ಕೋಲಾರ: ಮುಷ್ಕರದ ಮಧ್ಯೆ ಬಸ್ ಓಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚಾಲಕನಿಗೆ ಶ್ರದ್ಧಾಂಜಲಿ
ಕೋಲಾರ, ಏಪ್ರಿಲ್ 9: ಕಳೆದ ಮೂರು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಬಹುತೇಕ ಕಡೆ ಸರ್ಕಾರಿ ಬಸ್ಸುಗಳು ಓಡಾಡುತ್ತಿಲ್ಲ.
ಈ ಮುಷ್ಕರದ ಮಧ್ಯೆ ಸಾರಿಗೆ ಬಸ್ ಓಡಿಸಿದ್ದಕ್ಕೆ ಚಾಲಕ ಮರಣ ಹೊಂದಿದ್ದಾನೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಕೆಲವು ಕಿಡಿಗೇಡಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಬಸ್ ಚಾಲಕ ಸತ್ಯಪ್ಪ ಸಾವನ್ನಪ್ಪಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವ್ಯಂಗ್ಯ ಮಾಡಲಾಗಿದೆ.

ಸಾರಿಗೆ ಬಸ್ ಓಡಿಸಬೇಡ ಎಂದು ಶ್ರೀನಿವಾಸ್ ಎನ್ನುವವರಿಂದ ಚಾಲಕ ಸತ್ಯಪ್ಪನ ಮೇಲೆ ಪೆಟ್ರೋಲ್ ಸುರಿದು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ ಬಳಿ ಬಸ್ ನಿಂತಾಗ ಬೆದರಿಕೆ ಶ್ರೀನಿವಾಸ್ ಹಾಕಿದ್ದಾರೆ.
ದೌರ್ಜನ್ಯ ಎಸಗಿದ ಆರೋಪದಡಿ ಸಾರಿಗೆ ನೌಕರ ಶ್ರೀನಿವಾಸ್ ನನ್ನು ಸಾರಿಗೆ ಇಲಾಖೆ ಅಮಾನತು ಮಾಡಿದ್ದು, ಅಲ್ಲದೆ ಶ್ರೀನಿವಾಸ್ ವಿರುದ್ಧ ಚಾಲಕ ಸತ್ಯಪ್ಪ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾವನ್ನಪ್ಪಿರುವ ಬಗ್ಗೆ ಹಾಕಿರುವವರ ವಿರುದ್ಧ ಕ್ರಮಕ್ಕೆ ಸಾರಿಗೆ ನೌಕರ ಸತ್ಯಪ್ಪ ಆಗ್ರಹಿಸಿದ್ದು, ಸತ್ಯಪ್ಪ ಹಾಗೂ ಶ್ರೀನಿವಾಸ್ ಇಬ್ಬರೂ ಶ್ರೀನಿವಾಸಪುರ ಡಿಪೋದಲ್ಲಿ ಚಾಲಕರಾಗಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications