ಕಳೆದ ಆರು ವರ್ಷಗಳಲ್ಲಿ ಪಂಚಾಯತ್ ರಾಜ್ ಚುನಾವಣೆ ಹಾಗೂ ಇತ್ತೀಚಿನ ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕನಿಷ್ಠ 51 ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕಠಿಣ ಸಂದೇಶ ರವಾನಿಸಲು ಈ ಮೃತರ ಕುಟುಂಬದವರನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.
ರಾಷ್ಟ್ರಪತಿ ಭವನದ ಜೈಪುರ ಗೇಟ್ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಭಾಗವಹಿಸುವಂತೆ ಸುಮಾರು 7,000 ಮಂದಿಗೆ ಆಹ್ವಾನ ನೀಡಲಾಗಿದೆ.
ಬಿಜೆಪಿ ಕಾರ್ಯಕರ್ತರ ಕುಟುಂಬದವರು ಬುಧವಾರ ರೈಲಿನಲ್ಲಿ ಹೊರಟು ಗುರುವಾರ ರಾಜಧಾನಿ ನವದೆಹಲಿ ತಲುಪಲಿದ್ದಾರೆ. ಪಕ್ಷದ ಹಿರಿಯ ಕಾರ್ಯಕರ್ತರು, ಮುಖಂಡರು ಅವರ ಪ್ರಯಾಣದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಅವರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.

51 ಕುಟುಂಬದವರಿಗೆ ಆಹ್ವಾನ
ಆಹ್ವಾನಿತ ಕುಟುಂಬದವರಲ್ಲಿ 46 ಮಂದಿ ಪಂಚಾಯತ್ ರಾಜ್ ಚುನಾವಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದರೆ, ಐದು ಮಂದಿ ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಮೃತಪಟ್ಟಿದ್ದರು. ಬಾರಕ್ಪುರ, ಕೃಷ್ಣನಗರ, ನಾಡಿಯಾ, ಪುರುಲಿಯಾ, ಮಾಲ್ಡಾ, ಬಂಕುರಾ, ಪಶ್ಚಿಮ ಮಿಡ್ನಾಪುರ, ಝಾರ್ಗಮ್, ದಕ್ಷಿಣ 24 ಪರಗಣ, ಬುರ್ದ್ವಾನ್, ರಾಣಾಘಾಟ್, ಬಿರ್ಭುಮ್ ಮತ್ತು ಕೂಚ್ ಬಿಹಾರದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರಂತರ ಭಯದೊಂದಿಗೆ ಬದುಕುತ್ತಿರುವ ತಮ್ಮ ಕಥೆಯನ್ನು ಹೇಳಲು ಇತ್ತೀಚೆಗೆ ಕೆಲವು ಕುಟುಂಬದ ಸದಸ್ಯರು ಬಿಜೆಪಿ ಕೇಂದ್ರ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದರು.
|
'ಕೊಲೆ ಮಾಡಿದ ಟಿಎಂಸಿ ಗೂಂಡಾಗಳು'
'ನನ್ನ ಅಪ್ಪನನ್ನು ತೃಣಮೂಲ ಕಾಂಗ್ರೆಸ್ ಗೂಂಡಾಗಳು ಕೊಲೆ ಮಾಡಿದರು. ನಾವು ದೆಹಲಿಗೆ ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈಗ ನಮ್ಮ ಪ್ರದೇಶದಲ್ಲಿ ಶಾಂತಿ ನೆಲೆಸಿದೆ' ಎಂದು ಮಿಡ್ನಾಪುರದಲ್ಲಿ ಹತ್ಯೆಗೊಳಗಾದ ಮನು ಹನ್ಸದಾ ಅವರ ಮಗ ಹೇಳಿದ್ದಾರೆ.

ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ
'ರಾಜ್ಯದೆಲ್ಲಡೆಯಿಂದ ಪಕ್ಷಕ್ಕೆ ಭಾರಿ ಬೆಂಬಲ ಹರಿದುಬರುತ್ತಿದೆ. ರಾಜ್ಯದಲ್ಲಿ ನಡೆದ ರಾಜಕೀಯ ಹಿಂಸಾಚಾರದಲ್ಲಿ ತಮ್ಮ ಆಪ್ತರನ್ನು, ಆತ್ಮೀಯರನ್ನು ಕಳೆದುಕೊಂಡ ಕುಟುಂಬದವರೊಂದಿಗೆ ನಾವಿದ್ದೇವೆ. ಅವರು ಭಯಭೀತರಾಗುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಲು ಮತ್ತು ಪಕ್ಷದ ಹಿರಿಯ ನಾಯಕರು ಅವರ ಜೊತೆ ದೃಢವಾಗಿ ನಿಲ್ಲುತ್ತಾರೆ ಎಂಬ ಸಂದೇಶ ರವಾನಿಸಬೇಕಿದೆ' ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

68 ಕಾರ್ಯಕರ್ತರ ಸಾವು ಆರೋಪ
ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ ನಡೆದ ಪಂಚಾಯತ್ ಚುನಾವಣೆಯಿಂದ ಇಲ್ಲಿಯವರೆಗೆ ತನ್ನ 68 ಕಾರ್ಯಕರ್ತರನ್ನು ಕಳೆದುಕೊಂಡಿರುವುದಾಗಿ ಬಿಜೆಪಿ ನಿರಂತರವಾಗಿ ಟಿಎಂಸಿ ವಿರುದ್ಧ ಆರೋಪ ಮಾಡುತ್ತಾ ಬಂದಿದೆ. ರಾಜ್ಯದಲ್ಲಿನ ಪಂಚಾಯತ್ ಚುನಾವಣೆಗಳಲ್ಲಿ 2,000ಕ್ಕೂ ಅಧಿಕ ಸೀಟುಗಳಲ್ಲಿ ಸ್ಪರ್ಧೆಯೇ ನಡೆದಿಲ್ಲ.

ಟಿಎಂಸಿಗೆ ಎದುರಾದ ಭಯ
2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಎರಡು ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರ ಟಿಎಂಸಿಗೆ ಭಾರಿ ಆಘಾತ ನೀಡಿದೆ. 42 ಸೀಟುಗಳಲ್ಲಿ ಬಿಜೆಪಿ 18 ಸೀಟುಗಳನ್ನು ಗೆದ್ದು, ಕಮ್ಯುನಿಸ್ಟ್ ಮತ್ತು ಎಡಪಕ್ಷಗಳ ಪ್ರಭಾವವುಳ್ಳ ಬಂಗಾಳದಲ್ಲಿ ಬಲಪಂಥೀಯ ಸಿದ್ಧಾಂತದ ಬೇರುಬಿಡುವ ಸುಳಿವು ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವರ್ಷ ಬಾಕಿ ಉಳಿದಿದೆ. ಎಡಪಕ್ಷಗಳು ಬಹುತೇಕ ಅಸ್ತಿತ್ವ ಕಳೆದುಕೊಂಡಿರುವ ಅಲ್ಲಿ, ಬಿಜೆಪಿಯ ಬೆಳವಣಿಗೆ ಟಿಎಂಸಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications