ಕರ್ತವ್ಯ ನಿರ್ಲಕ್ಷಿಸಿದ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳ ಅಮಾನತು ಮಾಡಿದ ಕೋಲಾರ ಎಸ್ಪಿ
ಕೋಲಾರ, ಜನವರಿ 31: ಕರ್ತವ್ಯ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಆನಂದ್ ಕುಮಾರ್ ಮತ್ತು ಡಿಆರ್ ವಿಭಾಗದ ಸರ್ವೇಶ್ ಎಂಬ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಿ. ದೇವರಾಜ್ ತಿಳಿಸಿದರು.
ಕೋಲಾರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಿ. ದೇವರಾಜ್, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಆನಂದ್ ಕುಮಾರ್ ಮತ್ತು ಡಿಆರ್ ವಿಭಾಗದ ಸರ್ವೇಶ್ ಅಮಾನತುಗೊಂಡ ಪೊಲೀಸ್ ಪೇದೆಗಳು. ಮಗ ಕಾಣೆಯಾಗಿದ್ದಾನೆಂದು ಪೋಷಕರು ದೂರು ನೀಡಲು ಕೋಲಾರ ಗ್ರಾಮಾಂತರ ಠಾಣೆಗೆ ಬಂದಾಗ ದೂರು ತೆಗೆದುಕೊಳ್ಳದೆ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳಿ ದೂರು ದಾಖಲಿಸದೇ ಆನಂದ್ ಕುಮಾರ್ ಸತಾಯಿಸುತ್ತಿದ್ದರು.
ಮೂರು ದಿನಗಳ ಬಳಿಕ ಕಾಣೆಯಾಗಿದ್ದಾತ ಬೇರೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಗಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಪೇದೆ ಆನಂದ್ ಕುಮಾರ್ರನ್ನು ಅಮಾನತುಗೊಳಿಸಲಾಗಿದೆ.

ಅದೇ ರೀತಿ ಡಿಆರ್ ವಿಭಾಗದ ಪೊಲೀಸ್ ಪೇದೆ ಸರ್ವೇಶ್ ಕರ್ತವ್ಯಕ್ಕೆ ಹಾಜರಾಗದೆ ತಿಂಗಳುಗಳ ಕಾಲ ರಜೆ ಪಡೆಯುತ್ತಿದ್ದ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ರಜೆ ಪಡೆಯುತ್ತಲೇ ಇದ್ದ. ಹೀಗಾಗಿ ಕರ್ತವ್ಯ ಲೋಪ ಎಸಗಿದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಿ. ದೇವರಾಜ್ ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಮಾತನಾಡಿದ ಎಸ್ಪಿ ಡಿ. ದೇವರಾಜ್, ಕೋಲಾರ ಜಿಲ್ಲೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಆದರೂ ಒನ್ ವೇನಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸರನ್ನೇ ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಹಾಗಾಗಿ ಸಂಚಾರಿ ಪೊಲೀಸ್ ಪೇದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಸ್ಎಫ್ಐ ಸಂಘಟನೆ ಅಧ್ಯಕ್ಷ ಮುಳಬಾಗಿಲು ಮೂಲದ ವಾಸುದೇವರೆಡ್ಡಿ ಸೇರಿದಂತೆ ಇಬ್ಬರ ಮೇಲೆ ದೂರು ದಾಖಲಾಗಿದ್ದು, ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಹಲವು ಕಡೆ ಕೈಗಾರಿಕಾ ಪ್ರದೇಶಗಳಿವೆ. ಆದ್ರೆ ಕೆಲವು ಸಂಘಟನೆಗಳು ಕೈಗಾರಿಕೆಗಳಿಗೆ ತೆರಳಿ ತೊಂದರೆ ಕೊಡ್ತಿದ್ದಾರೆ ಎಂಬ ಆರೋಪ ಕೇಳಿಬುರುತ್ತಿದೆ. ಇತ್ತೀಚೆಗೆ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂಘಟನೆಯ ಹೆಸರೇಳಿ ಹಣ ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು ಮುಂದೆ ಸಂಘಟನೆಗಳ ಹೆಸರೇಳಿ ಅಥವಾ ಸಂಘಟನೆಯವರೇ ಅನಾವಶ್ಯಕವಾಗಿ ಕಂಪನಿಗಳಿಗೆ ತೊಂದರೆ ಕೊಟ್ಟರೆ ಅಂತಹ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಡಿ. ದೇವರಾಜ್ ಎಚ್ಚರಿಕೆ ನೀಡಿದರು.
ಇನ್ನು ಇದೇ ವೇಳೆ ವೇಮಗಲ್ ಹೋಬಳಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ವೇಮಗಲ್ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದರು. ತಮಿಳುನಾಡು ಮೂಲದ ನರಸಿಂಹ ಅಲಿಯಾಸ್ ಪುಸಲು ಬಂಧಿತ ಆರೋಪಿ.
ಬಂಧಿತನಿಂದ ಅಂದಾಜು 20 ಲಕ್ಷ ಮೌಲ್ಯದ 27 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಶಸ್ವಿ ಕಾರ್ಯಾಚರಣೆ ಮಾಡಿದ ವೇಮಗಲ್ ಠಾಣೆಯ ಸಿಬ್ಬಂದಿಯನ್ನು ಕೋಲಾರ ಎಸ್ಪಿ ಡಿ. ದೇವರಾಜ್ ಶ್ಲಾಘಿಸಿದರು.
ವಿಕಲಚೇತನ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್ಐಗೆ ಜೈಲು ಶಿಕ್ಷೆ
ವಿಕಲಚೇತನ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್ಐಗೆ ಜೈಲು ಶಿಕ್ಷೆ ವಿಧಿಸಿ ತುಮಕೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಎಎಸ್ಐ ಉಮೇಶಯ್ಯಗೆ 20 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಸೂಚನೆ ಕೊಡಲಾಗಿದೆ. 2017ರ ಜ.15 ರಂದು ASI ಉಮೇಶಯ್ಯ ಅತ್ಯಾಚಾರವೆಸಗಿದ್ದ. ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ಕೃತ್ಯವೆಸಗಿದ್ದ. ತುಮಕೂರು ಗ್ರಾಮಾಂತರ ಠಾಣೆ ಎಎಸ್ಐ ಆಗಿದ್ದ ಉಮೇಶಯ್ಯ ದುಷ್ಕೃತ್ಯಕ್ಕೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದ ಘಟನೆ ಅಂದು ನಡೆದಿತ್ತು. ಬೊಲೆರೊ ವಾಹನದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಸಂತ್ರಸ್ತ ವಿಶೇಷಚೇತನೆಯ ಸಂಬಂಧಿಕರು ಈ ಬಗ್ಗೆ ದೂರು ನೀಡಿದ್ದರು. ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಎಎಸ್ಐ ರೇಪ್ ಕೇಸ್ ಸಂಬಂಧ ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು. ಎಎಸ್ಐ ಉಮೇಶಯ್ಯಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಜಡ್ಜ್ ಹೆಚ್.ಎಸ್. ಮಲ್ಲಿಕಾರ್ಜುನಸ್ವಾಮಿಯಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ.












Click it and Unblock the Notifications