ವಿಧಾನಸಭೆ ಚುನಾವಣೆ: ಕಾರವಾರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದವರ ಪಟ್ಟಿ ಇಲ್ಲಿದೆ
ಕಾರವಾರ, ನವೆಂಬರ್, 23: ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ನಿರೀಕ್ಷಿತ ಹಾಗೂ ಹೊಸ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಳಿಯಾಳದಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದ ಮಾಜಿ ಎಂಎಲ್ಸಿ ಘೋಟ್ನೆಕರ್ ಅವರು ಅರ್ಜಿ ಸಲ್ಲಿಸಿಲ್ಲ. ಕೇವಲ ಹಾಲಿ ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತ್ರ ಅರ್ಜಿ ಸಲ್ಲಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳು ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆಯಲಾಗಿದೆ. ಕೆಪಿಸಿಸಿಗೆ ಎರಡು ಲಕ್ಷ ರೂಪಾಯಿ ಡಿಡಿಯನ್ನು ನೀಡಿ ಅರ್ಜಿ ಸಲ್ಲಿಸುವಂತೆ ನವೆಂಬರ್ 21ರವರೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಅದರಂತೆಯೇ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಹಲವು ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ಹೊಸ ಮುಖಗಳಿಂದಲೂ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಪೈಕಿ ಕುಮಟಾದಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬಿಲ್ಲವ, ಈಡಿಗ ಸಮುದಾಯದ ಶಕ್ತಿ ತೋರಿಸುತ್ತೇವೆ: ಪ್ರಣವಾನಂದ ಸ್ವಾಮೀಜಿ
ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದವರ ಪಟ್ಟಿ
ಪ್ರಮುಖವಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಶಿವಾನಂದ ಹೆಗ್ಗಡೆ ಕಡತೋಕ, ಹೊನ್ನಪ್ಪ ನಾಯಕ, ಆರ್.ಹೆಚ್ ನಾಯ್ಕ, ಮಂಜುನಾಥ ನಾಯ್ಕ, ರವಿ ಶೆಟ್ಟಿ ಕವಲಕ್ಕಿ, ಕೃಷ್ಣ ಗೌಡ, ಭುವನ್ ಭಾಗ್ವತ್, ರತ್ನಾಕರ ನಾಯ್ಕ, ಪ್ರದೀಪ್ ನಾಯ್ಕ, ಭಾಸ್ಕರ್ ಪಟಗಾರ್, ಗಾಯತ್ರಿ ಗೌಡ, ಯಶೋಧರ ನಾಯ್ಕ, ಸಾಯಿ ಗಾಂವಕರ್ ಅರ್ಜಿ ಸಲ್ಲಿಕೆ ಮಾಡಿದ್ದು, ತೀವ್ರ ಪೈಪೋಟಿ ಎದುರಾಗಿದೆ. ಇನ್ನು ಭಟ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ ನಾಯ್ಕ ಹಾಗೂ ಸಂತೋಷ್ ನಾಯ್ಕ, ದೀಪಕ್ ನಾಯ್ಕ, ಅಯ್ಯಪ್ಪ ನಾಯ್ಕ, ಶ್ರೀಧರ್ ನಾಯ್ಕ, ಆರ್.ಎನ್.ನಾಯ್ಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಹಲವು ನಾಯಕರಿಂದ ಅರ್ಜಿ ಸಲ್ಲಿಕೆ
ಇನ್ನು ಕಾರವಾರ ಕ್ಷೇತ್ರದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಚೈತ್ರಾ ಕೋಠಾರಕರ್ ಇದೇ ಮೊದಲ ಬಾರಿಗೆ ಆಕಾಂಕ್ಷಿಯಾಗಿ ಅರ್ಜಿಸಲ್ಲಿಕೆ ಮಾಡಿದ್ದಾರೆ. ಶಿರಸಿ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ, ಶ್ರೀಪಾದ ಹೆಗ್ಗಡೆ, ವಸಂತ ನಾಯ್ಕ ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ ಲಕ್ಷ್ಮಣ್ ಬನ್ಸೋಡೆ ಎಂಬುವವರು ಅರ್ಜಿ ಸಲ್ಲಿಕೆ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ತನಗೆ ಕೊಡುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ್ ಕಳೆದ ಒಂದು ವರ್ಷದಿಂದ ಪಟ್ಟು ಹಿಡಿದಿದ್ದರು. ಇದೇ ಕಾರಣಕ್ಕೆ ವಿಧಾನ ಪರಿಷತ್ ಚುನಾವಣಾ ಕಣದಿಂದ ಸಹ ಘೋಟ್ನೇಕರ್ ಹಿಂದೆ ಸರಿದಿದ್ದು, ಪಕ್ಷದ ಸಭೆಯಲ್ಲಿ ನಾಯಕರುಗಳ ಮುಂದೆ ಟಿಕೆಟ್ ಬೇಡಿಕೆಯನ್ನು ಸಹ ಇಟ್ಟಿದ್ದರು.
