ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಮೊದಲೇ ಎಲ್ಲರಿಗೂ ಗೊತ್ತಿತ್ತು: ಅಧೀರ್ ರಂಜನ್
ನವದೆಹಲಿ, ಜುಲೈ. 25: ಶಿಕ್ಷಕರ ನೇಮಕಾತಿ ಹಗರಣ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಈ ಹಗರಣದ ಬಗ್ಗೆ ಬಂಗಾಳದ ಎಲ್ಲರಿಗೂ ತಿಳಿದಿತ್ತು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದರು.
ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯವು ಶನಿವಾರ ಬಂಧಿಸಿದ ನಂತರ ಅಧೀರ್ ರಂಜನ್ ಚೌಧರಿ ಈ ಮೇಲಿನಂತೆ ಹೇಳಿ ಪ್ರಕರಣದ ಎಲ್ಲ ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಂಗಾಳದ ಪ್ರತಿಯೊಬ್ಬರಿಗೂ ಈ (ಹಗರಣ) ಬಗ್ಗೆ ತಿಳಿದಿತ್ತು. ನ್ಯಾಯಾಲಯದ ಮಧ್ಯಪ್ರವೇಶದ ನಂತರ ಇಡಿ ಅದರ ಮೇಲೆ ತನಿಖೆ ನಡೆಸಲು ಪ್ರಾರಂಭಿಸಿತು. ನಾವು ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಬಯಸುತ್ತೇವೆ ಎಂದು ಚೌಧರಿ ತಿಳಿಸಿದರು.
ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚಟರ್ಜಿ ಮತ್ತು ಅವರ ಸಹಾಯಕರನ್ನು ಶನಿವಾರ ಬಂಧಿಸಲಾಗಿದೆ. ಸಚಿವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರಿಂದ 20 ಕೋಟಿ ರೂಪಾಯಿ ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿದೆ. ಶಿಕ್ಷಕರ ನೇಮಕಾತಿ ಹಗರಣ ಹಿನ್ನೆಲೆ ಬಂಧನಕ್ಕೊಳಗಾಗಿರುವ ಸಚಿವ ಪಾರ್ಥ ಚಟರ್ಜಿ ಸಂಬಂಧ ತೃಣಮೂಲ ಕಾಂಗ್ರೆಸ್ ಬಿಜೆಪಿ ರಾಜಕೀಯ ಸೇಡಿಗಾಗಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಸಚಿವರ ಆರೋಪ ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಟಿಎಂಸಿ ಹೇಳಿದೆ.

ತೀರ್ಪು ನೀಡಿದ ನಂತರ ತೀರ್ಮಾನ
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಾಂಗವು ತೀರ್ಪು ನೀಡಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಬಂಧನ ಹಾಗೂ ಇಡಿ ಈ ನಾಟಕದ ಹಿಂದೆ ಬಿಜೆಪಿ ಇದೆ ಎಂದು ನಾವು ನಂಬುತ್ತೇವೆ. ಬಿಜೆಪಿಗೆ ವಿರುದ್ಧವಾಗಿರುವವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ತೃಣಮೂಲ ನಾಯಕ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

26 ಗಂಟೆಗಳ ಕಾಲ ವಿಚಾರಣೆ
ಪ್ರಸ್ತುತ ಮಮತಾ ಬ್ಯಾನರ್ಜಿ ಸರ್ಕಾರದ ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳನ್ನು ಹೊಂದಿರುವ 69 ವರ್ಷದ ಚಟರ್ಜಿ ಅವರು 2014 ರಿಂದ 2021 ರವರೆಗೆ ಶಿಕ್ಷಣ ಸಚಿವರಾಗಿದ್ದರು. ಈ ಸಮಯದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆಯ ಬಾಗವಾಗಿ ಶುಕ್ರವಾರ ಬೆಳಿಗ್ಗೆಯಿಂದಲೇ ಸಚಿವರ ನಿವಾಸದಲ್ಲಿ ಸುಮಾರು 26 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ಅವರನ್ನು ಬಂಧಿಸಿತ್ತು.

ಶಿಕ್ಷಕರ ನೇಮಕಾತಿಯಲ್ಲಿ ಹಗರಣ
ಕಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ, ಪಶ್ಚಿಮ ಬಂಗಾಳ ಸೇವಾ ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಗ್ರೂಪ್- ಸಿ ಮತ್ತು ಡಿ ಸಿಬ್ಬಂದಿ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಆರೋಪದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇಡಿ ಈ ಹಗರಣದಲ್ಲಿ ಹಣದ ವರ್ಗಾವಣೆ ಜಾಡು ಹಿಡಿಯುತ್ತಿದೆ.

ಮಮತಾ ಅವರು ರಾಜಕೀಯ ಸುಳ್ಳುಗಾರ್ತಿ
ಜುಲೈ 21 ರಂದು ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ರಾಜಕೀಯ ವಂಚಕಿ, ರಾಜಕೀಯ ಸುಳ್ಳುಗಾರ್ತಿ ಎಂದು ಕರೆದಿದ್ದರು. ಚೌಧರಿ ಅವರು ಯುಪಿಎ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಬೆಂಬಲಿಸದ ಟಿಎಂಸಿ ನಿರ್ಧಾರದ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ್ದರು. ಮಮತಾ ಬ್ಯಾನರ್ಜಿ ಭಾರತದ ಅತ್ಯಂತ ವಂಚಕ, ದ್ವಂದ್ವತೆಯುಳ್ಳ ರಾಜಕಾರಣಿ. ಅಧಿಕಾರಕ್ಕಾಗಿ ರಾಜಕೀಯ ಸುಳ್ಳು ಹೇಳುತ್ತಾರೆ. ಮಮತಾ ಬ್ಯಾನರ್ಜಿ ಅಧಿಕಾರದ ದುರಾಸೆಗೆ ರಾಜಕೀಯ ವಂಚನೆ ಮಾಡುತ್ತಾರೆ ಎಂದು ಚೌಧರಿ ಹೇಳಿದ್ದರು.












Click it and Unblock the Notifications