ಪ್ಯಾಕೇಜ್ ಗುತ್ತಿಗೆಗೆ ಹೈಕೋರ್ಟ್ ತಡೆ: ಕಾರವಾರ ಗುತ್ತಿಗೆದಾರರಿಗೆ ಮೊದಲ ಹೆಜ್ಜೆಯಲ್ಲೇ ಗೆಲುವು
ಉತ್ತರ ಕನ್ನಡ, ಸೆಪ್ಟೆಂಬರ್ 10: ಪ್ಯಾಕೇಜ್ ಗುತ್ತಿಗೆಯ ವಿರುದ್ಧ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ಮಾನ್ಯ ಮಾಡಿದೆ. ನಗರೋತ್ಥಾನ ಕಾಮಗಾರಿಗಳನ್ನ ಪ್ಯಾಕೇಜ್ ಟೆಂಡರ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.
ನಗರಸಭೆಯು ನಗರೋತ್ಥಾನ ಹಂತ- 4ರಲ್ಲಿ 18 ಕೋಟಿ ರೂಪಾಯಿ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲು ಟೆಂಡರ್ ಕರೆದಿತ್ತು. ಇದರಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ಕಾಮಗಾರಿಗಳು ಸೇರಿವೆ. ಈ ಬಗ್ಗೆ ಗುತ್ತಿಗೆದಾರರ ಸಂಘದಿಂದ ಹೈಕೋರ್ಟ್ ವಕೀಲ ಶರಣು ಅವರನ್ನು ಸಂಪರ್ಕಿಸಿ, ಎ.ಸಿ.ಚಾಕಲಬ್ಬಿ ಅಸೋಶಿಯೇಟ್ ಧಾರವಾಡದ ಮೂಲಕ ಹೈಕೋರ್ಟ್ ಧಾರವಾಡ ಪೀಠಕ್ಕೆ ಪ್ಯಾಕೇಜ್ ರದ್ಧತಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲಾಗಿತ್ತು. ಎಲ್ಲಾ ಪೂರಕ ದಾಖಲೆಗಳನ್ನು ಪರಿಗಣಿಸಿದ ಕೋರ್ಟ್, ನಗರೋತ್ಥಾನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಈ ಆದೇಶ ಗುತ್ತಿಗೆದಾರರಲ್ಲಿ ಸಂತಸ ಮೂಡಿಸಿದ್ದು, ನಗರಸಭೆಯ ಗಾಂಧಿ ಪಾರ್ಕ್ನಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚುವ ಮೂಲಕ ಕೋರ್ಟ್ ಆದೇಶವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡರು.

ಕಾರವಾರ ಗುತ್ತಿಗೆದಾರರಿಗೆ ಮೊದಲ ಹೆಜ್ಜೆಯಲ್ಲೇ ಜಯ:
ಕಾರವಾರ ಗುತ್ತಿಗೆದಾರರಿಗೆ ಮೊದಲ ಹೆಜ್ಜೆಯಲ್ಲಿಯೇ ಜಯ ಸಿಕ್ಕಿದೆ ಎಂದು ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. ಹೈಕೋರ್ಟ್ ಧಾರವಾಡ ಪೀಠವು ಗುತ್ತಿಗೆದಾರರ ಕುಂದು-ಕೊರತೆ ಹಾಗೂ ಪೂರಕ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ನಗರೋತ್ಥಾನ ಕಾಮಗಾರಿ ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದ ಇಡೀ ಜಿಲ್ಲೆಯ ಗುತ್ತಿಗೆದಾರರಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ಯಾಕೇಜ್ ಮೂಲಕ ಗುತ್ತಿಗೆಗೆ ಶಾಸಕರ ಶಿಫಾರಸ್ಸು:
ಸ್ಥಳೀಯ ಶಾಸಕರು ಬಹಳಷ್ಟು ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲು ಇಲಾಖೆಗಳಿಗೆ ಲಿಖಿತವಾಗಿ ಶಿಫಾರಸ್ಸು ನೀಡುತ್ತಿದ್ದರು. ಕಾರವಾರ-ಅಂಕೋಲಾ ಕ್ಷೇತ್ರದ ಸುಮಾರು 62 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೆಆರ್ಐಡಿಎಲ್, ಕೆಆರ್ಆರ್ಡಿಎಲ್ಗೆ ನೀಡಲು ಸರ್ಕಾರದಿಂದಲೇ ನಿರ್ದೇಶನ ಮಾಡಿಸಿ ಕೊಟ್ಟಿದ್ದರು. ಆದರೆ ಮೇ 11ರಂದು ಸರ್ಕಾರ ಒಂದು ಕೋಟಿ ರೂಪಾಯಿಗಿಂತ ಅಧಿಕ ವೆಚ್ಚದ ಕಾಮಗಾರಿಗಳನ್ನು ಪ್ಯಾಕೇಜ್ ಮಾಡದಂತೆ ಆದೇಶಿಸಿತ್ತು. ಜುಲೈನಲ್ಲಿ ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿತ್ತು.
