ಕೋಲಾರದಲ್ಲಿ ಕೊರೊನಾ ಆತಂಕ ತಂದ ಮಹಾರಾಷ್ಟ್ರ ವೃದ್ಧನ ಸಾವು
ಕೋಲಾರ, ಮೇ 19: ಐವತ್ತು ದಿನಗಳ ಕಾಲ ಜಿಲ್ಲಾಧಿಕಾರಿ ಸತ್ಯಭಾಮ ಅವರ ಪರಿಶ್ರಮದಿಂದ ಕೊರೊನಾಮುಕ್ತವಾಗಿತ್ತು ಕೋಲಾರ ಜಿಲ್ಲೆ. ಆದರೆ ಏಳು ದಿನಗಳ ಹಿಂದೆ ಜಿಲ್ಲೆಗೆ ಕಾಲಿಟ್ಟ ಕೊರೊನಾ ತನ್ನ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಸಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 9 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮುಳಬಾಗಿಲು ತಾಲೂಕಿನಲ್ಲಿ 6, ಮಾಲೂರು ತಾಲೂಕಿನಲ್ಲಿ ಒಂದು, ಕೆಜಿಎಫ್ ತಾಲೂಕಿನಲ್ಲಿ 2 ಹಾಗೂ ಕೋಲಾರ ನಗರದಲ್ಲಿ ಒಂದು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಕೊರೊನಾ ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳು ಹಾಗೂ ಕೆಲಸ ಮಾಡುವ ಸ್ಥಳಗಳನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ ಗೆ ಸೇರಿಸಿ, ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.
ಈ ನಡುವೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮತ್ತೊಂದು ಆತಂಕ ಸೃಷ್ಟಿಸುವ ಘಟನೆ ಜರುಗಿದೆ. ಮೂರು ದಿನಗಳ ಹಿಂದಷ್ಟೇ ಮಾಲೂರಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ 60 ವರ್ಷದ ವೃದ್ಧನೊಬ್ಬ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಈ ಸಂಗತಿ ವೈದ್ಯರ ನಿದ್ದೆಗೆಡಿಸಿದೆ. ಚಿಕ್ಕಬಳ್ಳಾಪುರ ಮೂಲದ ಲಾರಿ ಡ್ರೈವರ್ ಜೊತೆಯಲ್ಲಿ ತರಕಾರಿ ಲಾರಿಯಲ್ಲಿ ಮಹಾರಾಷ್ಟ್ರದಿಂದ ಈ ವೃದ್ಧ ಮಾಲೂರಿಗೆ ಬಂದಿದ್ದನು.

ಇದ್ದಕ್ಕಿದ್ದಂತೆ ಆರೋಗ್ಯ ಕೆಟ್ಟು, ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಂತೆ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾನೆ. ಈ ಒಂದು ಸಂಗತಿ ಜಿಲ್ಲೆಯಲ್ಲಿ ಆತಂಕ ತಂದಿದೆ. ಮೃತ ವೃದ್ಧನ ಗಂಟಲು ದ್ರವ ಹಾಗೂ ಆತನ ಸಂಪರ್ಕದಲ್ಲಿದ್ದ ಚಾಲಕನ ಗಂಟಲು ದ್ರವವನ್ನು ಸಹ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಮಾಲೂರು ಆಸ್ಪತ್ರೆಯ ಆವರಣವನ್ನು ಸೋಂಕು ನಿವಾರಕದಿಂದ ಸಿಂಪಡಣೆ ಮಾಡಲಾಗುತ್ತಿದ್ದು, ಹೊಸಬರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.












Click it and Unblock the Notifications