ಶ್ರೀಗಂಧ ಸಸಿಗಾರಿಕೆ ನಿಪುಣ ಅಶೋಕ ರೆಡ್ಡಿಗೆ ಪ್ರಶಸ್ತಿ
ಕೋಲಾರ, ಅಕ್ಟೋಬರ್ 27 : ಶ್ರೀಗಂಧ ಸಸಿ ಒಟ್ಲು ಮಾಡುವುದರಲ್ಲಿ ನಿಪುಣತೆ ಗಳಿಸಿದವರಲ್ಲಿ ಒಬ್ಬರಾದ ಶ್ರೀನಿವಾಸಪುರ ತಾಲ್ಲೂಕಿನ ಆವುಲಕುಪ್ಪದಲ್ಲಿರುವ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರ ಪಾಲಕ ಅಶೋಕ ರೆಡ್ಡಿಯವರಿಗೆ ಪ್ರತಿಷ್ಠಿತ ಮಾರಪ್ಪ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.
ಇದು ಈವರೆಗೆ ಅಶೋಕರೆಡ್ಡಿಯವರು ಸಸಿಗಾರಿಕೆಯಲ್ಲಿ ತೋರಿದ ಶ್ರದ್ಧೆ ಮತ್ತು ಪ್ರಗತಿಗೆ ಸಿಕ್ಕಿದ ಪ್ರತಿಷ್ಠಿತ ಗೌರವವಾಗಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಇಲಾಖೆಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸುವುದಲ್ಲದೆ, ವಿಶೇಷವಾಗಿ ಜಿಲ್ಲಾ ಅರಣ್ಯಾಧಿಕಾರಿಯಾಗಿದ್ದ ಮುನೇಗೌಡ ಮತ್ತು ಈಗಿನ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ರಾಮಕೃಷ್ಣಪ್ಪ ಅವರನ್ನು ಸ್ಮರಿಸಿ, ಅರಣ್ಯ ಇಲಾಖೆಯ ಪ್ರೋತ್ಸಾಹ ತಮ್ಮ ಕಾರ್ಯದ ಹಿಂದಿನ ಶಕ್ತಿಯಾಗಿದೆ ಎನ್ನುತ್ತಾರೆ.
ಅಶೋಕ್ ಅವರು ಶ್ರೀಗಂಧ ಬೀಜದಿಂದ ಸಸಿ ಮಾಡುವುದರಲ್ಲಿ ವಿಶೇಷ ಪರಿಣತಿ ಹೊಂದಿರುವುದಲ್ಲದೆ, ಅದರ ಬಗ್ಗೆ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇವರು ತಮ್ಮ ಸಹ ಕೆಲಸಗಾರರ ಕಾರ್ಯವಿಶ್ವಾಸ ಗಳಿಸಿ ಹತ್ತು ಲಕ್ಷ ಶ್ರೀಗಂಧದ ಸಸಿಗಳನ್ನು ಬೆಳೆಸಿ ರೈತರಿಗೆ ಮತ್ತು ರಾಜ್ಯದ ಅರಣ್ಯ ಇಲಾಖೆಯ ವಿವಿಧ ಅರಣ್ಯಗಳಲ್ಲಿ ನೆಡಲು ಪೂರೈಸಿದ್ದಾರೆ.
ಕಾಲೇಜು ಮೆಟ್ಟಿಲನ್ನೇ ಹತ್ತದ ನಾನು 1954ನೇ ಬ್ಯಾಚಿನ ಎಮ್ಮೆ
ಈ ವರ್ಷ ರೈತರಿಂದ ಮೂರು ಲಕ್ಷ ಹಾಗೂ ಇಲಾಖೆಯಿಂದ ಒಂದು ಲಕ್ಷ ಶ್ರೀಗಂಧದ ಸಸಿಗಳ ಬೇಡಿಕೆ ಇದೆ. ಇದಕ್ಕಾಗಿ ಈಗ ನರ್ಸರಿಯಲ್ಲಿ ಭರಾಟೆಯ ಸಿದ್ಧತೆ ನಡೆದಿದೆ. ಇದರೊಂದಿಗೆ ಐದು ಲಕ್ಷ ಹೊಂಗೆಗಿಡಗಳ ಸಸಿಗಳು ಈಗಾಗಲೇ ಬೆಳೆವಣಿಗೆ ಕಾಣುತ್ತಿವೆ.
ಮಾರಪ್ಪ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಅಶೋಕ್ರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದಾಗ, ಅವರು ತಮ್ಮ ಅನುಭವಗಳನ್ನು ಹೀಗೆ ಹಂಚಿಕೊಂಡರು.
