ದನಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಹುಲಿ ಸೆರೆ: ಗ್ರಾಮಸ್ಥರು ನಿರಾಳ
ಕಾರವಾರ, ಡಿಸೆಂಬರ್ 20: ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ದನಗಳನ್ನು ಬೇಟೆಯಾಡಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದು, ಹಂಪಿ ಮೃಗಾಲಯಕ್ಕೆ ಸ್ಥಳಾಂತರಿಸಿದ್ದಾರೆ.
ಉಳವಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಹುಲಿ ದಾಳಿಯಿಂದ ತತ್ತರಿಸಿದ್ದ ಜನತೆ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ದಿನವೂ ಎರಡು ಮೂರು ದನ ಕರುಗಳನ್ನು ಬೇಟೆಯಾಡುತ್ತಿದ್ದ ಹುಲಿ ಸದ್ಯ ಅರಣ್ಯ ಇಲಾಖೆಯ ಬೋನಿನೊಳಗೆ ಬಿದ್ದಿದೆ.
ಮುಖವೇ ಕಾಣದಂತಾಗಿದ್ದ ಕಂದನ ಆರೋಗ್ಯದಲ್ಲಿ ಚೇತರಿಕೆ: ಮಾಧವ ನಾಯಕರ ಸಹಾಯಕ್ಕೆ ಕಣ್ಣೀರಿಟ್ಟ ಕುಟುಂಬ
ಚಂದ್ರಾಳಿ ಬಳಿ 3 ದನಗಳನ್ನು ಮತ್ತು ಹೆಣಕೋಳ ಬಳಿ 3 ದನಗಳನ್ನು ಮತ್ತು ಮೆಳೆಯಲ್ಲಿ ಮೂರು ಎತ್ತುಗಳು ಹುಲಿ ದಾಳಿಗೆ ಬಲಿಯಾಗಿದ್ದವು. ಸೆರೆ ಹಿಡಿದ ಹುಲಿ ವಯಸ್ಸಾದ ಕಾರಣ ಕೊಟ್ಟಿಗೆಯೊಳಗೆ ಕಟ್ಟಿದ ದನಗಳನ್ನೇ ಬಂದು ಹಿಡಿಯುತ್ತಿತ್ತು ಎನ್ನಲಾಗಿದೆ.
ಕೆಲ ದಿನಗಳಿಂದ ಹುಲಿ ದಾಳಿಯಿಂದ ದನಗಳು ಸಾಯುತ್ತಿದ್ದ ಕಾರಣ ಸ್ಥಳೀಯರು ಅರಣ್ಯ ಇಲಾಖೆ ಮೇಲೆ ಕಿಡಿಕಾರುತ್ತಿದ್ದರು, ಶಾಸಕ ಆರ್.ವಿ.ದೇಶಪಾಂಡೆ, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೂ ಹುಲಿ ಸೆರೆಹಿಡಿದು ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.
ರಾತ್ರಿ ವೇಳೆ ದನಗಳನ್ನು ಹಿಡಿಯಲು ಬಂದ ಸಂದರ್ಭದಲ್ಲಿ ಹುಲಿಯನ್ನು ನೋಡಿದ ಸ್ಥಳೀಯರು ' ಹುಲಿ ಬಹಳಷ್ಟು ದೊಡ್ಡದಾಗಿದೆ. ನಾಳೆ ಮನಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಎಚ್ಚರ ವಹಿಸಿಬೇಕು. ನಾಳೆ ನಮ್ಮ ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡಿದರೆ ಕಷ್ಟ' ಎಂದು ಶಾಸಕರಲ್ಲಿ ತಮ್ಮ ಅಳಲನ್ನು ಹೇಳಿಕೊಂಡಿದ್ದರು.
ಕೂಡಲೇ ಈ ಬಗ್ಗೆ ಕಾರ್ಯಪ್ರರ್ವತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಪ್ ಮಾರಿಯೋ ಕ್ರಿಸ್ತರಾಜ ಮಾರ್ಗದರ್ಶನದಲ್ಲಿ ಹುಲಿಗೆ ಬೋನಿನೊಳಗೆ ಆಹಾರವನ್ನು ಇಟ್ಟು ಕೊನೆಗೂ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಹುಲಿ ನಿರಂತರ ದಾಳಿಯಿಂದ ಸ್ಥಳೀಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು, ಸದ್ಯ ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಾಯದಿಂದ ಹುಲಿಯನ್ನು ಸೆರೆಹಿಡಿದು ಸ್ಥಳಾಂತರ ಮಾಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಉಳುವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಹೇಳಿದ್ದಾರೆ.