ಮದ್ಯ ಬಿಟ್ಟು ಕೌನ್ಸಿಲಿಂಗ್ ತೆಗೆದುಕೊಳ್ಳಿ ಎಂದ ಅಬಕಾರಿ ಸಚಿವರು
ಕೋಲಾರ, ಏಪ್ರಿಲ್ 25: ಲಾಕ್ ಡೌನ್ ಆದಾಗಿನಿಂದ ಮದ್ಯದಂಗಡಿಗಳಿಗೆ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ನಂತರ ಮದ್ಯದ ಮಳಿಗೆಗಳು ತೆರೆಯಬಹುದೆಂಬ ನಿರೀಕ್ಷೆ ಮದ್ಯಪ್ರಿಯರಲ್ಲಿತ್ತು. ಆದರೆ ಮೇ 3ರವರೆಗೂ ಮತ್ತೆ ಲಾಕ್ ಡೌನ್ ವಿಸ್ತರಣೆಯಾದ್ದರಿಂದ ಆ ನಿರೀಕ್ಷೆಯೂ ಸುಳ್ಳಾಯಿತು.
ಮೇ 3ರವರೆಗೂ ಮದ್ಯದಂಗಡಿಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ ಅವರು ಹೇಳಿದ್ದರು. ಇದೀಗ ಅವರು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ವೈದ್ಯರಿಂದ ಸಲಹೆ ಪಡೆದುಕೊಂಡು ಈ ಚಟವನ್ನು ಬಿಟ್ಟುಬಿಡಿ ಎಂದು ಮದ್ಯವ್ಯಸನಿಗಳಿಗೆ ಸಚಿವರು ಕಿವಿ ಮಾತು ಹೇಳಿದ್ದಾರೆ.
"ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಟು ಬಿಡಿ. ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ" ಎಂದು ವಿಶ್ಲೇಷಣೆ ನೀಡಿದ್ದಾರೆ. ಇದೇ ಸಮಯದಲ್ಲಿ ತಾಳ್ಮೆಯಿಂದ ಇದ್ದು, ಚಟ ತ್ಯಜಿಸಿ ವೈದ್ಯರ ಜೊತೆ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ.

"ಮೇ 3 ವರೆಗೂ ಪ್ರಧಾನಿಗಳ ಮಾತಿಗೆ ಗೌರವಿಸಿ ಸಹಕರಿಸಿ. ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಲಾಗಿದೆ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿ ಆರೋಗ್ಯವಾಗಿರಿ" ಎಂದು ಬುದ್ಧಿಮಾತು ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ಹೆಚ್ಚಿರುವ ಕಳ್ಳಭಟ್ಟಿ ದಂಧೆಯನ್ನೂ ಹತೋಟಿಗೆ ತರಲು ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications