Get Updates
Get notified of breaking news, exclusive insights, and must-see stories!

ಬಡ ರೈತನನ್ನು ಸಾಲದ ನೆರಳಿನಿಂದ ಆಚೆ ತಂದ ಉದ್ಯೋಗ ಖಾತ್ರಿ

ಕಾರವಾರ, ಜುಲೈ 06; ನಾಡಿಗೆ ಅನ್ನ ನೀಡುವ ರೈತನಿಗೆ ಸಾಲ ಎಂಬುದು ಬೆನ್ನುಬಿಡದ ಬೇತಾಳವಿದ್ದಂತೆ. ಆದರೆ ತಲೆಮಾರಿನಿಂದಲೂ ರೂಢಿಯಲ್ಲಿ ಬಂದಿರುವ ಬೇಸಾಯ ಪದ್ಧತಿ ಬಿಡದೇ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಸಾಲದ ಸೋಲ ನಿವಾರಿಸಿಕೊಳ್ಳುತ್ತಾ ಸಾಗುವ ಮೂಲಕ ರೈತರೊಬ್ಬರು ಆತ್ಮಹತ್ಯೆಯಂಥ ಹಾದಿ ಹಿಡಿಯುವ ರೈತರಿಗೆ ಮಾದರಿಯಾಗಿದ್ದಾರೆ.

ಮುಂಡಗೋಡ ತಾಲೂಕಿನ ಪಾಳಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಗಳಕಿ ಗ್ರಾಮದ ಒಂದು ಚಿಕ್ಕ ಮನೆಯಲ್ಲಿ ಮಡದಿ, ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳೊಂದಿಗೆ ವಾಸ ಮಾಡುತ್ತಿರುವ ಫಕೀರಪ್ಪ ಹಿರೂರು ಈ ಮಾದರಿ ರೈತ. ಬಡತನದ ಬೇಗೆ ಇದ್ದರೂ ಮಕ್ಕಳಿಗೆ ಎರಡಕ್ಷರ ಕಲಿಸುವ ಹಂಬಲದಿಂದ ಒಂದಿಷ್ಟೂ ಹುರುಳಿಲ್ಲದೆ ಸಾಲಸೋಲ ಮಾಡಿ ಅವರಿಗೆ ಅಕ್ಷರ ಜ್ಞಾನಕ್ಕೆ ದಿಟ್ಟ ಪ್ರೋತ್ಸಾಹ ನೀಡುತ್ತಿದ್ದಾರೆ. ಮಕ್ಕಳಿಗೆ ಮೆಟ್ರಿಕ್, ಬಿ.ಇಡಿ, ಐಟಿಐ ಕಲಿಸಿದರೂ ಈ ಸ್ಪರ್ಧಾತ್ಮಕ ಯುಗಕ್ಕೆ ಅವುಗಳು ಗೌಣ. ಹೀಗಾಗಿ ತಮಗಿರುವ ಮೂರು ಎಕರೆ ಹದಿನಾರು ಗುಂಟೆ ಜಮೀನಿನಲ್ಲಿ ಹೊಟ್ಟೆ ಹಿಟ್ಟಿಗಾಗಿ ಬೆವರಿನ ಹೊಳೆ ಹರಿಸಿ ತಾವೂ ಜೀವನದ ಬಂಡಿ ಸಾಗಿಸಲು ದುಡಿಯುತ್ತಾರೆ.

ಈ ರೀತಿಯ ಹೋರಾಟದ ನಡುವೆಯೂ ಹರಿಸಿದ ಬೆವರಿನ ಹೊಳೆಗೆ ಹಿಟ್ಟಿನ ಪಾಲು ಸಿಗುವುದು ವರ್ಷದ ಕೊನೆಯಲ್ಲಿ. ಭತ್ತ ಬೆಳೆಯುತ್ತಿರುವ ಫಕೀರಪ್ಪನಿಗೆ ಮಳೆರಾಯನ ಆಶೀರ್ವಾದ ಇದ್ದರೆ ಆ ವರ್ಷ ಉತ್ತಮ ಫಸಲು. ವರ್ಷದ ಬೆಳೆಗೆ 60 ಸಾವಿರ ಖರ್ಚು ಮಾಡುವ ಫಕೀರಪ್ಪ, ಆ ಫಸಲಿಗೆ ಉತ್ತಮ ಬೆಲೆ ದೊರೆತರೆ ಕೊಂಚ ಸಮಾಧಾನ. ಇಲ್ಲದಿದ್ದರೆ ಇನ್ನಷ್ಟು ಸಾಲಕ್ಕೆ ಸೊಸೈಟಿ, ಬ್ಯಾಂಕುಗಳಿಗೆ ಎಡತಾಕುತ್ತಿದ್ದರು.

