ಕೋಲಾರ : ಬಿಜೆಪಿಗೆ ಬಂಡಾಯದ ಬಿಸಿ, ಡಿ.ಎಸ್.ವೀರಯ್ಯ ನಾಮಪತ್ರ!
ಕೋಲಾರ, ಮಾರ್ಚ್ 25 : ಕೋಲಾರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಎಸ್.ವೀರಯ್ಯ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಸ್.ಮುನಿಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ ಅವರ ಹೆಸರುಗಳು ಸಹ ಕೇಳಿಬಂದಿತ್ತು. ಈಗ ಡಿ.ಎಸ್.ವೀರಯ್ಯ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಡಿ.ಎಸ್.ವೀರಯ್ಯ ಅವರು ಕುಂಬಾರಹಳ್ಳಿ ಗೇಟ್ ಬಳಿಕ ತಮ್ಮ ನಿವಾಸದಲ್ಲಿ ಭಾನುವಾರ ಬೆಂಬಲಿಗರ ಸಭೆ ನಡೆಸಿದರು. ಬಳಿಕ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ಮಧ್ಯಾಹ್ನ 12.30ಕ್ಕೆ ನಾಮಪತ್ರವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಡಾ.ಚಿ.ನಾ.ರಾಮು ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದಂತೆ ಡಿ.ಎಸ್.ವೀರಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರು, ಅಭಿಮಾನಿಗಳಿಗೂ ನಿರಾಸೆ ಆಗಿರುವುದು ನಿಜ. ಆದರೆ, ಪಕ್ಷ ಅಂತಿಮ ನಿರ್ಧಾರ ಕೈಗೊಂಡ ಮೇಲೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ. ನಾಮಪತ್ರ ಸಲ್ಲಿಸಲು ಮಾ.26 ಕೊನೆಯ ದಿನವಾಗಿದ್ದು, ಏಪ್ರಿಲ್ 18ರಂದು ಮತದಾನ ನಡೆಯಲಿದೆ.

ಪಕ್ಷ ಮೂಲೆಗುಂಪು ಮಾಡಿದೆ
'ಬಿಜೆಪಿ ಪಕ್ಷವು ನನ್ನನ್ನು ಮೂಲೆ ಗುಂಪು ಮಾಡಿದೆ. ಕೋಲಾರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಮುನಿಯಸ್ವಾಮಿ ಅವರನ್ನು ಘೋಷಣೆ ಮಾಡಲಾಗಿದೆ. ತಾವು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುತ್ತೇನೆ' ಎಂದು ಡಿ.ಎಸ್.ವೀರಯ್ಯ ಹೇಳಿದ್ದಾರೆ.

ಬಿ.ಫಾರಂ ಸಿಗುವ ಸಾಧ್ಯತೆ ಇದೆ
'ರಾಜ್ಯ ಬಿಜೆಪಿ ನಾಯಕರು ತಮ್ಮನ್ನು ಕಡೆಗಣಿಸಿದ್ದಾರೆ. ಪರಿಶಿಷ್ಟ ಜಾತಿಯ ನಾಯಕನನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಈಗಲೂ ನನಗೆ ಬಿಜೆಪಿ ಪಕ್ಷದಿಂದ ಬಿ.ಫಾರಂ ಸಿಗುವ ಸಾಧ್ಯತೆ ಇದೆ' ಎಂದು ಡಿ.ಎಸ್.ವೀರಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಬಿಡುವುದಿಲ್ಲ
'ಕೋಲಾರ ಜಿಲ್ಲಾ ಬಿಜೆಪಿಗೆ ಯಾವುದೇ ಕೊಡುಗೆಯನ್ನು ನೀಡದ ಮುನಿಸ್ವಾಮಿ ಅವರಿಗೆ ಟಿಕೆಟ್ ನೀಡಿರುವುದು ಅಚ್ಚರಿ ತಂದಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಕೇಂದ್ರ ನಾಯಕರು ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇದೆ' ಎಂದು ವೀರಯ್ಯ ಹೇಳಿದ್ದಾರೆ.

