ಬಿಜೆಪಿಗೆ ಟಿಎಂಸಿ ಶಾಸಕರ ಸಾಮೂಹಿಕ ಸೇರ್ಪಡೆಗೆ ಬ್ರೇಕ್
ಕೋಲ್ಕತ್ತಾ, ಫೆಬ್ರವರಿ 2: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಣದಲ್ಲಿ ಪಕ್ಷಾಂತರಿಗಳ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಬಿಜೆಪಿ ವರಿಷ್ಠರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ಮುಂದೆ ಯಾವುದೇ ಕಾರಣಕ್ಕೂ ಸಾಮೂಹಿಕವಾಗಿ ಬೇರೆ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳದಿರಲು ನಿರ್ಧರಿಸಲಾಗಿದೆ. ಸ್ಥಳೀಯ ಮುಖಂಡರ ಮನವಿ ಮೇರೆಗೆ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಸಾಮೂಹಿಕವಾಗಿ ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಿರುವುದು ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಕಿರಿಕಿರಿ ಉಂಟು ಮಾಡಿತ್ತು ಎಂಬ ಸುದ್ದಿಯಿದೆ.
ಟಿಎಂಸಿಯ ಬಿ ಟೀಂ ಆಗಬಾರದು:
''ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಟಿಎಂಸಿಯ ಬಿ ಟೀಂ ಆಗದಂತೆ ತಡೆಯಲು ಈ ನಿರ್ಧಾರ ಅನಿವಾರ್ಯವಾಗಿತ್ತು. ಅಲ್ಲದೆ, ಬಿಜೆಪಿ ತನ್ನ ಸ್ವಚ್ಛ, ಪಾರದರ್ಶಕ ಇಮೇಜ್ ಉಳಿಸಿಕೊಂಡು ಚುನಾವಣೆ ಎದುರಿಸಲಿದೆ, ಅಕ್ರಮ ಚಟುವಟಿಕೆ, ಹಗರಣ ಮುಕ್ತ ಅಭ್ಯರ್ಥಿಗಳನ್ನೇ ಮತದಾರರು ಆಯ್ಕೆಮಾಡುವಂತಾಗಬೇಕು'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದಾರೆ.

ಟಿಎಂಸಿಯಿಂದ ಹೊಸಬರ ಸೇರ್ಪಡೆ ಹೆಚ್ಚಾದಂತೆ ಜಿಲ್ಲಾ ಮಟ್ಟದ ಕಾರ್ಯಕರ್ತರ ನಡುವೆ ತಿಕ್ಕಾಟ ಉಂಟಾಗಿದ್ದು, ಆಂತರಿಕ ಕಲಹ ಹೆಚ್ಚಾಗದಂತೆ ಮುಂಜಾಗ್ರತೆ ವಹಿಸಿ, ಸ್ಥಳೀಯ ಮುಖಂಡರು ಈ ಬಗ್ಗೆ ಕೇಂದ್ರ ನಾಯಕರಿಗೆ ತಿಳಿಸಿದ್ದಾರೆ. ಹೀಗಾಗಿ, ಹೊಸಬರನ್ನು ಸೇರಿಸಿಕೊಳ್ಳುವ ಮೊದಲು ಅವರ ಹಿನ್ನೆಲೆ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ, ಜಿಲ್ಲಾ ಮಟ್ಟದ ಮುಖಂಡರಿಂದ ಹಸಿರು ನಿಶಾನೆ ಸಿಕ್ಕಿದ ಬಳಿಕ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದರು.
ಬಿಜೆಪಿಗೆ ವಲಸೆ ಬಂದವರ ಲೆಕ್ಕ:
2019ರ ಲೋಕಸಭೆ ಚುನಾವಣೆ ನಂತರ ತೃಣಮೂಲ ಕಾಂಗ್ರೆಸ್ ನಿಂದ ಸುಮಾರು 18 ಶಾಸಕರು, ಒಬ್ಬ ಸಂಸದರು ಬಿಜೆಪಿಗೆ ವಲಸೆ ಬಂದಿದ್ದಾರೆ. ಸಿಪಿಐಎಂನಿಂದ ಮೂವರು ಹಾಗೂ ಕಾಂಗ್ರೆಸ್ ಮತ್ತು ಸಿಪಿಐನಿಂದ ತಲಾ ಒಬ್ಬ ಶಾಸಕರು ಬಿಜೆಪಿ ಸೇರಿದ್ದಾರೆ. ಸುವೇಂದು ಅಧಿಕಾರಿ ಹಾಗೂ ರಜಿಬ್ ಬ್ಯಾನರ್ಜಿ ಪ್ರಮುಖ ಮುಖಂಡರಾಗಿದ್ದು, ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಿಕ್ಕವರು ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ.
"ಶಾಸಕರ ಖರೀದಿ ವ್ಯಾಪಾರ ಮಾಡುವವರಿಗೆ ತಡವಾಗಿ ಭಯ ಆವರಿಸಿದೆ, ಬೆಂಗಾಳದಲ್ಲಿ ಸೋಲೊಪ್ಪಿಕೊಳ್ಳುವ ಕಾಲ ಸನಿಹದಲ್ಲಿದೆ'' ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸೌಗತ ರಾಯ್ ಪ್ರತಿಕ್ರಿಯಿಸಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದ ವಿಧಾನಸಭೆಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಟಿಎಂಸಿ ವಿರುದ್ಧ ಬಿಜೆಪಿ ನೇರ ಸ್ಪರ್ಧಿಗಿಳಿದಿದೆ.












Click it and Unblock the Notifications