ಬರಗಾಲದಲ್ಲೂ ಬತ್ತದ ತೀರ್ಥ; ಇದು ಕೋಲಾರ ತೀರ್ಥೇಶ್ವರನ ಮಹಿಮೆ
ಕೋಲಾರ, ಮಾರ್ಚ್ 12: ಕಲ್ಲು ಬಂಡೆಯ ಮೇಲೆ ನಿರ್ಮಾಣವಾಗಿರುವ ಪುಟ್ಟ ದೇವಾಲಯ. ದೇವಾಲಯದ ಒಳಗೆ ಜಿನುಗುತ್ತಿರುವ ನೀರಿನ ಚಿಲುಮೆ. ಆ ಚಿಲುಮೆಯನ್ನು ಭಕ್ತಿಯಿಂದ ತೀರ್ಥವಾಗಿ ಸ್ವೀಕರಿಸುತ್ತಿರುವ ಭಕ್ತರು... ಈ ದೃಶ್ಯ ಕಾಣಸಿಗುವುದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ತೀರ್ಥಬಂಡಟ್ಟಿ ಗ್ರಾಮದಲ್ಲಿ.
ಬರದ ನಾಡಿಗೆ ಕಾಶಿಯಿಂದಲೇ ಹರಿದು ಬರುತ್ತಿದ್ದಾಳೆ ಈ ಉದ್ಭವ ಗಂಗೆ. ಜಲ ಕ್ಷಾಮವೇ ಬಂದರೂ ಇಲ್ಲಿ ತೀರ್ಥ ರೂಪದ ನೀರು ಹರಿಯುವುದು ನಿಂತಿಲ್ಲ. ಹತ್ತಾರು ಕಾಯಿಲೆಗಳನ್ನು ವಾಸಿ ಮಾಡಬಲ್ಲ, ಕಷ್ಟಗಳನ್ನು ಈಡೇರಿಸಬಲ್ಲ ಅಪರೂಪದ ಈ ತೀರ್ಥೇಶ್ವರನ ಚಮತ್ಕಾರಿ ತೀರ್ಥದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ನೋಡಿ ಅದರ ಸಂಪೂರ್ಣ ವಿವರ...

ದಿನದ 24 ಗಂಟೆಯೂ ತೀರ್ಥ ಉದ್ಭವ
ತೀರ್ಥಬಂಡಟ್ಟಿ ಗ್ರಾಮದ ಬಳಿ ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತೀರ್ಥ ಗಿರೀಶ್ವರಸ್ವಾಮಿ ದೇವಾಲಯವಿದೆ. ಇಲ್ಲಿ ದಿನದ 24 ಗಂಟೆಯೂ ದೇವಾಲಯದಲ್ಲಿ ತೀರ್ಥ ಉದ್ಬವವಾಗುತ್ತದೆ. ಸುತ್ತಮುತ್ತಲ ಪ್ರದೇಶದಲ್ಲಿ 1500 ಅಡಿಯಷ್ಟು ಬೋರ್ ವೆಲ್ ಕೊರೆಸಿದ್ದರೂ ನೀರು ಸಿಗದ ಪ್ರದೇಶದಲ್ಲಿ ಹೀಗೆ ದೇವಾಲಯದಲ್ಲಿ ತೀರ್ಥ ಉದ್ಭವವಾಗುವುದು ನಿಜಕ್ಕೂ ಅಚ್ಚರಿ ಎನಿಸಿದೆ.

