ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಕೋಲ್ಕತ್ತ, ಡಿಸೆಂಬರ್ 10: "ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಆದರೆ ನಾವು ಗೆದ್ದೇ ಗೆಲ್ಲುತ್ತೇವೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸವಾಲು ಹಾಕಿದ್ದಾರೆ.
ಗುರುವಾರ ಬಂಗಾಳದ ಡೈಮಂಡ್ ಹಾರ್ಬರ್ ಗೆ ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ತೆರಳುತ್ತಿದ್ದ ಸಂದರ್ಭ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಘಟನೆಗೆ ಟಿಎಂಸಿ ಕಾರಣ ಎಂದು ಆರೋಪಿಸಿ, "ಈ ಘಟನೆಯಿಂದ ಟಿಎಂಸಿ ನಿಜ ಬಣ್ಣ ಬಯಲಾಗಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್ ಹೇಳಿಕೆ ನೀಡಿದ್ದರು.
ಈ ಘಟನೆಯ ಬೆನ್ನಲ್ಲೇ ನಡ್ಡಾ ಹೇಳಿಕೆ ನೀಡಿದ್ದಾರೆ. "ಮಮತಾ ದೀದಿ ಯಾವಾಗಲೂ ಬಿಜೆಪಿ ಗೆಲ್ಲುವುದಿಲ್ಲ ಎನ್ನುತ್ತಿರುತ್ತಾರೆ. ಆದರೆ ನಾವು ಗೆಲ್ಲುವುದು ಖಚಿತ. ಅವರಿಗೂ ತಮ್ಮ ಸ್ಥಾನ ಅಭದ್ರವಾಗಿರುವುದು ಗೊತ್ತಾಗಿದೆ" ಎಂದಿದ್ದಾರೆ. ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿ, "ನಮ್ಮ ಪಕ್ಷವು ಇಂಥ ಸಾವಿರ ಸವಾಲುಗಳನ್ನು ಎದುರಿಸಲು ಸಿದ್ಧವಿದೆ. ಹಾಗೆಯೇ ಇವೆಲ್ಲವನ್ನು ಮೀರಿ ನಾವು ಗೆಲ್ಲುತ್ತೇವೆ" ಎಂದು ಸವಾಲು ಹಾಕಿದರು.

"ಚುನಾಯಿತ ಪ್ರತಿನಿಧಿಗಳೇ ಇಲ್ಲಿ ಸುರಕ್ಷಿತವಾಗಿಲ್ಲ ಎಂದರೆ ಸಾಮಾನ್ಯ ಜನರ ಕಥೆಯೇನು? ಇಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಇಡೀ ವ್ಯವಸ್ಥೆಯೇ ನಾಶವಾಗಿ ಹೋಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. "ಮಮತಾ ಬ್ಯಾನರ್ಜಿ ಕಾರ್ಯ ನಿರ್ವಹಿಸುವ ಶೈಲಿಯೇ ಇದಾಗಿದ್ದರೆ, ಈ ಸರ್ಕಾರಕ್ಕೆ ವಿದಾಯ ಹೇಳುವ ಸಮಯವೂ ಬಂದಿದೆ" ಎಂದು ಹೇಳಿದರು.
ಅಂಫಾನ್ ಚಂಡಮಾರುತದ ಪರಿಹಾರ ಹಾಗೂ ಕೋವಿಡ್ 19 ನಿರ್ವಹಣೆಗೆಂದು ಕೇಂದ್ರ ಸರ್ಕಾರ ನೀಡಿದ್ದ ಹಣವನ್ನೂ ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಈ ಹಣದ ಲೆಕ್ಕವಿಡದೆ ಸುಪ್ರೀಂ ಕೋರ್ಟ್ ಗೆ ಪ್ರಕರಣ ತಲುಪಿದೆ. ಇದರ ಅರ್ಥ ಒಂದೇ, ಭ್ರಷ್ಟಾಚಾರ. ರೈತರ ಕಲ್ಯಾಣಕ್ಕಾಗಿ ಕೇಂದ್ರದಿಂದ ನೀಡಲಾಗಿದ್ದ ಹಣವೂ ಇಲ್ಲಿನ 70 ಲಕ್ಷ ರೈತರಿಗೆ ತಲುಪಿಲ್ಲ ಎಂದು ದೂರಿದರು.












Click it and Unblock the Notifications