"ಇಲಾಖೆ ಪೂರೈಸುವ ಶ್ರೀಗಂಧದ ಬೀಜಗಳಿಗೆ ಟ್ರೀಟ್ಮೆಂಟ್ (ಬೀಜೋಪಚಾರ) ನಡೆಸಿ ಬಿತ್ತನೆಗೆ ಸಿದ್ಧ ಮಾಡಬೇಕಿದೆ. ಜೊತೆಗೆ ಬೀಜ ನೆಡುವ ಚೀಲಗಳಲ್ಲಿ ಪೋಷಕ ಸಸ್ಯದ ಅಗತ್ಯವಿದೆ. ಹಿಂದೆ ಸೀಮೆತಂಗಡಿ, ತೊಗರಿ, ಮುಟ್ಟಿದರೆ ಮುನಿಯಂತಹ ಸಸ್ಯಗಳನ್ನು ನೀಡಲಾಗುತ್ತಿತ್ತು. ಇವು ಹೆಚ್ಚಿನ ಬೆಂಬಲವನ್ನು ಶ್ರೀಗಂಧದ ಸಸಿ ಬೆಳವಣಿಗೆಗೆ ನೀಡುತ್ತಿರಲಿಲ್ಲ. ಒಮ್ಮೆ ಮುನೇಗೌಡರು ರೈತನೊಬ್ಬ ಈ ಸಸಿಗೆ ಪೋಷಕ ಸಸ್ಯವಾಗಿ ಹೊನಗೊನೆ ಸೊಪ್ಪನ್ನು ಬೆಳೆಸಿ ಯಶಸ್ವಿಯಾದುದ್ದನ್ನು ಕಂಡು ತಿಳಿಸಿದ ನಂತರ ಹೊನಗೊನೆ ಸೊಪ್ಪು ಬೆಳೆಸುವುದು ನಡೆಯಿತು. ಉತ್ತಮ ಫಲಿತಾಂಶವೂ ದೊರೆಯಿತು" ಎನ್ನುವ ಇವರು, ಶ್ರೀಗಂಧದ ಒಟ್ಟಿಲಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬೀಜ ಉತ್ತಮವಾದುದು ಎಂದು ಅಭಿಪ್ರಾಯ ಪಡುತ್ತಾರೆ.
ಶ್ರೀಗಂಧದ ಸಸ್ಯ ಬೇಸಿಗೆ ಉಷ್ಣಾಂಶ ಎಷ್ಟೇ ಇದ್ದರೂ ತಾಳಿಕೊಳ್ಳುತ್ತದೆ. ಆದರೆ ಶೀತ ಮತ್ತು ಜಡಿ ಮಳೆ ವಾತಾವರಣವನ್ನು ಸಹಿಸುವುದಿಲ್ಲ. ಮೋಡ ವಾತಾವರಣದಲ್ಲಿ ಬೇಗನೆ ಬೂದಿ ರೋಗಕ್ಕೆ ಗುರಿಯಾಗುತ್ತದೆ. ತಕ್ಷಣವೇ ಗುರ್ತಿಸಿ ಔಷಧೋಪಚಾರ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
1970ರಲ್ಲಿ ಹುಟ್ಟಿದ ಇವರು ಹತ್ತನೇ ತರಗತಿ ವಿದ್ಯಾಭ್ಯಾಸ ಪೂರೈಸಿದ್ದಾರೆ. 1988ರಲ್ಲಿ ನರ್ಸರಿಯಲ್ಲಿ ಕೆಲಸಕ್ಕೆ ಸೇರಿ ನಂತರ ನಾಲ್ಕು ವರ್ಷಗಳು ಕಾಡಿನ ವಾಚರ್ ಆಗಿದ್ದು, ಮತ್ತೆ ಆವುಲಕುಪ್ಪ ನರ್ಸರಿಗೆ ವಾಪಸ್ಸಾದರು. ಸೇವಾ ಖಾಯಂಯಾತಿ 2012ರಲ್ಲಿ ಆಯಿತು.
ಅರಣ್ಯ ಇಲಾಖೆ ಇವರ ನರ್ಸರಿ ಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಆವುಲಕುಪ್ಪ ನರ್ಸರಿಯಲ್ಲಿ ಉಳಿಸಿಕೊಂಡಿದೆ. ಇವರು ಹೇಳುವಂತೆ ಶ್ರೀಗಂಧದ ಒಟ್ಟಿಲಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬೀಜ ಉತ್ತಮವಾದುದು.