ತತ್ವ, ಸಿದ್ದಾಂತ ಒಪ್ಪಿ ಯಾರೂ ಬೇಕಾದರೂ ಬಿಜೆಪಿ ಸೇರಬಹುದು
ಕಾರವಾರ, ಡಿಸೆಂಬರ್ 28; "ಭಾರತೀಯ ಜನತಾ ಪಕ್ಷಕ್ಕೆ ಯಾರೇ ಬಂದರು ಅವರನ್ನು ಸೇರಿಸಿಕೊಳ್ಳುತ್ತದೆ. ಸೈದ್ಧಾಂತಿಕವಾಗಿ ಒಪ್ಪಿ ಬಂದರೆ ಜೆಡಿಎಸ್ ಮಾತ್ರವಲ್ಲ, ಯಾರಿಗೂ ಬೇಡ ಅನ್ನುವುದಿಲ್ಲ" ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಯಲ್ಲಾಪುರದಲ್ಲಿ ಗ್ರಾಮ ಪಂಚಾಯತಿ ಮತದಾನದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. "ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದೆ. ಜೆಡಿಎಸ್ ಆಗಾಗ ಈ ರೀತಿ ಮಾಡುತ್ತದೆ. ಒಂದು ಬಾರಿ ಕಾಂಗ್ರೆಸ್, ಇನ್ನೊಂದು ಬಾರಿ ಬಿಜೆಪಿ ಎಂದು ಹೋಗುತ್ತಾರೆ. ಅವರಾಗಿಯೇ ಬಂದರೆ ಇಲ್ಲ ಎನ್ನುವುದಿಲ್ಲ. ಪಕ್ಷದ ನಾಯಕರು ಈ ಬಗ್ಗೆ ನಿರ್ಧರಿಸಲಿದ್ದಾರೆ" ಎಂದರು.
"ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಯಾರೇ ಬಂದು ಸ್ಪರ್ಧಿಸಿದರೂ ಎದುರಿಸುವ ಸಾಮರ್ಥ್ಯ ಭಾರತೀಯ ಜನತಾ ಪಕ್ಷಕ್ಕೆ ಇದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಯಾರೇ ಬಂದರೂ ಸಮರ್ಥವಾಗಿ ಎದುರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಸಂತೋಷ್ ಲಾಡ್ ಈ ಹಿಂದೆ ಬಳ್ಳಾರಿಯಲ್ಲಿ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದಾದ ನಂತರ ಧಾರವಾಡ ಜಿಲ್ಲೆಯ ಕಲಘಟಗಿಗೆ ಬಂದು ಸ್ಪರ್ಧಿಸಿದರು. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷ. ಅವರಿಗೆ ಟಿಕೆಟ್ ನೀಡಿದರೆ ತಪ್ಪೇನು?. ಆದರೆ, ಮುಂದೆ ಅವರು ಚುನಾವಣೆಗೆ ಎಲ್ಲಿ ನಿಲ್ಲುತ್ತಾರೆ? ಎನ್ನುವುದನ್ನು ಕಾದು ನೋಡೋಣ" ಎಂದು ಸಚಿವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾರ್, "ಸಮಾಜಘಾತುಕ ಶಕ್ತಿಗಳಿಗೆ ಈ ದೇಶ ಹಾಗೂ ರಾಜ್ಯದಲ್ಲಿ ಸ್ಥಾನವಿಲ್ಲ" ಎಂದು ತಿಳಿಸಿದರು.
"ಯಾವುದೇ ರಾಜ್ಯಾಧ್ಯಕ್ಷರ ಕಚೇರಿ ಇರಲಿ, ಮುತ್ತಿಗೆ ಹಾಕುವುದು ಸರಿಯಲ್ಲ. ಸಮಾಜಘಾತುಕ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ" ಎಂದು ಸಚಿವರು ಎಚ್ಚರಿಕೆಯನ್ನು ನೀಡಿದರು.
"ಕರ್ನಾಟಕದಲ್ಲಿಯೂ ಕೋವಿಡ್ ಲಸಿಕೆ ಹಂಚಿಕೆ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು. ಈಗಾಗಲೇ ಲಸಿಕೆ ನೀಡುವ ಬಗ್ಗೆ ತರಬೇತಿಯನ್ನ ಸಹ ನೀಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.












Click it and Unblock the Notifications