ವಿದ್ಯುತ್ ಬಿಲ್ ಕಟ್ಟುವ ನೆಪದಲ್ಲಿ 3.33 ಲಕ್ಷ ರೂಪಾಯಿ ವಂಚಿಸಿದ ಖದೀಮರು
ಕಾರವಾರ ಅಕ್ಟೋಬರ್ 18 : ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ನಾನಾ ರೀತಿಯಲ್ಲಿ ವಂಚಿಸಿ ಹಣವನನ್ನು ಲಪಟಾಯಿಸುವ ಪ್ರಕರಣಗಳು ನಡೆಯುತ್ತಿರುತ್ತದೆ. ಅದೇ ರೀತಿ ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಕಡಿತ ಮಾಡಲಾಗುವುದು ಎಂದು ನಂಬಿಸಿ 3.33 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ ಪ್ರಕರಣ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರ ತಾಲೂಕಿನ ಅರಗಾ ಗ್ರಾಮದ ನೇವಲ್ ಬೇಸಿನಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ರಾಜಕುಮಾರ್ ಎನ್ನುವವರಿಗೆ ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡ ಬಗ್ಗೆ ರಾಜಕುಮಾರ್ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ರಾಜಕುಮಾರ್ ಅವರ ಮೊಬೈಲ್ ನಂಬರಿಗೆ ಅಕ್ಟೋಬರ್ 16 ರಂದು ಅಪರಿಚಿತ ನಂಬರ್ನಿಂದ ಮೆಸೇಜ್ ಬಂದಿದೆ. ನಿಮ್ಮ ವಿದ್ಯುತ್ ಬಿಲ್ ಬಾಕಿ ಇದೆ. ಇಂದು ಪಾವತಿಸಿದೇ ಇದ್ದರೆ ರಾತ್ರಿ 10.30 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಮೆಸೇಜ್ ಬಂದಿತ್ತು. ಅಲ್ಲದೇ ಮೊಬೈಲ್ ಸಂಖ್ಯೆಯೊಂದನ್ನು ನೀಡಿ ವಿದ್ಯುತ್ ಇಲಾಖೆ ಅಧಿಕಾರಿಯ ನಂಬರ್ಗೆ ಸಂಪರ್ಕಿಸುವಂತೆ ತಿಳಿಸಲಾಗಿತ್ತು.

ಮೊಬೈಲ್ಗೆ ಬಂದ ಸಂದೇಶವನ್ನು ನಂಬಿದ ರಾಜಕುಮಾರ್ ಆರೋಪಿತರ ಮೊಬೈಲ್ಗೆ ಸಂಪರ್ಕಿಸಿದ್ದಾರೆ. ಈ ವೇಳೆ ವಂಚಕರು, ಟೀಮ್ ವ್ಯೂವರ್ ಮತ್ತು ಆಟೋ ಫಾರ್ವಡ್ ಎಸ್ಎಂಎಸ್ ಟು ಫೋನ್ ಎನ್ನುವ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದ್ದರು. ಬಳಿಕ ವಂಚಕರು ವಾಟ್ಸಾಪ್ಗೆ ವಿಡಿಯೋ ಕರೆ ಮಾಡಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನು ತೋರಿಸುವಂತೆ ತಿಳಿಸಿದ್ದರು. ವಂಚಕರ ಮಾತು ನಂಬಿದ ರಾಜಕುಮಾರ್ ಅವರು ಹೇಳಿದಂತೆ ಮಾಡಿದ್ದಾರೆ.
ಅದಾದ ನಂತರ ಕೆಲವೇ ಕ್ಷಣಗಳಲ್ಲಿ ರಾಜಕುಮಾರ್ ಅವರ ಎಸ್ಬಿಐ ಡೆಬಿಟ್ ಕಾರ್ಡಿನಿಂದ 14,165 ರೂಪಾಯಿ, ಏಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡಿನಿಂದ 99,109 ರೂಪಾಯಿ ಹಾಗೂ ಕ್ರೆಡಿಟ್ ಕಾರ್ಡ್ನಿಂದ 2,19,985 ರೂಪಾಯಿ ಸೇರಿ ಒಟ್ಟು 3,33,259 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ.
ವಂಚಕರಿಂದ ಮೋಸ ಹೋಗಿರುವ ಬಗ್ಗೆ ತಿಳಿದ ರಾಜಕುಮಾರ್ ಕೂಡಲೇ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣ ದಾಖಲಾದ ಬಳಿಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿರುವ ಸಿ.ಇ.ಎನ್ ಪೊಲೀಸ್ ಠಾಣೆ ನೀರೀಕ್ಷಕ ಆನಂದ ಮೂರ್ತಿ, "ಜನರು ಮೊಬೈಲ್ನಲ್ಲಿ ಬರುವ ಮೆಸೇಜ್ಗಳನ್ನು ನಂಬಿ ಮೋಸಹೋಗಬಾರದು," ಎಂದು ಮನವಿ ಮಾಡಿದ್ದಾರೆ.
ಇನ್ನು "ಇಂತಹ ಮೆಸೇಜ್ಗಳನ್ನು ಯಾರು..? ಯಾಕಾಗಿ ಕಳುಹಿಸಿದ್ದಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಒಂದೊಮ್ಮೆ ಆರೋಪಿತರು ಹಣವನ್ನು ಲಪಟಾಯಿಸಿದ್ದು ಗೊತ್ತಾದರೆ ತಕ್ಷಣ ಸಿ.ಇ.ಎನ್ ಠಾಣೆಗೆ ಬಂದು ದೂರು ಕೊಡಿ. ಇಲ್ಲದಿದ್ದರೇ 1930ಗೆ ಸಂಪರ್ಕಿಸಿದರೆ ಬ್ಯಾಂಕಿನಿಂದ ಡ್ರಾ ಆದ ಹಣವನ್ನು ಹೋಲ್ಡ್ ಮಾಡಬಹುದು. ಅನಾವಶ್ಯಕವಾಗಿ ವಂಚನೆಗೊಳಗಾಗಿ ಹಣ ಕಳೆದುಕೊಳ್ಳಬಾರದು. ಜನರು ಸೈಬರ್ ವಂಚಕರಿಂದ ಸದಾ ಎಚ್ಚರದಿಂದ ಇರಬೇಕು," ಎಂದು ತಿಳಿಸಿದ್ದಾರೆ.












Click it and Unblock the Notifications