ತಪಾಸಣೆ ಇಲ್ಲದೆ ಊರು ಸುತ್ತಿದ್ದ IAS ಅಧಿಕಾರಿಯ ಕೊರೊನಾ ಸೋಂಕಿತ ಪುತ್ರ!
ಕೋಲ್ಕತ್ತಾ, ಮಾರ್ಚ್ 19: ಮೊನ್ನೆಯಷ್ಟೇ ಮೊಟ್ಟ ಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಪತ್ತೆ ಆಯ್ತು. ಯುಕೆ (ಇಂಗ್ಲೆಂಡ್) ನಿಂದ ವಾಪಸ್ ಆಗಿದ್ದ 18 ವರ್ಷದ ವಿದ್ಯಾರ್ಥಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪಶ್ಚಿಮ ಬಂಗಾಳದಲ್ಲಿ ದೃಢ ಪಟ್ಟಿತ್ತು.
ಕೊರೊನಾ ಪೀಡಿತ ಇಂಗ್ಲೆಂಡ್ ನಿಂದ ವಾಪಸ್ ಆಗಿದ್ದರೂ, ಆ ಯುವಕ ಮೊದಲು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳದೆ ಕೊಲ್ಕತ್ತಾ ಸುತ್ತಾಡಿದ್ದಾನೆ. ಸಾಲದಕ್ಕೆ ಶಾಪಿಂಗ್ ಮಾಲ್ ಗೂ ತೆರಳಿ ಹಲವರ ಸಂಪರ್ಕಕ್ಕೆ ಬಂದಿದ್ದಾನೆ.
ಅಸಲಿಗೆ ಆ ಯುವಕನ ತಾಯಿ ಐಎಎಸ್ ಆಫೀಸರ್. ಹೀಗಿದ್ದರೂ, ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸದ ಯುವಕ ಮತ್ತು ತಾಯಿಯ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಕೆ ಇಂದ ಬಂದಿದ್ದ ಯುವಕ
ಮಾರ್ಚ್ 15 ರಂದು ಯು.ಕೆ ಇಂದ ಯುವಕ ಭಾರತಕ್ಕೆ ಬಂದಿದ್ದ. ಪಶ್ಚಿಮ ಬಂಗಾಳದ ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯ ಪುತ್ರ ಯು.ಕೆಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿಳಿದಾಗ, ಆತನಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬರಲಿಲ್ಲ. ಹೀಗಾಗಿ, ಏರ್ ಪೋರ್ಟ್ ನಲ್ಲಿ ನಡೆಸಲಾದ ಥರ್ಮಲ್ ಸ್ಕ್ಯಾನರ್ ಟೆಸ್ಟ್ ನಲ್ಲಿ ಪಾಸ್ ಆಗಿದ್ದ.

ಎಲ್ಲಾ ಗೊತ್ತಿದ್ದರೂ, ತಪಾಸಣೆ ಮಾಡಿಸಲಿಲ್ಲ
ಲಂಡನ್ ನಲ್ಲಿ ಯುವಕನ ಸ್ನೇಹಿತರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಯುವಕನ ಕುಟುಂಬಕ್ಕೆ ತಿಳಿದುಬಂದಿದೆ. ಆದರೂ, ಯುವಕನಿಗೆ ವೈದ್ಯಕೀಯ ತಪಾಸಣೆ ಮಾಡಿಸಲು ಮೊದಲ ಎರಡು ದಿನ ಕುಟುಂಬ ಮುಂದಾಗಲಿಲ್ಲ. ಕೊರೊನಾ ಭೀತಿಯ ನಡುವೆಯೂ ಆ ಯುವಕ ಕೊಲ್ಕತ್ತಾದ ಮಾಲ್ ಗಳಿಗೆ ಭೇಟಿ ನೀಡಿದ್ದ. ಬಳಿಕ ಮಾರ್ಚ್ 17 ರಂದು ಆ ಯುವಕನಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢ ಪಟ್ಟಿದೆ.

ಆಕ್ರೋಶಗೊಂಡ ಮಮತಾ ಬ್ಯಾನರ್ಜಿ
ಕೊರೊನಾ ಪೀಡಿತ ದೇಶದಿಂದ ಮರಳಿದ್ದರೂ, ಸಾಮಾಜಿಕ ಜವಾಬ್ದಾರಿ ಮೆರೆಯದ ಐಎಎಸ್ ಅಧಿಕಾರಿ ಮತ್ತು ಪುತ್ರನ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ''ವಿದೇಶಗಳಿಂದ ಕೊಲ್ಕತ್ತಾಗೆ ಯಾರೇ ಮರಳಿದರೂ ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಬೇಕು. ವಿವಿಐಪಿ, ವಿಐಪಿ ಸಂಸ್ಕೃತಿಯನ್ನು ನಾನು ಸಹಿಸಿಕೊಳ್ಳುವುದಿಲ್ಲ'' ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಯಾರು ಹೊಣೆ.?
''ವಿದೇಶದಿಂದ ಬಂದು ಪರೀಕ್ಷೆಗೆ ಒಳಪಡದೆ ಶಾಪಿಂಗ್ ಮಾಲ್ ಗಳಿಗೆ ಹೋಗಿರುವುದರಿಂದ ನೂರಾರು ಜನರಿಗೆ ಸೋಂಕು ತಗುಲುವ ಅಪಾಯ ಇದೆ. ಇದಕ್ಕೆ ಯಾರು ಹೊಣೆ.? ಇದು ಬೇಜವಾಬ್ದಾರಿ ವರ್ತನೆ. ಇಂತಹ ಪ್ರಕರಣ ನನ್ನ ಕುಟುಂಬದಲ್ಲಿ ನಡೆದಿದ್ದರೆ, ನಾನು ಈ ರೀತಿ ವರ್ತಿಸುತ್ತಿರಲಿಲ್ಲ'' ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ಯುವಕನಿಗೆ ಚಿಕಿತ್ಸೆ
ಆ ಯುವಕನನ್ನು ಸದ್ಯ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಕುಟುಂಬದವರಿಗೆ ಮನೆಯಲ್ಲೇ ಇರಲು ಸೂಚಿಸಲಾಗಿದೆ. ಇಂಗ್ಲೆಂಡ್ ನಿಂದ ವಾಪಸ್ ಆದ ಬಳಿಕ ಎರಡು ದಿನಗಳ ಕಾಲ ಆ ಯುವಕ ಎಲ್ಲೆಲ್ಲಿ ಹೋಗಿದ್ದ, ಯಾರ್ಯಾರನ್ನ ಸಂಪರ್ಕಿಸಿದ್ದ ಎನ್ನುವ ಕುರಿತು ಸದ್ಯ ಮಾಹಿತಿ ಕಲೆಹಾಕಲಾಗುತ್ತಿದೆ.












Click it and Unblock the Notifications