ಮತಗಟ್ಟೆ ಸಮೀಪವೇ ಬಾಡೂಟ; ಹಣ ಕಡಿಮೆ ಕೊಟ್ಟಿದ್ದಕ್ಕೆ ಮಹಿಳೆಯ ರಂಪಾಟ
ಯಲ್ಲಾಪುರ, ಡಿಸೆಂಬರ್ 6: ಕ್ಷೇತ್ರದ ಬಹುತೇಕ ಮತಗಟ್ಟೆಗಳ ಕೊಂಚ ದೂರದಲ್ಲೇ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಅಭ್ಯರ್ಥಿಯೊಬ್ಬರು ಮಧ್ಯಾಹ್ನದ ಬಾಡೂಟ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮೀಣ ಭಾಗವೊಂದರ ವೃದ್ಧೆಯೊಬ್ಬರು ಪಕ್ಷದ ಮುಖಂಡರೊಬ್ಬರನ್ನು ಕಡಿಮೆ ಹಣ ನೀಡಿದ ಕಾರಣ ತರಾಟೆಗೆ ತೆಗೆದುಕೊಂಡಿದ್ದಾರೆ. ಅನೇಕ ನಾಯಕರ ಹೆಸರು ಹೇಳಿ ಅವರಿಗೆ ಶಾಪ ಹಾಕಿದ್ದಾರೆ.
'ಒಂದು ಮತಕ್ಕೆ ಸಾವಿರ ರೂಪಾಯಿ ಕೊಡುವುದಾಗಿ ತಿಳಿಸಿ 900 ರೂ. ಮಾತ್ರ ನೀಡಿದ್ದಾರೆ. ಬಡವರ ದುಡ್ಡನ್ನು ಮುಖಂಡರು ಹೊಡೆದಿದ್ದಾರೆ' ಎಂದು ವಯೋವೃದ್ಧ ಮತದಾರರೊಬ್ಬರು ಅಸಮಾಧಾನಗೊಂಡರು. ಮತಗಟ್ಟೆ ಹೊರ ಭಾಗದಲ್ಲಿ ಚೀಲದಲ್ಲಿ ಹಣ ತಂದಿದ್ದ ವ್ಯಕ್ತಿಯೊಬ್ಬರು, ಮತ ಚಲಾಯಿಸಿ ಬಂದವರ ಕೈ ಬೆರಳು ಹಾಗೂ ಚುನಾವಣಾ ಆಯೋಗ ನೀಡಿದ ವೋಟರ್ ಸ್ಲಿಪ್ ಗಮನಿಸಿ ಹಣ ಎಣಿಸಿ ನೀಡುತ್ತಿರುವುದು ಮತಗಟ್ಟೆಯೊಂದರಲ್ಲಿ ಕಂಡು ಬಂದಿತು.
ಈ ನಡುವೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರಿಗೆ ಮತದಾನ ಮಾಡಿದ ಫೋಟೊವೊಂದು ಗುರುವಾರ ಮಧ್ಯಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫೋಟೊ ಹಂಚಿಕೊಂಡ ಮತದಾರನನ್ನು ಎಂ.ಕಿರಣ್ ಎಂದು ಗುರುತಿಸಲಾಗಿದೆ. ಮತದಾನದ ವೇಳೆ ಮೊಬೈಲ್ ನಿಷೇಧವಿದ್ದರೂ, ಮತಗಟ್ಟೆಗೆ ಅಕ್ರಮವಾಗಿ ಮೊಬೈಲ್ ಕೊಂಡೊಯ್ದು, ಹೆಬ್ಬಾರ್ ಅವರಿಗೆ ಮತ ಹಾಕುವ ಫೋಟೊವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಸಿಇಒ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.












Click it and Unblock the Notifications