ಅಬಕಾರಿ ಸಚಿವರ ವಿರುದ್ಧ ಕಳಪೆ ಆಹಾರ ಪದಾರ್ಥ ವಿತರಣೆ ಆರೋಪ
ಕೋಲಾರ, ಮೇ 25: ಜನರ ಸಂಕಷ್ಟ ನಿವಾರಣೆಗೆಂದು ಜನಪ್ರತಿನಿಧಿಗಳು ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ಹಾಗೆ ವಿತರಿಸುವಾಗ ಆಹಾರ ಪದಾರ್ಥಗಳ ಗುಣಮಟ್ಟದತ್ತ ನಿಗಾ ವಹಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಕೋಲಾರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಎಚ್ ನಾಗೇಶ್ ವಿರುದ್ಧ ಕಳಪೆ ಆಹಾರ ಪದಾರ್ಥಗಳ ವಿತರಣೆ ಆರೋಪ ಕೇಳಿಬಂದಿದೆ. ಸಚಿವರು ಹುಳು ಬಿದ್ದ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ ಎಂದು ಕೋಲಾರದಲ್ಲಿ ಜನರು ಆಕ್ರೋಶಗೊಂಡಿದ್ದಾರೆ.
ಕೊರೊನಾ ಕಾಟದ ನಡುವೆ ಕಳಪೆ ಬಿಡಿ ಬೀಜ ಬಿತ್ತನೆ ಮಾರಾಟ!
ತಮ್ಮ ಸ್ವ ಕ್ಷೇತ್ರ ಮುಳಬಾಗಿಲು ತಾಲೂಕಿನ ಕಂಟೋನ್ಮೆಂಟ್ ಪ್ರದೇಶದ ಜನರಿಗೆ ಕಳಪೆ ಆಹಾರ ಕಿಟ್ ವಿತರಿಸಿದ್ದಾರೆ ಎಂದು ಕಿಟ್ ಪಡೆದಕೊಂಡ ಜನರು ಆರೋಪ ಮಾಡಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಝೋನ್ ಪ್ರದೇಶದಲ್ಲಿ ಸಚಿವ ನಾಗೇಶ್ ಹಾಗೂ ಬೆಂಬಲಿಗರು ಆಹಾರ ಕಿಟ್ ವಿತರಣೆ ಮಾಡಿದ್ದರು.
ಆದರೆ ಇವು ಕಳಪೆ ಆಹಾರ ಪದಾರ್ಥಗಳಾಗಿವೆ. ಕೇವಲ ಪ್ರಚಾರಕ್ಕಾಗಿ ಹುಳಬಿದ್ದ ಅಕ್ಕಿ ಸೇರಿದಂತೆ ಕಳಪೆ ದಿನಸಿ ಪದಾರ್ಥಗಳು ನೀಡುತ್ತಿದ್ದಾರೆ ಎಂದು ಸಚಿವರು ಹಾಗೂ ಮುಖಂಡರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.