ಕೊರೊನಾ ವೈರಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀತಿಗೆ ಕಾರಣವೇನು?

ಕಾರವಾರ, ಫೆಬ್ರವರಿ 04: ಮಹಾಮಾರಿ ಅಂತಲೇ ಭಾವಿಸಿರುವ ಕೊರೊನಾ ವೈರಸ್ ನ ಭೀತಿ ಇದೀಗ ಉತ್ತರ ಕನ್ನಡ ಜಿಲ್ಲೆಯನ್ನು ಆವರಿಸಿದೆ. ಕರಾವಳಿ ಗಡಿ ರಾಜ್ಯಗಳಾದ ಕೇರಳ ಹಾಗೂ ಗೋವಾದಲ್ಲಿ ಸೋಂಕು ಪತ್ತೆಯಾಗಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಕೇರಳದ ಕಾಸರಗೋಡು ಭಾಗದಲ್ಲಿ ಈಗಾಗಲೇ ಮೂವರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಇತ್ತ ಗೋವಾ ರಾಜ್ಯದಲ್ಲೂ ಒಬ್ಬರಲ್ಲಿ ವೈರಸ್ ಪತ್ತೆಯಾಗಿರುವುದಾಗಿಯೂ, ಐದಾರು ಮಂದಿ ಶಂಕಿತರು ಇರುವುದಾಗಿಯೂ ತಿಳಿದು ಬಂದಿದೆ. ಈ ಒಂದು ಸಂಗತಿ ಉತ್ತರ ಕನ್ನಡಿಗರಲ್ಲಿ ಆತಂಕ ಉಂಟು ಮಾಡಿದೆ‌.

ಉತ್ತರ ಕನ್ನಡ ಪ್ರವಾಸೋದ್ಯಮ ದೃಷ್ಟಿಯಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯಾಗಿದ್ದು, ಸಾಕಷ್ಟು ಪ್ರವಾಸಿ ತಾಣಗಳು, ಕಡಲತೀರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹೀಗಾಗಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯದವರೂ ಸೇರಿದಂತೆ ವಿದೇಶಿಗರೂ ಸಾಕಷ್ಟು ಮಂದಿ ಪ್ರವಾಸಕ್ಕೆಂದು ಇಲ್ಲಿಗೆ ಬರುತ್ತಾರೆ. ಹೀಗೆ ಪ್ರವಾಸಕ್ಕೆ ಬರುವವರಲ್ಲಿ ಕೆಲವರು ಮಂಗಳೂರು ಅಥವಾ ಗೋವಾ ವಿಮಾನ ನಿಲ್ದಾಣದ ಮೂಲಕವೇ ಜಿಲ್ಲೆಗೆ ಪ್ರವೇಶಿಸಬೇಕು.

 ಜಿಲ್ಲೆಯಲ್ಲಿ ಲಂಗರು ಹಾಕುವ ವಿದೇಶಿ ಹಡಗುಗಳಿಂದ ಆತಂಕ

ಜಿಲ್ಲೆಯಲ್ಲಿ ಲಂಗರು ಹಾಕುವ ವಿದೇಶಿ ಹಡಗುಗಳಿಂದ ಆತಂಕ

ಈಗಾಗಲೇ ಮಂಗಳೂರಿನ ಪಕ್ಕದ ಜಿಲ್ಲೆಯೇ ಆಗಿರುವ ಕಾಸರಗೋಡು ಹಾಗೂ ಉತ್ತರ ಕನ್ನಡಕ್ಕೆ ತಾಗಿಕೊಂಡೇ ಇರುವ ಗೋವಾದಲ್ಲಿ ವೈರಸ್ ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕಾರವಾರದ ನಗರ ಪ್ರದೇಶದಲ್ಲೇ ವಾಣಿಜ್ಯ ಬಂದರು ಇದ್ದು, ವಿದೇಶಿ ಹಡಗುಗಳು ಬಂದು ಹೋಗುತ್ತಿರುತ್ತವೆ. ಹೀಗೆ ಬರುವ ಹಡಗುಗಳು ದಿನಗಟ್ಟಲೆ ಬಂದರಿನಲ್ಲಿ ಲಂಗರು ಹಾಕುವುದರಿಂದ, ಅದರಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ನಗರಕ್ಕೆ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಈ ಸಂಗತಿ ಕೂಡ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಕೇರಳದಿಂದ ಜಿಲ್ಲೆಗೆ ರೈಲುಗಳು ಬರುತ್ತವೆ. ಜಿಲ್ಲೆಯ ದೇವಸ್ಥಾನಗಳಿಗೆ ಸಾಕಷ್ಟು ಕೇರಳಿಗರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ, ಕೇರಳದಲ್ಲಿ ವೈರಸ್ ಇರುವುದು ದೃಢಟ್ಟಿರುವುದರಿಂದ ರೈಲು ಪ್ರಯಾಣಿಕರ ಮೇಲೂ ನಿಗಾ ಇಡುವ ಅನಿವಾರ್ಯತೆ ಇದೆ.