ಎರಡು ದಿನ ಕಾಯುವೆ
'ಸೋಮವಾರ ಮಧ್ಯಾಹ್ನ 12.30ಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಬಳಿಕ ಎರಡು ದಿನ ಕಾದು ನೋಡುತ್ತೇನೆ. ಬೆಂಬಲಿಗರು, ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇನೆ' ಎಂದು ಡಿ.ಎಸ್.ವೀರಯ್ಯ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಘೋಷಣೆ
ಕೋಲಾರ ಕ್ಷೇತ್ರದಿಂದ ಸೋಮವಾರ ಮಧ್ಯಾಹ್ನ 120.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಡಿ.ಎಸ್.ವೀರಯ್ಯ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೀರಯ್ಯ ಅವರಿಗೊಂದು ಬಹಿರಂಗ ಮನವಿ
ಡಿ.ಎಸ್. ವೀರಯ್ಯನವರೇ.. ನಾವು, ನೀವು ಇತರೆ ಅಕಾಂಕ್ಷಿಗಳು ಕೋಲಾರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದೆವು. ಆದರೆ ಪಕ್ಷ ಅಂತಿಮವಾಗಿ ಮುನಿಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಸಹಜವಾಗಿ ಇದು ನಮಗೆಲ್ಲರಿಗೂ ವೈಯಕ್ತಿಕವಾಗಿ ನೋವುಂಟು ಮಾಡಿದೆ. ನಮ್ಮ ಬೆಂಬಲಿಗರು, ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ ನಿಜ.
ಆದರೆ ಪಕ್ಷ ಅಂತಿಮ ನಿರ್ಧಾರ ಕೈಗೊಂಡ ಮೇಲೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ. ಪಕ್ಷವನ್ನು ತಾಯಿ ಎಂದು ಪರಿಗಣಿಸಿದ ಮೇಲೆ ತಾಯಿ ದ್ರೋಹ ಬಗೆಯುವುದು ನಮ್ಮ ಸಂಸ್ಕೃತಿ ಆಗಕೂಡಾದು. ಎಲ್ಲ ನೋವು ನುಂಗಿಕೊಂಡು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶಿಸ್ತಿನ ಸಿಪಾಯಿಗಳಂತೆ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯೋಣ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಈ ದೇಶದ ಪ್ರಧಾನಿ ಮಾಡುವ ಸಲುವಾಗಿ ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ತ್ಯಜಿಸೋಣ. ದೇಶ ಉಳಿಸಲು ಮತ್ತೆ ಮೋದಿಯವರು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯನ್ನು ತಾವು ಮನಗಂಡಿರುತ್ತೀರಿ ಅಂದುಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಪ್ರತಿ ಸಂಸದರು, ಲೋಕಸಭಾ ಕ್ಷೇತ್ರದ ಗೆಲುವು ಕೂಡಾ ಮುಖ್ಯವಾಗಿದೆ.
ನಿಮಗೆ ಪಕ್ಷ ಎರಡು ಬಾರಿ ಎಂಎಲ್ಸಿ ಮಾಡಿದೆ. ಎರಡು ಸಲ ಲೋಕಸಭಾ ಟಿಕೆಟ್ ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸೇರಿ ಹಲವು ಅಧಿಕಾರ ನೀಡಿದೆ. ಇಷ್ಡಿದ್ದರೂ ಈಗ ಟಿಕೆಟ್ ತಪ್ಪುತ್ತಲೇ ಬಂಡಾಯ ಅಭ್ಯರ್ಥಿ ಆಗಿ ನಾಮ ಪತ್ರ ಸಲ್ಲಿಸಲು ಹೊರಟಿರುವುದು ನನಗೆ ಅಘಾತ ತಂದಿದೆ. ದಯಮಾಡಿ ನಿರ್ಧಾರ ಬದಲಿಸಿ. ಪಕ್ಷನಿಷ್ಠೆ ಪ್ರದರ್ಶಿಸಿ. ಇದು ನನ್ನ ವಿನಮ್ರ ಮನವಿ.
- ನಿಮ್ಮ ವಿಶ್ವಾಸಿ
ಡಾ. ಚಿ.ನಾ.ರಾಮು
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿಜೆಪಿ ಎಸ್ಸಿ ಮೋರ್ಚಾ.












Click it and Unblock the Notifications