ಕದಂಬೋತ್ಸವದ ಶಾಮಿಯಾನ ಬಿಲ್ ಪಾವತಿಸದ ಉತ್ತರ ಕನ್ನಡ ಜಿಲ್ಲಾಡಳಿತ: ಮಾಲಿಕ ಕಣ್ಣೀರು
ಟಿಕೆಟ್ಗೆ ಅರ್ಜಿ ಸಲ್ಲಿಸದ ಘೋಟ್ನೇಕರ್
ಆದರೆ ಇದೀಗ ಮಾಜಿ ಸಚಿವ ಹಾಲಿ ಶಾಸಕ ಆರ್.ವಿ ದೇಶಪಾಂಡೆ ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಹಳಿಯಾಳ ಕಾಂಗ್ರೆಸ್ನಲ್ಲಿ ಆರ್.ವಿ.ದೇಶಪಾಂಡೆ ಬಣ ಹಾಗೂ ಘೋಟ್ನೇಕರ್ ಬಣ ಎಂದು ಎರಡು ಗುಂಪುಗಳಾಗಿ ಒಂದು ಕಾಲದಲ್ಲಿ ಗುರು ಶಿಷ್ಯರಾಗಿದ್ದ ಇಬ್ಬರ ನಡುವೆ ಬಿರುಕು ಮೂಡಿತ್ತು. ಸದ್ಯ ಟಿಕೆಟ್ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಘೋಟ್ನೇಕರ್ ಮಾತ್ರ ಅರ್ಜಿ ಸಲ್ಲಿಸಿಲ್ಲ. ಆದರೆ ಕಾಂಗ್ರೆಸ್ ಟಿಕೆಟ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದ ಘೋಟ್ನೇಕರ್ ಅರ್ಜಿಯೇ ಸಲ್ಲಿಸಿಲ್ಲ. ಅವರು ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎನ್ನುವ ಗೊಂದಲ ಕ್ಷೇತ್ರದಲ್ಲಿ ಮೂಡಿದೆ. ಕಾಂಗ್ರೆಸ್ ಟಿಕೆಟ್ ಮೇಲಿನ ಆಸಕ್ತಿಯನ್ನು ಘೋಟ್ನೇಕರ್ ಕಳೆದುಕೊಂಡಿದ್ದಾರೆಯೆ? ಅಥವಾ ಆರ್.ವಿ ದೇಶಪಾಂಡೆಗೆ ಟಿಕೆಟ್ ಖಚಿತ ಎನ್ನುವ ಕಾರಣಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿಲ್ಲವೇ? ಎನ್ನುವ ಗೊಂದಲ ಅವರ ಬೆಂಬಲಿಗರಲ್ಲಿ ಕಾಡತೊಡಗಿದೆ.
ಘೋಟ್ನೇಕರ್ ಅವರ ಮುಂದಿನ ನಡೆ ಏನು?
ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸದ ಘೋಟ್ನೇಕರ್ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆಯೇ ಎನ್ನುವ ವಿಚಾರ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಈಗಾಗಲೇ ಹುಬ್ಬಳ್ಳಿ -ಧಾರವಾಡ ಭಾಗದ ಪ್ರಭಾವಿ ಬಿಜೆಪಿ ಮುಖಂಡರೊಬ್ಬರ ಸಂಪರ್ಕದಲ್ಲಿರುವ ಘೊಟ್ನೇಕರ್, ಬಿಜೆಪಿ ಸೇರ್ಪಡೆಯಾಗಿ ತನಗೆ ಕ್ಷೇತ್ರದಿಂದ ಟಿಕೆಟ್ ಕೇಳುತ್ತಿದ್ದಾರೆಯೇ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ತನ್ನದು ಮರಾಠ ಸಮುದಾಯವಾಗಿದ್ದು, ಕ್ಷೇತ್ರದಲ್ಲಿ ಅಧಿಕ ಮತದಾರರು ಮರಾಠರಾಗಿರುವುದರಿಂದ ತನಗೆ ಟಿಕೆಟ್ ಸಿಕ್ಕರೇ ಗೆಲುವು ಸುಲಭವಾಗಲಿದೆ ಎನ್ನುವ ಚಿಂತನೆಯಲ್ಲಿ ಘೋಟ್ನೇಕರ್ ಇದ್ದಾರೆ ಎನ್ನಲಾಗಿದೆ.
ಸದ್ಯ ಸುನೀಲ್ ಹೆಗ್ಗಡೆಗೆ ಕ್ಷೇತ್ರದಿಂದ ಟಿಕೇಟ್ ಖಚಿತ ಎನ್ನಲಾಗಿದೆ. ಆದರೂ ಘೋಟ್ನೇಕರ್ ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಿದ್ದು, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟಿಗೆ ಕಿತ್ತಾಟ ಆಗಲಿದೆಯೇ? ಎನ್ನುವ ಅನುಮಾನ ