ಯೋಧನ ಹೆಸರಿನಲ್ಲಿ ಕಾರವಾರದ ಉದ್ಯಮಿಗೆ ವಂಚನೆಗೆ ಯತ್ನ: ದೂರು ದಾಖಲು
ಕಾರವಾರ, ನವೆಂಬರ್30: ಆನ್ಲೈನ್ ವಂಚನೆ ಬಗ್ಗೆ ಎಷ್ಟು ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಕೂಡ ವಂಚನೆಗೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನರನ್ನು ಯಾಮಾರಿಸಿ ಆನ್ಲೈನ್ ವಂಚನೆ ಮಾಡುವ ಖದೀಮರು ಇದೀಗ ಯೋಧರ ಹೆಸರಿನಲ್ಲಿ ವಂಚನೆಗೆ ಇಳಿದಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರ ನಗರದ ಉದ್ಯಮಿ ಶುಭಂ ಕಳಸ ಎನ್ನುವವರಿಗೆ ಖದೀಮರು ಯೋಧರ ಹೆಸರಿನಲ್ಲಿ ಆನ್ಲೈನ್ ವಂಚನೆ ಮಾಡಲು ಮುಂದಾಗಿದ್ದರು. ತಾನು ಸಿಐಎಸ್ಎಫ್ ಯೋಧನೆಂದು ಪರಿಚಯಿಸಿಕೊಂಡ ಆರೋಪಿ, ಕಾರವಾರದ ಮಾಜಾಳಿ ಶಾಲೆಯೊಂದರ ಕಟ್ಟಡ ನಿರ್ಮಾಣಕ್ಕೆ 2 ಸಾವಿರ ಸಿಮೆಂಟ್ ಬ್ಲಾಕ್ಗಳು ಬೇಕು. ನಾನು ಶಾಲೆಗೆ ಕೊಡುಗೆಯಾಗಿ ನೀಡುತ್ತಿದ್ದೇನೆ. ಎರಡು ಸಾವಿರ ಸಿಮೆಂಟ್ ಬ್ಲಾಕ್ಗಳಿಗೆ ಎಷ್ಟಾಗಬಹುದು ಎಂದು ವಿಚಾರಿಸಿದ್ದಾನೆ. ಅಲ್ಲದೇ 2 ಸಾವಿರ ಸಿಮೆಂಟ್ ಬ್ಲಾಕ್ಗಳನ್ನು ಆರ್ಡರ್ ಮಾಡಿ, ಮಾಜಾಳಿ ಶಾಲೆಯನ್ನು ಸಂಪರ್ಕಿಸುವ ರಸ್ತೆಯ ಗೂಗಲ್ ಮ್ಯಾಪ್ ಕೂಡ ಕಳುಹಿಸಿಕೊಟ್ಟಿದ್ದಾನೆ. ಇದರ ಹಣವನ್ನು ಪೋನ್ ಪೇ ಮೂಲಕ ಜಮಾ ಮಾಡುವುದಾಗಿ ತಿಳಿಸಿದ್ದನು. ಇದನ್ನು ನಂಬಿದ ಶುಭಂ ಕಳಸ ಒಪ್ಪಿಗೆ ಸೂಚಿಸಿ ಸೋಮವಾರ ಬ್ಲಾಕ್ಗಳನ್ನು ಕಳುಹಿಸುವುದಾಗಿ ತಿಳಿಸಿದ್ದರು.
ಕಾರವಾರದ ದಿಂಡಿ ಉತ್ಸವದಲ್ಲಿ ಗಮನ ಸೆಳೆದ 'ಕಾಂತಾರ'ದ ಪಂಜುರ್ಲಿ ದೈವ
ಕಾರವಾರದಲ್ಲಿ ಭಾರತೀಯ ನೌಕಾನೆಲೆ ಇರುವುದರಿಂದ ಸೇನೆಯ ಅಧಿಕಾರಿ ಇರಬಹುದು ಎಂದು ಶುಭಂ ಕಳಸ ಕೂಡ ವಂಚಕನನ್ನು ನಂಬಿದ್ದಾರೆ. ಮಾತಿನಂತೆ ಸೋಮವಾರ ಚಾಲಕ ಹಾಗೂ ಕಾರ್ಮಿಕರೊಂದಿಗೆ ಬ್ಲಾಕ್ಗಳನ್ನು ಕಳುಸಿದ್ದಾರೆ. ಈ ವೇಳೆ ಕರೆ ಮಾಡಿದ ವಂಚಕ ಅಕೌಂಟ್ ಧೃಡೀಕರಿಸಿಕೊಳ್ಳಲು 1 ರೂಪಾಯಿ ಕಳುಹಿಸಲು ಹೇಳಿದ್ದಾನೆ. ಹಾಗೆಯೇ 1 ರೂಪಾಯಿ ಕಳುಹಿಸಿದ ತಕ್ಷಣ 2 ರೂಪಾಯಿ ಹಣವನ್ನು ಮತ್ತೆ ವಾಪಸ್ ಕಳುಹಿಸಿದ್ದಾನೆ. ಇದರಿಂದ ನಂಬಿಕೆ ಇನ್ನೂ ಬಲವಾಗಿದೆ. ಅದೇ ವೇಳೆಗೆ ಶಾಲೆಗೆ ಬ್ಲಾಕ್ ತೆಗೆದುಕೊಂಡು ಹೋಗಿದ್ದ ವಾಹನದ ಚಾಲಕ ಕರೆ ಮಾಡಿ, ಯಾರು ಕೂಡಾ ಶಾಲೆಗೆ ಸಿಮೆಂಟ್ ಬ್ಲಾಕ್ಸ್ ಆರ್ಡರ್ ಮಾಡಿಲ್ಲವಂತೆ. ಇಲ್ಲಿನ ಶಿಕ್ಷಕರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಷ್ಟರಲ್ಲಿ ವಂಚಕರು ಶುಭಂ ಅವರ ಖಾತೆಯಿಂದ 500 ರೂಪಾಯಿ ಕನ್ನ ಹಾಕಿದ್ದಾರೆ. 