ಸರ್ಕಾರ ಹಾಗೂ ಹೈಕೋರ್ಟ್ ಎರಡೂ ಆದೇಶಗಳನ್ನು ಲಗತ್ತಿಸಿ, ನಗರಸಭೆ, ನಗರಾಭಿವೃದ್ಧಿ ಕೋಶದಿಂದ ಯಾವುದೇ ಕಾಮಗಾರಿಗಳನ್ನು ಪ್ಯಾಕೇಜ್ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಆಗಸ್ಟ್ 20ರಂದು ಅಧಿಕಾರಿಗಳ ಸಭೆ ನಡೆದಾಗಲೂ ಮನವಿ ಮಾಡಿಕೊಂಡಿದ್ದೆವು. ಆದರೂ ಇದ್ಯಾವುದನ್ನೂ ಪರಿಗಣಿಸದೇ ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು ಎಂದು ತಿಳಿಸಿದರು.
ಸರ್ಕಾರದ ಆದೇಶವಿದ್ದರೂ ಗುತ್ತಿಗೆದಾರರಿಗೆ ಅನ್ಯಾಯ:
ಸರ್ಕಾರದ ಆದೇಶವಿದ್ದರೂ ಧಿಕ್ಕರಿಸಿರುವುದು ಗುತ್ತಿಗೆದಾರರಿಗೆ ಬಹಳ ಅನ್ಯಾಯವಾಗುತ್ತಿತ್ತು. ಇದಕ್ಕೆ ಎಲ್ಲಾ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾದಾಗ ನ್ಯಾಯಾಲಯದ ಬಾಗಿಲು ತಟ್ಟುವ ಅನಿವಾರ್ಯತೆ ಎದುರಾಗಿತ್ತು. ನನ್ನ ಸ್ನೇಹಿತ, ಹೈಕೋರ್ಟ್ ವಕೀಲ ಶರಣು ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆವು. ಅವರ ಎ ಸಿ ಚಾಕಲಬ್ಬಿ ಅಸೋಸಿಯೇಟ್ ಧಾರವಾಡ ಅವರ ಮೂಲಕ ನಗರೋತ್ಥಾನ 4ನೇ ಹಂತದ ನೋಟಿಫಿಕೇಶನ್ ಇಟ್ಟು ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದೆವು. ಪೂರಕ ದಾಖಲೆಗಳನ್ನು ಸಲ್ಲಿಸಿದ್ದೆವು. ಇತಿಹಾಸದಲ್ಲೇ ಉತ್ತರ ಕನ್ನಡ ಜಿಲ್ಲೆಯ ಗುತ್ತಿಗೆದಾರರು ಈವರೆಗೆ ಕೋರ್ಟ್ಗೆ ಹೋಗಿರಲಿಲ್ಲ. ಆದರೆ ಇತಿಹಾಸವೆಂಬಂತೆ ನಮಗೆ ಮೊದಲ ಹಂತದಲ್ಲೇ ಜಯ ಸಿಕ್ಕಿದ್ದು, ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಕಮೀಷನ್ ಅನುಕೂಲಕ್ಕಾಗಿ ಪ್ಯಾಕೇಜ್ ಟೆಂಡರ್:
ಪ್ಯಾಕೇಜ್ ಗುತ್ತಿಗೆ ಮಾಡಿದಾಗ ದೊಡ್ಡ ದೊಡ್ಡ ಕಾಮಗಾರಿಗಳನ್ನು ಹೊರಗಿನವರು ಬಂದು ಟೆಂಡರ್ ಮಾಡುತ್ತಾರೆ. ಅವರ ಹತ್ತಿರ ಕಮಿಷನ್ ಪಡೆಯಲು ಅನುಕೂಲವಾಗುತ್ತದೆ. ಸ್ಥಳೀಯರು ಸಣ್ಣಪುಟ್ಟ ಕಾಮಗಾರಿ ಮಾಡುವುದರಿಂದ ಕಮಿಷನ್ ಪಡೆಯಲು ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕೆ ಪ್ಯಾಕೇಜ್ ಮಾಡಲು ಹೊರಟಿದ್ದಾರು ಎಂದು ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದ್ದಾರೆ.
ಮಣಿಯದಿದ್ದರೆ ಮತ್ತೆ ಹೋರಾಟ:
ಜನಪ್ರತಿನಿಧಿಗಳು ಈಗಲಾದರೂ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಬಾರದು. ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಒಂದು ಪಾಠವೆಂದು ತಿಳಿಯಬೇಕು. ಕ್ಷೇತ್ರದಲ್ಲಿ 60 ಕೋಟಿ ರೂ.ಗಳ ಕಾಮಗಾರಿಗಳನ್ನ ಕಳೆದ ಡಿಸೆಂಬರ್ ನಂತರ ಕೆಆರ್ಐಡಿಎಲ್ಗೆ ನೀಡಲಾಗಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಲಿಲ್ಲ. ಈ ಕಾಮಗಾರಿಗಳ ಟೆಂಡರ್ ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟಕ್ಕೆ ಅಣಿಯಾಗುತ್ತೇವೆ. ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಮಾಧವ ನಾಯಕ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications