ಮಹಾರಾಷ್ಟ್ರದಿಂದ ಬರುವವರ ಕೈಗೆ ಸೀಲ್: ಉತ್ತರ ಕನ್ನಡ ಜಿಲ್ಲಾಧಿಕಾರಿ
ಕಾರವಾರ, ಜೂನ್ 26: ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಡೆಲ್ಟಾ ವೈರಸ್ ಸೋಂಕಿನ ಮಾದರಿ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿರುವುದು ತಿಳಿದಿದೆ.
ಹೀಗಾಗಿ, "ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ್ ಹಾಗೂ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡಿಯೇ ಒಳಗೆ ಬಿಡುತ್ತಿದ್ದು, ಡೆಲ್ಟಾ ಪ್ಲಸ್ ವೈರಸ್ ಹರಡದಂತೆ ಹೆಚ್ಚಿನ ನಿಗಾ ಇಡಲಾಗಿದೆ,'' ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.
'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ಪ್ರತಿ ಹದಿನೈದು ದಿನಕ್ಕೊಮ್ಮೆ ಸೋಂಕಿತರ ಗಂಟಲು ದ್ರವವನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಲಸಿಕೆ ತೆಗೆದುಕೊಂಡ ನಂತರವೂ ಕೊರೊನಾ ಧೃಡಪಟ್ಟಿದ್ದರೆ, ಅವರಿಗೆ ಕೋವಿಡ್ ರೂಪಾಂತರ ವೈರಸ್ ಲಕ್ಷಣ ಇದೆಯೇ, ಎರಡನೇ ಬಾರಿಗೆ ಸೋಂಕು ದೃಢಪಟ್ಟರೆ ಅವರಲ್ಲಿ ಬೇರೆ ವೈರಸ್ ಕಂಡು ಬಂದಿದೆಯೇ ಎನ್ನುವುದನ್ನು ತಿಳಿಯುವ ನಿಟ್ಟಿನಲ್ಲಿ ಕಳುಹಿಸಲಾಗುತ್ತಿದೆ,'' ಎಂದು ತಿಳಿಸಿದ್ದಾರೆ.

"ಸರ್ಕಾರದ ಮಟ್ಟದಲ್ಲಿ ಅಂತರ್ ಜಿಲ್ಲೆ, ರಾಜ್ಯ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ಆದರೆ ಜಿಲ್ಲಾಡಳಿತ ರೈಲ್ವೆ ನಿಲ್ದಾಣ ಹಾಗೂ ಚೆಕ್ಪೋಸ್ಟ್ನಲ್ಲಿ ನಿಗಾ ಇಟ್ಟಿದ್ದು, ಮಹಾರಾಷ್ಟ್ರದಿಂದ ಬರುವವರಿಗೆ ಕೈಗೆ ಸೀಲ್ ಹಾಕುವುದು, ಕ್ವಾರಂಟೈನ್ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ,'' ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.












Click it and Unblock the Notifications