 ವೈರಸ್ ತಡೆಗೆ ವಿಶೇಷ ಪೂಜೆ

ವೈರಸ್ ತಡೆಗೆ ವಿಶೇಷ ಪೂಜೆ

ಜಿಲ್ಲೆಯ ಮುಂಡಗೋಡದಲ್ಲಿ ಟಿಬೆಟನ್ ಕಾಲೋನಿ ಇದ್ದು, ಇಲ್ಲಿ ಸಾವಿರಾರು ಟಿಬೆಟಿಯನ್ನರು ನೆಲೆಸಿದ್ದಾರೆ. ಹೀಗಾಗಿ ಟಿಬೆಟನ್ ಕ್ಯಾಂಪ್‌ ನಲ್ಲಿ ಚೀನಾದಿಂದ ಬಂದು ಹೋದವರ ಮಾಹಿತಿ ಸಂಗ್ರಹಿಸಲು ತಾಲ್ಲೂಕು ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ. ಜನವರಿ ಆರಂಭದಿಂದ ಇಲ್ಲಿಯವರೆಗೆ ಚೀನಾದಿಂದ ಬಂದು ಹೋದವರ ಮಾಹಿತಿ ನೀಡುವಂತೆ ಟಿಬೆಟನ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಕೊರೊನಾ ವೈರಸ್ ಟಿಬೆಟ್ ದೇಶಕ್ಕೂ ವ್ಯಾಪಿಸದಂತೆ ಹಾಗೂ ಅದರ ನಿಯಂತ್ರಣಕ್ಕಾಗಿ ಕ್ಯಾಂಪ್‌ನ ವಿವಿಧ ಬೌದ್ಧ ಮಂದಿರಗಳಲ್ಲಿ ಪ್ರತಿ ದಿನ ವಿಶೇಷ ಪೂಜೆ
ಮಾಡಲಾಗುತ್ತಿದೆ. ಗಾಡೆನ್ ಲಾಚಿ ಮಂದಿರ, ಮಹಿಳಾ ಬಿಕ್ಕುಗಳ ಬೌದ್ಧ ಮಂದಿರ, ಗಾಡೆನ್ ಶಾರತ್ಸೆ ಬೌದ್ಧ ಮಂದಿರಗಳಲ್ಲಿ ಈಗಾಗಲೇ ಪೂಜೆ (ತಾರಾದೇವಿ ಮಂತ್ರ ಪಠಣ) ಮಾಡಲಾಗಿದೆ. ಪ್ರತಿ ದಿನ ಎರಡು ಗಂಟೆಗಳ ಕಾಲ ಇತರೆ ಟಿಬೆಟನ್ನರು ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರಾರ್ಥಿಸಿ ಪೂಜೆ ಮಾಡುತ್ತಿದ್ದಾರೆ.
 ವದಂತಿ ಹರಡಲು ಅವಕಾಶ ನೀಡಬೇಡಿ ಎಂದ ಡಿಸಿ

ವದಂತಿ ಹರಡಲು ಅವಕಾಶ ನೀಡಬೇಡಿ ಎಂದ ಡಿಸಿ

‘ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗದಿದ್ದರೂ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಸೂಚಿಸಿದ್ದಾರೆ. ‘ಚೀನಾದ ವುಹಾನ್ ನಗರದಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬರುವವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿ, ನಿಗಾ ವಹಿಸಬೇಕು. ಪಕ್ಕದ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬರುವ ನಾಗರಿಕರು ಅಥವಾ ಪ್ರವಾಸಿಗರಲ್ಲಿ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಭೇದಿ ಅಥವಾ ತೀವ್ರ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ಥಳೀಯ ಖಾಸಗಿ ವೈದ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವದಂತಿಗಳು ಹರಡಲು ಅವಕಾಶ ನೀಡಬಾರದು' ಎಂದು ತಿಳಿಸಿದ್ದಾರೆ.

 ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್

ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್

ಎಚ್‌1ಎನ್ ‌1 ಮಾದರಿಯ ರೋಗ ಲಕ್ಷಣಗಳನ್ನು ಹೊಂದಿರುವ ಕೊರೊನಾ ವೈರಸ್‌ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ರೋಗ ಲಕ್ಷಣ ಕಾಣಿಸಿಕೊಂಡ ನಂತರ ಪೂರಕ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯ. ನಿರ್ಲಕ್ಷ್ಯ ತೋರಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ವಹಿಸಿದೆ. ರೋಗ ಲಕ್ಷಣವಿರುವವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿ ಐದು ಹಾಸಿಗೆಯ (ಮೂರು ಪುರುಷ, ಎರಡು ಮಹಿಳೆಯರಿಗೆ) ಸಾಂಕ್ರಾಮಿಕ ರೋಗ ನಿಯಂತ್ರಣ ಘಟಕ (ಐಸೋಲೇಶನ್ ವಾರ್ಡ್) ತೆರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+