ಗುಪ್ತಗಾಮಿನಿಯಾಗಿ ಬಂದ ಗಂಗೆ
ಹೀಗೆ ಪ್ರತಿನಿತ್ಯ ಇಲ್ಲಿ ತೀರ್ಥೋದ್ಬವ ಆಗುವುದರ ಹಿಂದೆ ಒಂದು ಇತಿಹಾಸವಿದೆ. ಶಿವನ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಸುಕುಮುಂದ ಮಹರ್ಷಿಗಳು ತಮ್ಮ ತಪೋಶಕ್ತಿಯಿಂದ ನಿತ್ಯ ಕಾಶಿಯಿಂದ ಗಂಗೆಯನ್ನು ತಂದು ಶಿವನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಿದ್ದರಂತೆ. ಆದರೆ ಅವರಿಗೆ ವಯಸ್ಸಾಗಿ ಅವರು ನೀರನ್ನು ತರಲು ಸಾಧ್ಯವಾಗದೇ ಹೋದಾಗ ಅವರ ಭಕ್ತಿಗೆ ಮೆಚ್ಚಿ ಕಾಶಿಯಿಂದಲೇ ಗಂಗೆ ಗುಪ್ತಗಾಮಿನಿಯಾಗಿ ಚಿಲುಮೆಯಾಗಿ ಚಿಮ್ಮುತ್ತಿದ್ದಾಳೆ ಎನ್ನುವುದ ಇಲ್ಲಿನ ಪ್ರತೀತಿ. ಅಂದಿನಿಂದ ಇಂದಿನವರೆಗೂ ಇಲ್ಲಿ ಎಂಥ ಬರಗಾಲದಲ್ಲೂ ನೀರು ನಿಂತಿಲ್ಲ. ಕಲ್ಲು ಬಂಡೆಯಿಂದ ನೀರು ಚಿಮ್ಮುತ್ತಲೇ ಇರುತ್ತದೆ.

ನೀರು ಸೇವನೆಯಿಂದ ಚರ್ಮ ಕಾಯಿಲೆ ವಾಸಿ
ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ನೀರಿಗೆ ಹಾಹಾಕಾರವಿದೆ. 1500 ಅಡಿಯಷ್ಟು ಬೋರ್ ವೆಲ್ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ. ಹೀಗಿರುವಾಗ ಇಲ್ಲಿ ವರ್ಷದ 365 ದಿನವೂ ನೀರಿನ ಚಿಲುಮೆ ಉಕ್ಕುವುದು ನೋಡುಗರಿಗೆ ಚಮತ್ಕಾರ ಎನ್ನುವಂತಿದೆ. ಈ ನೀರು ಅತ್ಯಂತ ರುಚಿಯಾಗಿರುತ್ತದೆ. ಹಾಗಾಗಿ ಈ ನೀರು ಕಾಶಿಯದ್ದೇ ಎಂದು ನಂಬುತ್ತಾರೆ ಇಲ್ಲಿನ ಭಕ್ತರು. ಈ ನೀರನ್ನು ಕುಡಿದರೆ ಅದೆಷ್ಟೋ ಚರ್ಮ ಕಾಯಿಲೆಗಳು ವಾಸಿಯಾಗಿರುವ ನಿದರ್ಶನಗಳಿವೆ.

ಇಷ್ಟಾರ್ಥ ನೆರವೇರಿಕೆಗೆ ಬರುವ ಭಕ್ತರು
ತೀರ್ಥ ಗಿರೀಶ್ವರ ಸ್ವಾಮಿಗೆ ನಮಿಸಿ ತೀರ್ಥವನ್ನು ಕುಡಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆಯೂ ಜನರಲ್ಲಿದೆ. ಹಾಗಾಗಿ ಇಲ್ಲಿಗೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದಲೂ ಜನರು ಬರುತ್ತಾರೆ. ಒಟ್ಟಾರೆ ತೀರ್ಥಬಂಡಹಟ್ಟಿಯ ಬಂಡೆಯ ಮೇಲೆ ಚಿಮ್ಮುವ ಈ ಚಮತ್ಕಾರಿ ತೀರ್ಥ ಜಿಲ್ಲೆಯ ಆಕರ್ಷಣೆಯ ಕೇಂದ್ರವಾಗಿದೆ. ಶಿವರಾತ್ರಿಯಂದು ಜನ ಜಾತ್ರೆಯೇ ಇಲ್ಲಿ ಸೇರುವುದು ಮತ್ತೊಂದು ವಿಶೇಷ.












Click it and Unblock the Notifications