ಬಯಲು ಸೀಮೆಯ ಪರಿಧಿಗೆ ಒಳಪಟ್ಟ ಮುಂಡಗೋಡ ತಾಲೂಕಿನ ಪಾಳಾದಲ್ಲಿ ಮಳೆರಾಯನ ಒಲುಮೆ ಕೂಡ ಹೇಳಿಕೊಳ್ಳುವಷ್ಟು, ಅಂದರೆ ಭತ್ತಕ್ಕೆ ಬೇಕಾಗುವ ಪ್ರಮಾಣದಲ್ಲಿ ದೊರೆಯುವುದು ವಿರಳ. ಆದರೂ ಅದೆಷ್ಟೋ ರೈತರು ಮಳೆಯರಾಯನ ಮೇಲೆ ನಂಬಿಕೆಯಿಟ್ಟು ಭೂಮಿ ಹೂಟೆ ಮಾಡುವ ಕೆಲಸದಲ್ಲಿ ಬೆವರು ಸುರಿಸುತ್ತಾರೆ. ಏನೇ ಇದ್ದರೂ ಇಲ್ಲಿನ ರೈತರ ಪಾಡು ಮಳೆಯ ಪ್ರಮಾಣದ ಮೇಲೆ ಆಧಾರಿತವಾಗಿದೆ. ಇದಕ್ಕೆ ಫಕೀರಪ್ಪ ಕೂಡ ಹೊರತಾಗಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿಯ ಕೊರೆಯಿಸಿದ ಬೋರ್‌ವೆಲ್ ಇವರ ಜಮೀನಿಗೆ ವರದಾನವಾಗಿದೆ.

ನರೇಗಾದ ಮಾಹಿತಿ ನೀಡಿದ ಪಠಾಣ್

ನರೇಗಾದ ಮಾಹಿತಿ ನೀಡಿದ ಪಠಾಣ್

ಭತ್ತ ಬೆಳೆಯಲು ಫಕೀರಪ್ಪ ಮಾಡಿಕೊಂಡಿದ್ದ ಲಕ್ಷಗಟ್ಟಲೇ ಸಾಲ ಪ್ರತಿವರ್ಷವೂ ಹೆಚ್ಚಳವಾಗುತ್ತಲೇ ತೊಡಗಿತ್ತು. ಈ ಸಂದರ್ಭದಲ್ಲಿ ಈತನಿಗೆ ದೇವರಂತೆ ಕಂಡವರು ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ. ಬಿ. ಪಠಾಣ್. ಇಂದಿಗೂ ಫಕೀರಪ್ಪ ಇವರನ್ನು ಅಪಾರ ಗೌರವದಿಂದ, ಆತ್ಮಾನಂದದಿಂದ ನೆನೆಯುತ್ತಾರೆ. ಅವರಿಂದ ಊಟ ಮಾಡುತ್ತಿದ್ದೇವೆ ಎಂದು ಉಚ್ಛರಿಸುತ್ತಾರೆ. ನರೇಗಾ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿ, ಉತ್ತಮ ಆದಾಯ ಗಳಿಸಬಹುದು ಎಂದು ಪಠಾಣ್ ಮಾಹಿತಿಗಳನ್ನು ತಿಳಿಸಿದರು. ಅವರ ಮಾಹಿತಿಯಾಧಾರದಲ್ಲಿ ಬೇಡಿಕೆ ಸಲ್ಲಿಸಿದ ಫಕೀರಪ್ಪನಿಗೆ ಅಡಿಕೆ ತೋಟದ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗೆ ಕೂಡ ಪಠಾಣ್ ಸಹಕರಿಸಿದರು.

