ಪೆಟ್ರೋಲ್ ಬಾಟಲಿ ಹಿಡಿದು ಸಮವಸ್ತ್ರದಲ್ಲೇ ಪೋಲೀಸಪ್ಪನ ಧರಣಿ
ಕೋಲಾರ, ಅಕ್ಟೋಬರ್ 2: ಜಮೀನು ವಿವಾದ ಬಗೆಹರಿಸದೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಎಸ್ಐ ಒಬ್ಬರು ಸಮವಸ್ತ್ರದಲ್ಲಿಯೇ ಕೋಲಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಡಿಎಎಆರ್ನಲ್ಲಿ ಕೆಲಸ ಮಾಡುತ್ತಿರುವ ಎಎಸ್ಐ ವೆಂಕಟರೆಡ್ಡಿ, ಪೆಟ್ರೋಲ್ ತುಂಬಿದ ಬಾಟಲಿಯನ್ನು ಜತೆಯಲ್ಲಿ ಇರಿಸಿಕೊಂಡು ಪ್ರತಿಭಟನೆ ನಡೆಸಿದ್ದು, ನ್ಯಾಯ ಸಿಗದೆ ಇದ್ದರೆ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಕೋಲಾರದಲ್ಲಿ ಆರಿಕುಂಟೆ ಗ್ರಾಮದಲ್ಲಿರುವ ಸರ್ವೆ ನಂಬರ್ 22ರಲ್ಲಿ ಇರುವ 4 ಎಕರೆ ಜಮೀನು ಪಿತ್ರಾರ್ಜಿತವಾಗಿದೆ. ಆದರೆ, ತಮ್ಮ ನೆರೆಯವರು ನಕಲಿ ದಾಖಲೆ ಸೃಷ್ಟಿಸಿ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿಯೂ ಬಗೆಹರಿದಿದೆ.

ಆದರೆ, ಸರ್ಕಾರಿ ಇಲಾಖೆಯ ಅಧಿಕಾರಿಗಳು ಇದರೊಂದಿಗೆ ಶಾಮೀಲಾಗಿದ್ದು, ಮೂಲ ದಾಖಲೆ ನೀಡದೆ ಸತಾಯಿಸುತ್ತಿದ್ದಾರೆ. ಸ್ವತಃ ತಮ್ಮ ಇಲಾಖೆಯವರೇ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವೆಂಕಟರೆಡ್ಡಿ ಆರೋಪಿಸಿದ್ದಾರೆ.
'ಜಮೀನಿನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ ತಲೆಗೆ ಗಾಯವಾಗಿತ್ತು. ಈ ಬಗ್ಗೆ ಎಸ್ಪಿ ದಿವ್ಯಾ ಗೋಪಿನಾಥ್ ಮೇಡಂ ಅವರಿಗೆ ದೂರಿತ್ತರೂ ಅವರು ಕೂಡ ನನ್ನ ವಿರುದ್ಧವೇ ರೇಗಾಡಿದ್ದರು. ಎಲ್ಲಾ ಮಾಹಿತಿ ಇದ್ದೂ ಹೀಗೆ ಮಾಡುತ್ತಿದ್ದಾರೆ.
ಚುನಾವಣೆ ಬಳಿಕ ಜಮೀನಿಗೆ ಬಂದು ಪರಿಶೀಲನೆ ಮಾಡುವುದಾಗಿ ಉಪವಿಭಾಗಾಧಿಕಾರಿ ಹೇಳಿದ್ದರು. ಈಗ ನಾನೇಕೆ ಬರಬೇಕು ಎಂದು ಕೇಳುತ್ತಾರೆ. ಇದು ತಾತನ ಕಾಲದಿಂದ ಇರುವ ಆಸ್ತಿ. ನ್ಯಾಯ ದೊರಕಿಸಿಕೊಡಿ ಎಂದು ಕೇಳಿದರೆ ನನಗೆ ಬೆದರಿಕೆ ಹಾಕುತ್ತಾರೆ. ಸಸ್ಪೆಂಡ್ ಕೂಡ ಮಾಡುತ್ತಾರೆ' ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದರೆ ಪ್ರಯೋಜನವಾಗಿಲ್ಲ. ಇದರಲ್ಲಿ ರಾಜಕೀಯ ದುರುದ್ದೇಶ ಇದೆ ಎಂದು ಆರೋಪಿಸಿದರು.












Click it and Unblock the Notifications