ಕೋಲಾರ; ಸಕಲ ಗೌರವದಿಂದ ಯೋಧ ಮಂಜುನಾಥ ಅಂತ್ಯಕ್ರಿಯೆ
ಕೋಲಾರ, ಫೆಬ್ರವರಿ 03: ದೇಶ ಕಾಯುವ ಯೋಧ ಎಂದರೆ ಎಲ್ಲರಿಗೂ ಅದೇನೋ ಗೌರವ. ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ದುಡಿಯುವ ಯೋಧನಿಗೆ ಕೋಟಿ ನಮನ ಸಲ್ಲಿಸಿದರು ಸಾಲದು. ಇಂಥದೇ ಒಬ್ಬ ಯೋಧನ ಕಥೆ ಇಲ್ಲಿದೆ ನೋಡಿ.
ದೇಶಕ್ಕಾಗಿ ದುಡಿದು ಸೇನೆಯಿಂದ ನಿವೃತ್ತಿ ಹೊಂದಿದ ಈ ಯೋಧ ತನ್ನ ಊರಿಗೆ ಬಂದು ನೆಮ್ಮದಿಯಿಂದ ಬದುಕ ಬೇಕು ಎಂದು ಕೊಂಡಿರುವ ಸಮಯದಲ್ಲಿಯೇ ವಿಧಿ ಕ್ರೂರ ಆಟವನ್ನು ಆಡಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದ ಮಂಜುನಾಥ 17 ವರ್ಷ ದೇಶಕ್ಕಾಗಿ ದುಡಿದು, ಸೇನೆಯಿಂದ ನಿವೃತ್ತಿ ಪಡೆದು ಮನೆಗೆ ಮರಳಿದ್ದರು. ಹೃದಯಾಘಾತದಿಂದ ಮೃತಪಟ್ಟರು.
ಮಂಜುನಾಥ ಕೋಲಾರಕ್ಕೆ ಆಗಮಿಸಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಹ ಜೀವನ ನಡೆಸಲು ನೂರಾರು ಕನಸುಗಳನ್ನು ಹೊತ್ತು ಬಂದಿದ್ದರು. ಆದರೆ, ಮಂಗಳವಾರ ಹೃದಯಘಾತದಿಂದ ಸಾವನ್ನಪ್ಪಿದ್ದರು. ಅವರ ಸಾವಿಗೆ ಇಡೀ ಜಿಲ್ಲೆ ಕಂಬನಿ ಮಿಡಿದಿದೆ.

ಫೆಬ್ರವರಿ 1ರಂದು ನಿವೃತ್ತಿಯಾಗಿ ಮನೆಗೆ ಬಂದ ಯೋಧನ ಅಕಾಲಿಕ ಸಾವು ನಿಜಕ್ಕೂ ಮನಕಲಕುವಂತಿದೆ. ಪತ್ನಿ ಅಶ್ವಿನಿ ಗಂಡನಿಗಾಗಿ 6 ತಿಂಗಳಿಂದ ಕಾದಿದ್ದರು. ಮಕ್ಕಳು ಕೂಡ ತಂದೆಯ ಆಗಮನಕ್ಕಾಗಿ ದಿನಗಳನ್ನು ಎಣಿಸುತ್ತಿದ್ದರು. ದೇಶ ಸೇವೆ ಮಾಡಿ ವಾಪಸ್ ಬಂದ ಪತಿ ಹೀಗೆ ತನ್ನ ಮಡಿಲಲ್ಲೇ ಪ್ರಾಣ ಬಿಟ್ಟಿದ್ದು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎನ್ನುತ್ತಾರೆ ಅಶ್ವಿನಿ.
ನಿವೃತ್ತಿ ಪಡೆದ ಬಳಿಕ ಪತ್ನಿಯ ಇಚ್ಛೆಯಂತೆ ದೊಡ್ಡ ಮನೆ ಕಟ್ಟುವ ಆಲೋಚನೆಯನ್ನು ಮಂಜುನಾಥ ಮಾಡಿದ್ದರು. ಗಡಿಯಿಂದ ಬಂದ ಬಳಿಕ ತನ್ನ ಪತ್ನಿಯೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದ ಅವರು ತನ್ನ ಪುಟ್ಟ ಸಂಸಾರದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು.
ಆದರೆ, ಜವರಾಯ ಕುಟುಂಬದ ಸದಸ್ಯರ ಜೊತೆ ಒಂದು ದಿನ ಕಳೆಯುವ ಮುನ್ನವೇ ಎಲ್ಲಾ ಕನಸುಗಳಿಗೆ ತಡೆ ಹಾಕಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ರತ್ನಮ್ಮ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ವಗ್ರಾಮ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕೋಲಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ನ ಹತ್ತಾರು ಸದಸ್ಯರು ಮೃತ ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ತೆರೆದ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನೂರಾರು ಜನರು ರಸ್ತೆ ಅಕ್ಕ-ಪಕ್ಕನಿಂತು ಅಂತಿಮ ನಮನ ಸಲ್ಲಿಸಿದರು. ನಂತರ ಬೂದಿಕೋಟೆ ಬಳಿ ಇರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.












Click it and Unblock the Notifications