500 ರೂಪಾಯಿ ಡೆಬಿಟ್ ಆಗಿರುವ ಸಂದೇಶ ಬಂದ ತಕ್ಷಣ ಶುಭಂ, ತಮ್ಮ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿದ್ದಾರೆ. ಕೂಡಲೇ ಸೈಬಲ್ ಕ್ರೈಂ ಠಾಣೆಗೆ ಕರೆ ಮಾಡಿ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಕರೆ ಮಾಡಿದ ವಾಯ್ಸ್ ರೆಕಾರ್ಡ್ ಹಾಗೂ ವಾಟ್ಸಾಪ್ ಸಂದೇಶಗಳನ್ನು ನೀಡಿ ದೂರು ದಾಖಲಿಸಿದ್ದಾರೆ.
'ಇಷ್ಟು ದಿನ ಆನ್ಲೈನ್ ವಂಚಕರು ಒಟಿಪಿ ಕೇಳಿ, ಇಲ್ಲವೇ ಲಿಂಕ್ ಕಳುಹಿಸಿ ಜನರಿಗೆ ವಂಚಿಸುತ್ತಿದ್ದರು. ಆದರೆ ಇದೀಗ ಯೋಧರ ಹೆಸರಿನಲ್ಲಿಯೂ ಮೋಸ ಮಾಡಲು ಮುಂದಾಗಿದ್ದಾರೆ. ಕಾರವಾರದ ನೌಕಾನೆಲೆಯಲ್ಲಿ ಯೋಧರು ಇರುವ ಕಾರಣ ಇವರ ಮಾತನ್ನು ನಂಬಿ ಸಿಮೆಂಟ್ ಬ್ಲಾಕ್ ಕಳುಹಿಸಿದ್ದೆ. ಇದೇ ರೀತಿ ನಗರದ ಮೀನು ವ್ಯಾಪಾರಿ, ಹಣ್ಣಿನ ಅಂಗಡಿ ಮಾಲೀಕ ಹಾಗೂ ಐಸ್ಕ್ರೀಮ್ ವ್ಯಾಪಾರಿಗಳಿಗೂ ಕರೆ ಮಾಡಿ ಮೋಸ ಮಾಡಲು ಯತ್ನಿಸಿದ್ದರು. ಆದರೆ ಯಾರೂ ಕೂಡ ಕ್ಯೂಆರ್ ಕೋಡ್ ನೀಡಲು ಮುಂದಾಗದ ಕಾರಣ ಖದೀಮರ ಯತ್ನ ವಿಫಲವಾಗಿದೆ. ಸದ್ಯ ಆಗಿರುವ ಮೋಸದ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಬೇಕು' ಎಂದು ಉದ್ಯಮಿ ಶುಭಂ ಕಳಸ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಕಾರವಾರ ಸೈಬರ್ ಕ್ರೈಂ ಸಿಪಿಐ ಆನಂದ್ ಮೂರ್ತಿ 'ಆನ್ಲೈನ್ ವಂಚನೆ ಬಗ್ಗೆ ಎಷ್ಟೇ ಜವಾಬ್ದಾರಿ ವಹಿಸಿದರೂ ಖದೀಮರು ಯಾಮಾರಿಸುತ್ತಾರೆ. ಇಂತಹ ಆನ್ಲೈನ್ ವಂಚಕರ ಬಗ್ಗೆ ಜನರು ಜಾಗೃತರಾಗಿರಬೇಕು. ಮೊಬೈಲ್ ಬಳಕೆ, ಗುರುತು ಪರಿಚಯ ಇಲ್ಲದ ಯಾರ ಜೊತೆಗೂ ಬ್ಯಾಂಕ್, ಎಟಿಎಂ, ಒಟಿಪಿ ನಂಬರ್ ಹೀಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚನೆ ಮಾಡಬೇಕು. ಒಂದೊಮ್ಮೆ ಏನಾದರು ವಂಚನೆಯಾಗಿದ್ದರೆ ತಕ್ಷಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಬೇಕು. ಜನರು ವಂಚನೆ ವಿರುದ್ಧ ಸದಾ ಜಾಗೃತಿವಹಿಸಬೇಕಾಗಿದೆ' ಎಂದರು.