76 ಸಾವಿರಕ್ಕೆ ತೋಟ ನಿರ್ಮಾಣ

76 ಸಾವಿರಕ್ಕೆ ತೋಟ ನಿರ್ಮಾಣ

2014-15ನೇ ಸಾಲಿನಲ್ಲಿ ನಿರ್ಮಾಣದ ಸಿದ್ಧತೆಗಳನ್ನು ಪ್ರಾರಂಭಿಸಿ, ಕಾಮಗಾರಿಗೆ 78,909 ರೂ.ಗಳ ಮೊತ್ತಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಿ ನರೇಗಾ ಯೋಜನೆಯಡಿ ಅನುಷ್ಠಾನಕ್ಕೆ ಹಸಿರು ನಿಶಾನೆಯೊಂದಿಗೆ ಕಾಮಗಾರಿ ವಿಶ್ವಾಸದ ನಿರೀಕ್ಷೆಯಲ್ಲಿ ಸಾಗಿತು. 350 ಮಾನವ ದಿನಗಳ ಸೃಜನೆಯಾಗಿ 575 ಗುಂಡಿಗಳ ನಿರ್ಮಾಣವಾಯಿತು. ಪ್ರತಿ ಅಡಿಕೆ ಸಸಿಗೆ 15 ರೂ.ನಂತೆ 575 ಗಿಡಗಳಿಗೆ 8,625 ರೂ.ಗಳು ಮತ್ತು 350 ದಿನಕ್ಕೆ 191ರೂ. ಕೂಲಿಯಂತೆ 67,626 ರೂ., ಒಟ್ಟು 76,251 ರೂ.ಗಳ ಮೊತ್ತಕ್ಕೆ ತೋಟ ನಿರ್ಮಾಣವಾಯಿತು. ಅಡಿಕೆ ಗಿಡಗಳಿಗೆ ನೆರಳಿನ ವ್ಯವಸ್ಥೆಗಾಗಿ ಬಾಳೆಗಿಡಗಳನ್ನು ನೆಡಲಾಯಿತು. ನರೇಗಾ ಯೋಜನೆಯಡಿ ನಿರ್ಮಾಣವಾದ ಅಡಿಕೆ ತೋಟ ಕಂಡು ಫಕೀರಪ್ಪನಿಗೆ ಒಂದು ಹೊಸ ಭರವಸೆ, ಚೈತನ್ಯ ಮೂಡಿತು.

ಫಸಲು ಬರಲು ಶುರುವಾಗಿದೆ

ಫಸಲು ಬರಲು ಶುರುವಾಗಿದೆ

"4 ರಿಂದ 5 ವರ್ಷಗಳಲ್ಲಿ ಅಡಿಕೆ ಫಲ ಬರಲು ಶುರುವಾಗಿ, ಪ್ರಥಮ ಫಲ 60 ಸಾವಿರ ರೂ.ಗಳ ಆದಾಯ ದೊರೆತಾಗ ಎಲ್ಲಿಲ್ಲದ ಖುಷಿ. ನಂತರದ ವರ್ಷದಲ್ಲಿ 1 ಲಕ್ಷ ಆದಾಯ ದೊರೆಯಿತು, ಪ್ರಸಕ್ತ ಸಾಲಿನಲ್ಲಿ 1.40 ಲಕ್ಷ ದೊರೆಯುವ ವಿಶ್ವಾಸವಿದೆ" ಎಂದು ಖುಷಿಯಿಂದಲೇ ನುಡಿಯುತ್ತಾರೆ ಫಕೀರಪ್ಪ.

"ಅಡಿಕೆ ತೋಟ ಬೆಳೆದು ಇಂದಿಗೆ 7 ವರ್ಷ. ಅದರ ಜೊತೆಯಲ್ಲಿ ಒಂದು ಟ್ರ‍್ಯಾಕ್ಟರ್ ಅನ್ನು ಸಹ ಖರೀದಿಸಿರುವ ಫಕೀರಪ್ಪ, 4 ಲಕ್ಷ ಇದ್ದ ಸಾಲವನ್ನು 2.5 ಲಕ್ಷಕ್ಕೆ ತಂದು ನಿಲ್ಲಿಸಿದ್ದಾರೆ. ಸಾಲಗಳು ಕಡಿಮೆಯಾಗುತ್ತಿದೆ. ಆದಾಯವು ಸಹ ಬರುತ್ತಿದೆ. ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ" ಎನ್ನುತ್ತಾರೆ.

