'ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್'
ಕೋಲಾರ, ಮೇ 22 : ಆರೋಗ್ಯ ಇಲಾಖೆಯ ಸುಧಾರಣೆ ಹಾಗೂ ಸೇವಾ ವ್ಯವಸ್ಥೆಯನ್ನು ಉನ್ನತೀಕರಿಸಲು ರಾಜ್ಯ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಸೇವೆಗಳು ಸಾಮಾನ್ಯರಿಗೂ ದಕ್ಕುವಂತೆ ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಪ್ರದೇಶದ ಜನರಿಗೂ ಆರೋಗ್ಯ ಸೇವೆಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಹೊಸ ಕಾಯ್ದೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ.

ಖಾಸಗಿ ಆಸ್ಪತ್ರೆಗಳು "ಟ್ರೀಟ್ ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್" ಎಂಬ ತತ್ವದಡಿ ಕಾರ್ಯನಿರ್ವಹಿಸಬೇಕೆಂದು, ಖಾಸಗಿ ಆಸ್ಪತ್ರೆಗಳ ನಿರ್ವಹಣೆ ಕಾಯ್ದೆಯನ್ನು ತಿದ್ದುಪಡಿಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ತಿಳಿಸಿದರು.
ಸಮಿತಿ ರಚನೆ: ಕಾಯ್ದೆಗೆ ತಿದ್ದುಪಡಿ ತಂದು ಜೂನ್ ನಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು.
ಕಾಯ್ದೆ ಜಾರಿಯ ನಂತರ ಯಾವ ಚಿಕಿತ್ಸೆಗೆ ಎಷ್ಟು ಹಣ ಎಂಬ ಕುರಿತು ಆಸ್ಪತ್ರೆಗಳ ಮುಂದೆ ಪ್ರಕಟಿಸಬೇಕಾಗಿರುತ್ತದೆ. ಚಿಕಿತ್ಸೆ ನೀಡದೆ ಮೊದಲೇ ಹಣ ಕೇಳುವ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದರು.
ನಕಲಿ ವೈದ್ಯರ ತಡೆಗೆ ಕಮಿಟಿಯನ್ನು ರಚಿಸಲಾಗಿದೆ. ಸರ್ಕಾರವು ಕಮಿಟಿಯ ಮೂಲಕ ರಾಜ್ಯದಲ್ಲಿನ ನಕಲಿ ವೈದ್ಯರ ನಿರ್ಮೂಲನೆ ಮಾಡಲಾಗುವುದು. ಅದರಂತೆ ಹಿಂದೆಯಿಂದ ಆಯುರ್ವೇದದ ಮೂಲಕ ಚಿಕಿತ್ಸೆ ನೀಡಿಕೊಂಡು ಬಂದವರು ಮುಂದುವರೆಯಬಹುದಾಗಿದೆ ಎಂದು ಹೇಳಿದರು.











Click it and Unblock the Notifications