ಕೋಲಾರದಿಂದ ಎಚ್.ಸಿ.ಮಹದೇವಪ್ಪ ಕಣಕ್ಕೆ?, ಗೌಡರ ತಂತ್ರ!
Recommended Video

ಕೋಲಾರ, ಜನವರಿ 09 : 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕಣಕ್ಕಿಳಿಯಲಿದ್ದಾರೆ. ಇಂತಹ ಸುದ್ದಿಯೊಂದು ಜೆಡಿಎಸ್ ವಲಯದಲ್ಲಿ ಹಬ್ಬಿದ್ದು, ಈ ಲೆಕ್ಕಾಚಾರ ಎಚ್.ಡಿ.ದೇವೇಗೌಡರದ್ದು ಎಂದು ತಿಳಿದುಬಂದಿದೆ.
ಕೋಲಾರ ಕ್ಷೇತ್ರದ ಹಾಲಿ ಸಂಸದರು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ. 2019ರ ಚುನಾವಣೆಯಲ್ಲಿ ಕ್ಷೇತ್ರದಿಂದ ಎಚ್.ಸಿ.ಮಹದೇವಪ್ಪ ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಈಗ ಬಂದಿರುವ ಸುದ್ದಿ.
2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಎಚ್.ಸಿ.ಮಹದೇವಪ್ಪ ರಾಜಕಾರಣದಿಂದ ದೂರವಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಇಬ್ಬರಿಗೂ ಆಪ್ತರಾಗಿರುವ ಅವರನ್ನು ಕೋಲಾರಕ್ಕೆ ಕರೆತರುವ ಬಗ್ಗೆ ಚರ್ಚೆ ನಡೆದಿದೆ.
2014ರ ಚುನಾವಣೆಯಲ್ಲಿ 418926 ಮತಗಳನ್ನು ಪಡೆದು ಕೆ.ಎಚ್.ಮುನಿಯಪ್ಪ ಲೋಕಸಭೆಗೆ 7ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ಮುನಿಯಪ್ಪ ಗೆಲುವು ಕಷ್ಟ ಎಂದು ಜೆಡಿಎಸ್ ವಾದ ಮಂಡಿಸಿದ್ದು, ಕೋಲಾರ ಕ್ಷೇತ್ರವನ್ನು ನಮಗೆ ಕೊಡಿ ಎಂಬ ಬೇಡಿಕೆ ಇಟ್ಟಿದೆ.

ವಿಧಾನಸಭೆ ಚುನಾವಣೆ ಸೋಲು
2013ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನ ಎಂ.ಅಶ್ವಿನ್ ಕುಮಾರ್ ವಿರುದ್ಧ ಸೋಲು ಕಂಡಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಅವರು ರಾಜಕೀಯದಿಂದ ದೂರವಾಗುತ್ತಿದ್ದಾರೆ. ಲೋಕಸಭೆ ಚುನಾವಣೆ ಮೂಲಕ ಪುನಃ ಸಕ್ರಿಯರಾಗಲಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಜೆಡಿಎಸ್ಗೆ ಹತ್ತಿರವಾದವರು
ಎಚ್.ಸಿ.ಮಹದೇವಪ್ಪ ಅವರು ಜನತಾಪಾರ್ಟಿ ಮೂಲಕ ರಾಜಕೀಯ ಜೀವನ ಆರಂಭಿಸಿದವರು. ನಂತರ ಜನತಾಪರಿವಾರದ ಜೊತೆಗಿದ್ದರು. ನಂತರ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. 2008ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸೇರಿದರು. ಆದ್ದರಿಂದ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಆಪ್ತರಾಗಿದ್ದಾರೆ.

ಮುನಿಯಪ್ಪಗೆ ಸೋಲು?
ಕೋಲಾರ ಕ್ಷೇತ್ರದ ಹಾಲಿ ಸಂಸದರು ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್.ಮನಿಯಪ್ಪ. ಸತತ ಏಳು ಬಾರಿ ಗೆದ್ದಿರುವ ಅವರಿಗೆ ಬಾರಿ ಹಿನ್ನಡೆ ಉಂಟಾಗಲಿದೆ ಎಂಬ ಸುದ್ದಿ ಇದೆ. ಕೋಲಾರ ಕ್ಷೇತ್ರಕ್ಕೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್ ಕ್ಷೇತ್ರದಲ್ಲಿ 503627 ಮತಗಳನ್ನು ಪಡೆದಿದೆ. ಆದ್ದರಿಂದ, ಕ್ಷೇತ್ರದಿಂದ ಒಮ್ಮತದ ಅಭ್ಯರ್ಥಿಯಾಗಿ ಎಚ್.ಸಿ.ಮಹದೇವಪ್ಪ ಅವರನ್ನು ಕಣಕ್ಕಿಳಿಸಬೇಕು ಎಂಬುದು ಜೆಡಿಎಸ್ ಬೇಡಿಕೆ.

ಕಾಂಗ್ರೆಸ್ ಒಪ್ಪಿಗೆ ನೀಡಲಿದೆಯೇ?
ಜೆಡಿಎಸ್ ಜೊತೆಮೈತ್ರಿ ಮಾಡಿಕೊಳ್ಳಲಿರುವ ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ರಿಂದ 12 ಸ್ಥಾನಗಳನ್ನು ಪಕ್ಷಕ್ಕೆ ಬಿಟ್ಟುಕೊಡಬೇಕು. ಆದರೆ, ಹಾಲಿ ಕಾಂಗ್ರೆಸ್ ಸಂಸದರಿರುವ ಅದರಲ್ಲೂ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಿದೆಯೇ? ಎಂದು ಕಾದು ನೋಡಬೇಕು.

ಬಿಜೆಪಿ ಅಭ್ಯರ್ಥಿ ಯಾರು?
ಏಳು ಬಾರಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಸಹ ತಂತ್ರ ರೂಪಿಸುತ್ತಿದೆ. ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
'ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದರೆ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದೇನೆ' ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ನಿರ್ಮಲಾ ವೆಂಕಟೇಶ್ ಹೇಳಿದ್ದಾರೆ.

2014ರ ಫಲಿತಾಂಶ
2014ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು 418926 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್ನಿಂದ ಕೋಲಾರ ಕೇಶವ ಅವರು ಕಣಕ್ಕಿಳಿದಿದ್ದು 371076 ಮತ ಪಡೆದು 2ನೇ ಸ್ಥಾನ ಪಡೆದಿದ್ದರು. ಬಿಜೆಪಿಯಿಂದ ನಾರಾಯಣ ಸ್ವಾಮಿ ಅಭ್ಯರ್ಥಿಯಾಗಿದ್ದರು. ಪಡೆದ ಮತಗಳು 267322.












Click it and Unblock the Notifications