ಅಮಿತ್ ಶಾ ರೋಡ್ ಶೋ: ಭಾರೀ ಹಿಂಸಾಚಾರ, ಕೋಲ್ಕತ್ತಾದಲ್ಲಿ ಘರ್ಷಣೆ, ಕಲ್ಲು ತೂರಾಟ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಮೇ 14: ಮೋಟಾರ್ ಸೈಕಲ್ ಗೆ ಬೆಂಕಿ ಹೊತ್ತಿಸಿ, ಕಲ್ಲು ತೂರಾಟ ನಡೆಸಿ, ಸಮಾಜ ಸುಧಾರಕರಾದ ಈಶ್ವರಚಂದ್ರ ವಿದ್ಯಾಸಾಗರ ಅವರ ಪುತ್ಥಳಿಗೆ ಹಾನಿಯಾದ ಘಟನೆ ಮಂಗಳವಾರ ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ನಂತರ ನಡೆದಿದೆ. ಎರಡು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದ್ದು, ಅದಕ್ಕೆ ಬಿಜೆಪಿ ಹಾಗೂ ಟಿಎಂಸಿ ಪರಸ್ಪರ ಆರೋಪ ಮಾಡಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅವರ (ಬಿಜೆಪಿ) ನಡವಳಿಕೆಗೆ ನಾನು ಕ್ಷಮೆ ಕೇಳುತ್ತೇನೆ. ರೋಡ್ ಶೋ ನಡೆಸುವುದಕ್ಕೆ ಪೊಲೀಸರು ಏಕೆ ಅನುಮತಿ ನೀಡಿದರು? ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ಹಿಂಸಾಚಾರದ ಘಟನೆ ವರದಿಯಾದ ಕೆಲವೇ ನಿಮಿಷದಲ್ಲಿ ಈ ಪ್ರತಿಕ್ರಿಯೆ ಬಂದಿದ್ದು, ದಕ್ಷಿಣ ಕೋಲ್ಕತ್ತಾದ ಬೆಹಲ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ಮಮತಾ ಮಾತನಾಡಿದ್ದಾರೆ.
ಒಂದು ವೇಳೆ ಬಂಗಾಲದ ಸಂಸ್ಕೃತಿಗೆ ಹಾನಿ ಮಾಡುವಂತೆ ಬಿಜೆಪಿಯವರು ನಡೆದುಕೊಂಡರೆ ನನಗಿಂತ ಅಪಾಯಕಾರಿ ಯಾರೂ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಟೀವಿ ಚಾನಲ್ ಗಳ ಜತೆಗೆ ಮಾತನಾಡಿದ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ನ ಬೆಂಬಲಿಗರು ಎರಡು ಸ್ಥಳಗಳಲ್ಲಿ ಕಪ್ಪು ಬಾವುಟ ಹಿಡಿದು ಬಂದು, ದಾಳಿ ನಡೆಸಿದ್ದಾರೆ ಹೇಳಿದ್ದಾರೆ.
ಸ್ವಲ್ಪ ಮುಂಚಿತವಾಗಿ ಆ ಸ್ಥಳವನ್ನು ಬಿಟ್ಟಿದ್ದರು
ರೋಡ್ ಶೋ ನಂತರ ಸ್ವಾಮಿ ವಿವೇಕಾನಂದ ಪೂರ್ವಜರ ಮನೆಗೆ ಭೇಟಿ ನೀಡಲು ನಿರ್ಧಾರ ಆಗಿತ್ತು. ಆದರೆ ಪೊಲೀಸರು ನನ್ನ ಕಾರಲ್ಲಿ ಬೇರೆ ಮಾರ್ಗದಿಂದ ತೆರಳುವಂತೆ ಸೂಚಿಸಿದರು ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಸಿ ಕೈಲಾಶ್ ವಿಜಯ್ ವರ್ಗೀಯ ಮಾತನಾಡಿ, ನಮಗೆ ಈ ಸಮಸ್ಯೆ ಬಗ್ಗೆ ಅಂದಾಜಿರಲಿಲ್ಲ. ಸ್ವಲ್ಪ ಮುಂಚಿತವಾಗಿ ಆ ಸ್ಥಳವನ್ನು ಬಿಟ್ಟಿದ್ದೆವು ಎಂದಿದ್ದಾರೆ.
