ವರ್ತೂರು ಪ್ರಕಾಶ್ ಅಪಹರಣ ಪ್ರಕರಣ; ಪ್ರಮುಖ ಆರೋಪಿ ಬಂಧನ
ಕೋಲಾರ, ಜನವರಿ 25: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ 6 ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪಹರಣ ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಆರೋಪಿ ರೋಹಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿ ಎ1 ಆಗಿದ್ದಾನೆ. ತಮಿಳುನಾಡಿನ ಹೊಸೂರಿನಿಂದ ಆರೋಪಿ ತಪ್ಪಿಸಿಕೊಂಡಿದ್ದ. ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬೆಂಗಳೂರು ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ರೋಹಿತ್ನನ್ನು ಬಂಧಿಸಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

2020ರ ನವೆಂಬರ್ 26ರಂದು ಕೋಲಾರದ ಬೆಗ್ಲಿಹೊಸಹಳ್ಳಿ ತೋಟದ ಮನೆಯ ಬಳಿಯಿಂದ ವರ್ತೂರು ಪ್ರಕಾಶ್ ಅಪಹರಣ ಮಾಡಲಾಗಿತ್ತು. ಡಿಸೆಂಬರ್ 3ರಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಕವಿರಾಜ್, ಲಿಖಿತ್, ಮನೋಜ್, ರಾಘವೇಂದ್ರ, ಪ್ರವೀಣ್ ಬಂಧನವಾಗಿದೆ. ಕವಿರಾಜ್ ಅಪಹರಣದ ಯೋಜನೆಯನ್ನು ರೂಪಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು.
ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧ ಕಡೆ ಕವಿರಾಜ್ ವಿರುದ್ಧ 10 ಅಪಹರಣ ಪ್ರಕರಣ ದಾಖಲಾಗಿದೆ. ವರ್ತೂರು ಪ್ರಕಾಶ್ ಅಪಹರಣ ಮಾಡಿದರೆ ಕೋಟಿ ಕೋಟಿ ಹಣ ಸಿಗುತ್ತದೆ ಎಂದು ಅವರನ್ನು ಅಪಹರಣ ಮಾಡಿರಬಹುದು ಎಂಬ ಶಂಕೆ ಇದ್ದು, ತನಿಖೆ ನಡೆಯುತ್ತಿದೆ.
ಕೋಲಾರ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್ ಹೌಸ್ನಿಂದ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಲು ವರ್ತೂರು ಪ್ರಕಾಶ್ ಹೊರಟಿದ್ದರು. ತೋಟದ ಮನೆಯಿಂದ ಅರ್ಧ ಕಿ. ಮೀ. ಸಾಗುವ ವೇಳೆಗೆ ಮುಂದೆ ಮತ್ತು ಹಿಂದೆ ಒಂದೊಂದು ಕಾರಿನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳು ಅವರನ್ನು ಅಪಹರಣ ಮಾಡಿದ್ದರು.
ಕಾರಿನಲ್ಲಿ ವರ್ತರು ಪ್ರಕಾಶ್ ಮತ್ತು ಅವರ ಚಾಲಕನನ್ನು ಸುತ್ತಾಡಿಸಿದ್ದರು. 30 ಕೋಟಿ ಹಣ ನೀಡುವಂತೆ ಚಿತ್ರಹಿಂಸೆ ನೀಡಿದ್ದರು. ಸ್ನೇಹಿತರ ಸಹಾಯದಿಂದ ವರ್ತೂರು ಪ್ರಕಾಶ್ ಅಪಹರಣಕಾರರಿಗೆ 50 ಲಕ್ಷ ನೀಡಿದ್ದರು. ಆದರೆ, ಹೆಚ್ಚಿನ ಹಣ ನೀಡುವಂತೆ ಪುನಃ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.












Click it and Unblock the Notifications