ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್
ಬೆಂಗಳೂರು, ಏ.19. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಯಾವುದೇ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆಗೆ ನಡೆಸುವ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ಆದೇಶಿದೆ.
ಮಾಲೂರು ಪುರಸಭೆಯ ಕೆ.ಲಕ್ಷ್ಮೀಕಾಂತ ಸೇರಿ ಆರು ನಾಮ ನಿರ್ದೇಶಿತ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ನ್ಯಾಯಾಲಯ ಏನು ಹೇಳಿದೆ?: ಸಂವಿಧಾನದ ಕಲಂ 243ಆರ್(2)(ಎ) ಸಿಂಧುತ್ವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕೇಳುವ ಮೂಲಭೂತ ಹಕ್ಕಿಲ್ಲ ಎಂದು ಸಾರಿದೆ.
ನ್ಯಾಯಾಲಯ ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ 1964 ರ ಸೆಕ್ಷನ್ 11(1)(ಬಿ) ಸಾಂವಿ'ನಿಕ ಸಿಂಧುತ್ವವನ್ನೂ ಸಹ ಎತ್ತಿಹಿಡಿದಿದೆ. ಸೆಕ್ಷನ್ 11(ಬಿ) ಅನ್ನು 243ಆರ್(2)(ಎ)ಗೆ ಅನುಗುಣವಾಗಿ ರೂಪಿಸಲಾಗಿದೆ. ಹಾಗಾಗಿ ಅದೂ ಕೂಡ ಸಂವಿಧಾನಬಾಹಿರವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

"ಸ್ಥಳೀಯ ಸಂಸ್ಥೆಗಳ ಸದಸ್ಯರು ಜನಾದೇಶದಿಂದ ಚುನಾಯಿತರಾಗುತ್ತಾರೆ. ಆದರೆ ನಾಮ ನಿರ್ದೇಶಿತ ಸದಸ್ಯರನ್ನು ಕೌನ್ಸಿಲರ್ ಗಳೆಂದು ನೇಮಕ ಮಾಡಲಾಗುವುದು. ಚುನಾಯಿತ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಒಬ್ಬರೂ ಒಂದೇ ವರ್ಗಕ್ಕೆ ಸೇರಿದರೂ ಸಹ ವ್ಯತ್ಯಾಸವಿದೆ. ಅದು ಏಕಪಕ್ಷೀಯವಲ್ಲ ಮತ್ತು ಯಾವುದೇ ಕಾರಣವಿಲ್ಲದೆ ಆ ಅಂಶವನ್ನು ಸೇರಿಸಿಲ್ಲ. ಹಾಗಾಗಿ ಸಾಂವಿಧಾನದ ಕಲಂ 14 ಉಲ್ಲಂಘನೆಯಾಗುತ್ತದೆಂದು ಹೇಳಲಾಗದು" ಎಂದು ನ್ಯಾಯಪೀಠ ಆದೇಶಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಸುಪ್ರೀಂಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ, ಆ ಕುರಿತಂತೆ ಸಂವಿಧಾನದ ಕಲಂ 243ಆರ್(2) ನಲ್ಲಿ ಮತ್ತು ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ 1964ರ ಸೆಕ್ಷನ್ 11(1) ನಲ್ಲಿ ನಿರ್ಬಂಧವಿದೆ. ಹಾಗಾಗಿ ನಾಮನಿರ್ದೇಶಿತ ಸದಸ್ಯರು ಮತದಾನ ಹಕ್ಕು ಕೇಳುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ಕೆ.ಲಕ್ಷ್ಮೀಕಾಂತ ಮತ್ತಿತರ ಆರು ಮಂದಿ ಮಾಲೂರು ಪುರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದರು. ಅವರು ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಅನ್ವಯ ತಮಗೂ ಮಾಲೂರು ಪುರಸಭೆಯ ಅಧ್ಯಕ್ಷ/ಉಪಾಧ್ಯಕ್ಷ ಆಯ್ಕೆಯಲ್ಲಿ ಮತದಾನ ಮಾಡುವ ಹಕ್ಕು ನೀಡುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.












Click it and Unblock the Notifications