ಹಿಂಸಾಚಾರ ಆರಂಭ ಆಗಿದ್ದು ಹೇಗೆ ಎಂಬ ಸ್ಪಷ್ಟತೆ ಇಲ್ಲ
ಹಿಂಸಾಚಾರ ಆರಂಭ ಆಗಿದ್ದು ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಎಎನ್ ಸಿ ಸುದ್ದಿ ಸಂಸ್ಥೆ ಪ್ರಕಾರ, ಕೆಲವು ದುಷ್ಕರ್ಮಿಗಳು ಕಾಲೇಜು ಬಡಾವಣೆ ಬಳಿ ಕೋಲು ತೂರಲು ಆರಂಭಿಸಿದರು. ಆ ಮಾರ್ಗದಲ್ಲಿ ಅಮಿತ್ ಶಾ ಸಾಗಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು ಕಲ್ಲು ಹಾಗೂ ಕೋಲನ್ನು ವಿ.ವಿ. ಗೇಟ್ ನತ್ತ ತೂರಿದ್ದಾರೆ.
ನಾಲ್ಕು ಕಿ.ಮೀ. ರೋಡ್ ಶೋ ನಡೆಸಿದ ಅಮಿತ್ ಶಾ
ಪರಿಸ್ಥಿತಿ ಹದಗೆಡುತ್ತಿದ್ದಂತೆ ಆಲ್ ಇಂಡಿಯಾ ತೃಣಮೂಲ ವಿದ್ಯಾರ್ಥಿ ಕಾಂಗ್ರೆಸ್ ಒಕ್ಕೂಟದ ಕಾರ್ಯಕರ್ತರನ್ನು ವಿಶ್ವವಿದ್ಯಾನಿಲಯದೊಳಗೆ ನೂಕಿ, ಗೇಟ್ ಹಾಕಿದ್ದಾರೆ. ಅಮಿತ್ ಶಾ ಒಟ್ಟು ನಾಲ್ಕು ಕಿ.ಮೀ. ರೋಡ್ ಶೋ ನಡೆಸಿದ್ದಾರೆ. ಅದರಲ್ಲಿ ಕಾಲೇಜು ಬಡಾವಣೆಯು ರೋಡ್ ಶೋ ಮುಕ್ತಾಯ ಹಂತದ ಕೊನೆ ಭಾಗದಲ್ಲಿ ಬರುತ್ತದೆ.
ಟಿಎಂಸಿ ಹಾಗೂ ಬಿಜೆಪಿ ಬೆಂಬಲಿಗರಿಂದ ಪರಸ್ಪರ ಕಲ್ಲು ತೂರಾಟ
ವಿ.ವಿ. ಒಳಗಿಂದಲೇ ವಿದ್ಯಾರ್ಥಿಗಳು ಚೌಕಿದಾರ್ ಚೋರ್ ಹೈ ಎಂದು ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು ಜೈ ಶ್ರೀರಾಮ್ ಎಂದು ಕೂಗುತ್ತಿದ್ದರು. ನಾಕಾಬಂದಿಯನ್ನು ಕೆಡವಿ, ವಿ.ವಿ.ಯೊಳಗೆ ನುಗ್ಗಲು ಬಿಜೆಪಿ ಬೆಂಬಲಿಗರು ಪ್ರಯತ್ನಿಸಿದ್ದು, ಲಘು ಲಾಠಿ ಪ್ರಹಾರ ಮಾಡುವ ಮೂಲಕ ಆ ಪ್ರಯತ್ನವನ್ನು ಪೊಲೀಸರು ತಡೆದರು. ಈ ಮಧ್ಯೆ ಬಿಜೆಪಿಯ ಕೆಲವು ಬೆಂಬಲಿಗರು ತೃಣಮೂಲ ಕಾಂಗ್ರೆಸ್ ಬೆಂಬಲಿಗರತ್ತ ಬಾಟಲಿ, ಕಲ್ಲು ತೂರಿದ್ದಾರೆ. ಈ ವೇಳೆ ಟಿಎಂಸಿ ಬೆಂಬಲಿಗರು ಸಹ ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದಾರೆ.