ಮದುವೆ ಮನೆಯಲ್ಲಿ ಗುಂಡಿನ ಮೊರೆತ: ಸಂಭ್ರಮದಲ್ಲಿದ್ದ ವಧುವಿನ ಕುಟುಂಬಸ್ಥರು ಕಂಗಾಲು
ಕಾರವಾರ, ಜನವರಿ 9: ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಬಂಧು-ಬಳಗವೆಲ್ಲ ಸೇರಿ ಖುಷಿ ಖುಷಿಯಿಂದ ಇದ್ದ ಸಂದರ್ಭದಲ್ಲೇ ವಧುವಿದ್ದ ಮನೆಯ ಬಳಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಕುಟುಂಬಸ್ಥರು, ಗ್ರಾಮಸ್ಥರ ಆಶೀರ್ವಾದದ ನಡುವೆ ಶಾಸ್ತ್ರೋಕ್ತವಾಗಿ ನಡೆಯಬೇಕಿದ್ದ ಮದುವೆಯು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ನಿವಾಸಿ ದಿವ್ಯಾ ಎಂಬುವವರ ಜೊತೆಗೆ ಅಂಕೋಲಾದ ಕೇಣಿಯ ನಿವಾಸಿ ಪ್ರಕಾಶ್ ಎಂಬುವವರಿಗೆ ಮದುವೆ ನಿಶ್ಚಯವಾಗಿತ್ತು. ಅವರ್ಸಾದ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿದ್ದರಿಂದ ಅಲ್ಲೇ ಸಮೀಪದ ಸಜ್ಜಿ ಮನೆಯಲ್ಲಿ ವಧು ನಿನ್ನೆಯಿಂದ ಉಳಿದುಕೊಂಡಿದ್ದಳು.

ಆದರೆ ಶನಿವಾರ ಬೆಳಗಿನ ಜಾವದಲ್ಲಿ ವಧುವಿನ ಕೋಣೆಯ ಹೊರಗೆ ಗುಂಡಿನ ಸದ್ದು ಕೇಳಿಬಂದಿದ್ದು, ಮನೆಯವರು ಕಂಗಾಲಾಗಿದ್ದಾರೆ. ವಧುವಿಗೆ ಟಾರ್ಗೆಟ್ ಮಾಡಿ ಗುಂಡು ಹಾರಿಸಲಾಗಿತ್ತೆನ್ನಲಾಗಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಮದುಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇನ್ನು ಮೊದಲು ಯಾರದ್ದೋ ಮೊಬೈಲ್ ಸ್ಫೋಟಗೊಂಡಿದೆ ಎಂದುಕೊಂಡು ಮನೆಯವರು ಅಂದುಕೊಂಡಿದ್ದರು. ಆದರೆ ವಧು ಯಾರೋ ಗುಂಡು ಹೊಡೆದಿರುವುದಾಗಿ ಕೂಗಿಕೊಂಡಿದ್ದಾಳೆ. ವಧುವಿನ ಕೋಣೆಯ ಕಿಟಕಿ ಬಳಿ ಗುಂಡು ತಾಗಿದೆ. ತಕ್ಷಣ ಹೊರಗೆ ಹೋಗಿ ನೋಡಿದರೆ ಯಾರ ಸುಳಿವೂ ಪತ್ತೆಯಾಗಿಲ್ಲ. ತಕ್ಷಣ ಈ ಬಗ್ಗೆ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದು, ಪೊಲೀಸ್ ಭದ್ರತೆ ಒದಗಿಸಿ ನಿಶ್ಚಯವಾಗಿದ್ದ ಮದುವೆ ನಡೆಸಿದ್ದಾರೆ. ನಮಗೆ ಯಾರ ಮೇಲೆಯೂ ಅನುಮಾನ ಇಲ್ಲ. ಯಾರು ಈ ರೀತಿ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಿಲ್ಲ. ಈ ಅನಿರೀಕ್ಷಿತ ಘಟನೆಯಿಂದ ನಾವು ಕೂಡ ಆತಂಕಗೊಂಡಿದ್ದೇವೆ ವಧುವಿನ ಕುಟುಂಬಸ್ಥರು ಹೇಳಿದ್ದಾರೆ.

ಆದರೆ, ಬಲ್ಲ ಪೊಲೀಸ್ ಮೂಲಗಳ ಪ್ರಕಾರ, ವಧು ಈ ಹಿಂದೆ ಯಾರನ್ನೋ ಲವ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆ ಪ್ರಿಯಕರನೇ ಈ ರೀತಿ ಮಾಡಿರಬಹುದು ಎಂದು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಶಂಕೆಯಾಧಾರದಲ್ಲಿ ಯುವಕನೊಬ್ಬನ ಬಗ್ಗೆ ವಿಚಾರಿಸಿದ್ದು, ಆ ಯುವಕ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ ಎನ್ನಲಾಗಿದೆ. ಶಂಕಿತ ಯುವಕನ ಮೇಲೆ ಈ ಹಿಂದೆ ಒಂದು ಶೂಟೌಟ್ ಹಾಗೂ ಕೊಲೆ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ.












Click it and Unblock the Notifications