"ನರೇಗಾದಿಂದಾಗಿ ಅಡಿಕೆ ತೋಟ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ನಿರೀಕ್ಷೆಗೂ ಮೀರಿ ಲಾಭ ದೊರೆಯುತ್ತಿದೆ. ಭತ್ತ ಒಂದೇ ಬೆಳೆಯುತ್ತಿದ್ದ ನಾನು ನೀರಿನ ಕೊರತೆಯನ್ನೂ ನೀಗಿಸಿಕೊಂಡು ಈಗ ಗೋವಿನ ಜೋಳವನ್ನು ಸಹ ಬೆಳೆಯಲಾರಂಭಿಸಿದ್ದು, ಪ್ರತಿವರ್ಷ ಹೆಚ್ಚುವರಿಯಾಗಿ 25 ಸಾವಿರ ಇದರಿಂದ ಗಳಿಸುತ್ತಿದ್ದೇನೆ" ಎಂದು ಸಂತೋಷದಿಂದ ಹೇಳುತ್ತಾರೆ.

Recommended Video

    ಮಳೆಯ ಕಾರಣ ಜಪಾನ್ನಲ್ಲಿ ಭೂ ಕುಸಿತ | Flood Warning | Oneindia Kannada
    ರೈತರಿಗೆ ವರದಾನವಾದ ನರೇಗಾ

    ರೈತರಿಗೆ ವರದಾನವಾದ ನರೇಗಾ

    ರೈತರಿಗೆ ನರೇಗಾ ಯೋಜನೆ ಬಹುದೊಡ್ಡ ವರದಾನವಾಗಿದೆ. ಪಶ್ಚಿಮ ಫಟ್ಟ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಪೂರಕವಾದ ವಾತಾವರಣ ಇರುವುದರಿಂದ ಇಂತಹ ತೋಟಗಳ ನಿರ್ಮಾಣ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಪ್ರಮುಖವಾಗಿ ಅಡಿಕೆ ಬೆಳೆದ ರೈತರಿಗೆ ಖರ್ಚು ಒಂದು ಭಾಗವಾದರೆ, ಅದರಿಂದ ದೊರೆಯುವ ಲಾಭ ಮೂರುಪಟ್ಟಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದ ಬಡ ರೈತರಿಗೆ ನರೇಗಾ ಬೆನ್ನೆಲುಬಾಗಿ ನಿಂತಂತಾಗಿದೆ.

    ಉತ್ತರ ಕನ್ನಡದಲ್ಲಿ ನರೇಗಾ ಯೋಜನೆಯಡಿ ಸುಮಾರು 200 ಹೆಕ್ಟೇರ್‌ಗಳಷ್ಟು ಭೂಮಿಯಲ್ಲಿ ಅಡಿಕೆ ತೋಟ ನಿರ್ಮಾಣ ಅನುಷ್ಠಾನಗೊಳ್ಳುತ್ತಿದೆ ಎನ್ನಲಾಗಿದೆ. ಇದು ಅತ್ಯುತ್ತಮ, ಆಶಾದಾಯಕ, ಆದಾಯದಾಯಕ ಕಾಮಗಾರಿಯಾಗಿದ್ದು, ಅದೆಷ್ಟೋ ಬಡ ರೈತರಿಗೆ, ದುಡಿಯುವ ಕೈಗಳಿಗೆ ಯಾವುದೇ ಮೋಸವಿಲ್ಲದೆ ಉನ್ನತಿಯ ಎಡೆಗೆ ಕರೆದೊಯ್ಯುತ್ತಿದೆ. ಫಕೀರಪ್ಪನಂತಹ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡ ಸಮುದಾಯಕ್ಕೂ ಕೂಡ ಈ ಯೋಜನೆ ಪೋಷಣೆ ನೀಡುತ್ತಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+