"ಉತ್ತರ ಕನ್ನಡ ಜಿಲ್ಲೆ ರಿಲ್ಯಾಕ್ಸ್; ಆದರೂ ಲಾಕ್ ಡೌನ್ ಹಿಂಪಡೆಯಲ್ಲ"
ಕಾರವಾರ, ಏಪ್ರಿಲ್ 07: ಸರ್ಕಾರ 'ಕೊರೊನಾ ಹಾಟ್ ಸ್ಪಾಟ್' ಎಂದು ಗುರುತಿಸಲ್ಪಟ್ಟ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಮ್ಮೆಲೇ ಈ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸ್ಪಷ್ಟನೆ ನೀಡಿದ್ದಾರೆ.
'ಸದ್ಯ ಕೊರೊನಾ ಹರಡುವಿಕೆ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಹಾಗಂದ ಮಾತ್ರಕ್ಕೆ ಲಾಕ್ ಡೌನ್ ಆದೇಶ ಹಿಂಪಡೆದು, ಜನರ ಓಡಾಟಕ್ಕೆ ಒಂದೇ ಬಾರಿ ಅನುವು ಮಾಡಿಕೊಡುವ ಆಲೋಚನೆ ಇಲ್ಲ. ಲಾಕ್ ಡೌನ್ ಜಾರಿ ಮಾಡಲು ಬಹಳಷ್ಟು ಶ್ರಮಪಟ್ಟಿದ್ದೇವೆ. ಹೀಗಾಗಿ, ಸದ್ಯ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ, ಲಾಕ್ ಡೌನ್ ಸಡಿಲಿಕೆ ಬಳಿಕ ಯಾರಲ್ಲಾದರೂ ಸೋಂಕು ಕಂಡು ಬಂದರೆ ಮತ್ತೆ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಕಷ್ಟವಾಗಲಿದೆ. ಹೀಗಾಗಿ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲಾಗುವುದು' ಎಂದು ತಿಳಿಸಿದರು.
'ಮೊದಲ ಹಂತವಾಗಿ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗುವುದು. ಬಳಿಕ ಮೀನುಗಾರಿಕೆ ಸೇರಿದಂತೆ ಉಳಿದೆಲ್ಲ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ನೀಡಲಾಗುತ್ತದೆ. ಜನರು ಕೂಡ ಈ ಲಾಕ್ ಡೌನ್ ಗೆ ಹೊಂದಿಕೊಂಡಿದ್ದಾರೆ. ಮನೆಮನೆಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿರುವುದನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಮುಂದೆಯೂ ಸಾರ್ವಜನಿಕರ ಸಹಕಾರ ಅತ್ಯಗತ್ಯ' ಎಂದರು.

ಇಬ್ಬರು ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ
ಈ ನಡುವೆ ಜಿಲ್ಲೆಯ ಎಂಟು ಕೊರೊನಾ ಸೋಂಕಿತರಲ್ಲಿ ಇಬ್ಬರು ಗುಣಮುಖರಾಗಿದ್ದು, ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 'ಗುಣಮುಖರಾದವರಿಗೆ ಕ್ವಾರಂಟೈನ್ ಮಾಡಿ ಜಿಲ್ಲಾಡಳಿತದಿಂದ ನಿಗಾ ಇಡಲಾಗುತ್ತದೆ. 14 ದಿನದ ನಿಗಾವಣೆಯ ಬಳಿಕ ಅವರು ಸಂಪೂರ್ಣ ಗುಣಮುಖರೆಂದು ನಿರ್ಧಾರ ಮಾಡಲಾಗುತ್ತದೆ. ಉಳಿದ ಸೋಂಕಿತರೆಲ್ಲರೂ ಏಪ್ರಿಲ್ 14ರೊಳಗೆ ಗುಣಮುಖರಾಗುವ ವಿಶ್ವಾಸವಿದೆ' ಎಂದು ಅಭಿಪ್ರಾಯಪಟ್ಟರು.
'ಗುಣಮುಖರಾದವರನ್ನು ಹೋಟೆಲ್ ಗಳಲ್ಲಿ ಇರಿಸಲಾಗುವುದು. ಅವರಿಗೆ ಮನೆಗಳಲ್ಲಿ ಐಸೋಲೇಶನ್ ನಲ್ಲಿರಲು ಸಮಸ್ಯೆ ಆಗಬಹುದು ಎಂದು ಹೋಟೆಲ್ ನಲ್ಲಿರಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದರು. 'ದೆಹಲಿ ಜಮಾತ್ ನಲ್ಲಿ ಭಾಗವಹಿಸಿದ್ದ ಜಿಲ್ಲೆಯವರ ವರದಿ ನೆಗೆಟಿವ್ ಬಂದಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಇನ್ನೂ 50 ಮಂದಿಯ ವರದಿ ಬಾಕಿ ಇದೆ. ಮುಂದಿನ ವಾರದಲ್ಲಿ ಜಿಲ್ಲೆಯಲ್ಲಿ ಕೊರೋನಾ ಪರಿಸ್ಥಿತಿ ಸ್ಪಷ್ಟವಾಗಲಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications