ಕಾರವಾರ; ವಿದ್ಯಾರ್ಥಿಗಳ ಮನವೊಲಿಸಲು ಊರೂರು ಸುತ್ತುತ್ತಿರುವ ಉಪನ್ಯಾಸಕರು
ಕಾರವಾರ, ಸೆಪ್ಟೆಂಬರ್ 19: ಕೊರೊನಾ ಆತಂಕದಿಂದ ವಿದ್ಯಾರ್ಥಿಗಳು ದಾಖಲಾತಿಗೆ ಮುಂದಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಕಾಲೇಜಿನ ಸಿಬ್ಬಂದಿಯೇ ಊರೂರು ತಿರುಗಿ ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ಆತಂಕದಿಂದ ಮುಂಡಗೋಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ನಿರೀಕ್ಷಿತ ಮಟ್ಟದಲ್ಲಿ ದಾಖಲಾತಿ ಆಗುತ್ತಿಲ್ಲ. ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ. ಎರಡನೇ ಮುಂದುವರೆದ ಸುತ್ತು ಇದಾಗಿದೆ. ಹೀಗಾಗಿ ಬಸ್ ನಿಲ್ದಾಣದ ಮುಂಭಾಗ, ಪ್ರಮುಖ ರಸ್ತೆಗಳ ಬದಿಯಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಸೇರಿದಂತೆ ಇತರೆಡೆ ಪ್ರವೇಶ ಆರಂಭದ ಬ್ಯಾನರ್ ಅಳವಡಿಸಿದರೂ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದೆ.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಶಿಗ್ಗಾವಿ, ಬಂಕಾಪುರ, ಸವಣೂರು, ಯಲ್ಲಾಪುರ, ಶಿರಸಿ, ಕಿರವತ್ತಿ, ಕಲಘಟಗಿ, ಹಾನಗಲ್ ಸೇರಿದಂತೆ ಇತರೆಡೆ ತೆರಳಿ ದಾಖಲಾತಿಯ ಪ್ರಚಾರ ಮಾಡಿದ್ದಾರೆ. ಕೆಲವು ಪ್ರೌಢಶಾಲೆಗಳಿಗೆ ತೆರಳಿ ಭಿತ್ತಿಪತ್ರ ನೀಡಿದ್ದಾರೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂದೇಶವಿರುವ ವಿಡಿಯೊ ಮಾಡಿ, ಸಾಮಾಜಿಕ ತಾಣದಲ್ಲಿಯೂ ಪ್ರಚಾರ ಮಾಡಿದ್ದಾರೆ. 4000 ಕರೆಗಳ ಮೂಲಕ ವಿದ್ಯಾರ್ಥಿ ಹಾಗೂ ಪಾಲಕರೊಡನೆ ಸಂಪರ್ಕ ನಡೆಸಿದ್ದಾರೆ. ಒಟ್ಟು 252 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಇಷ್ಟೆಲ್ಲ ಪ್ರಚಾರಗಳಾದರೂ ಪ್ರಥಮ ವರ್ಷದ ಪ್ರವೇಶಕ್ಕೆ ಇಲ್ಲಿಯವರೆಗೆ ಶೇ 12ರಷ್ಟು ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಮಾಡಿದ್ದಾರೆ.

ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಿಗೆ ಕಲಿಯಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ಬಿಸಿಎಂ ವಸತಿ ನಿಲಯದ ಸೌಲಭ್ಯವಿದೆ. ಕರಗಿನಕೊಪ್ಪದಲ್ಲಿ ಹೊಸ ಕಟ್ಟಡವೂ ಸಜ್ಜಾಗಿದೆ. ಆದರೆ ಎಷ್ಟು ದಾಖಲಾತಿಯಾಗುತ್ತದೋ ತಿಳಿಯದಾಗಿದೆ.












Click it and Unblock the Notifications