ಕೋಲಾರ ಜೆಡಿಎಸ್ ಶಾಸಕರಿಗೆ 30 ಕೋಟಿ ಆಫರ್, 5 ಕೋಟಿ ಅಡ್ವಾನ್ಸ್
ಕೋಲಾರ, ಫೆಬ್ರವರಿ 10: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನನಗೆ ಬಿಜೆಪಿಯವರು ಮೂವತ್ತು ಕೋಟಿ ರುಪಾಯಿ ಆಮಿಷ ಒಡ್ಡಿದ್ದರು ಎಂದು ಜೆಡಿಎಸ್ ನಿಂದ ಆಯ್ಕೆಯಾಗಿರುವ ಕೋಲಾರದ ಶಾಸಕ ಕೆ.ಶ್ರೀನಿವಾಸ ಗೌಡ ಹೇಳಿದ್ದಾರೆ. ನನಗೆ ಮುಂಗಡವಾಗಿ ನೀಡಿದ ಐದು ಕೋಟಿ ರುಪಾಯಿ ತೆಗೆದುಕೊಂಡೆ ಎಂದು ಸೇರಿಸಿದ್ದಾರೆ.
ಬಿಜೆಪಿಯ ಸಿ.ಎನ್.ಅಶ್ವಥ್ ನಾರಾಯಣನ್, ಎಸ್.ಆರ್.ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ನನ್ನ ಮನೆಗೆ ಬಂದಿದ್ದರು. 30 ಕೋಟಿ ರುಪಾಯಿ ನೀಡುವುದಾಗಿ ಹೇಳಿ, ಐದು ಕೋಟಿ ರುಪಾಯಿ ನೀಡಿದರು. ಅವರಿಗೆ ನಾನು ಜೆಡಿಎಸ್ ಗೆ ರಾಜೀನಾಮೆ ನೀಡಬೇಕಿತ್ತು. ನಾನು ಪಕ್ಷ ನಿಷ್ಠ. ನಾನು ಅದನ್ನು ಮಾಡಲು ಸಾಧ್ಯವಿಲ್ಲ ಎಂದೆ ಎಂದಿದ್ದಾರೆ.
ಮುಂದುವರಿದು, ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತನಾಡಿ, ಐದು ಕೋಟಿ ರುಪಾಯಿಯ ಅಡ್ವಾನ್ಸ್ ಹಣ ವಾಪಸ್ ಮಾಡುವುದಾಗಿ ಹೇಳಿದೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ನ ಹದಿನೆಂಟು ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಇನ್ನೂರು ಕೋಟಿ ಆಮಿಷ ಒಡ್ಡಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ.












Click it and Unblock the Notifications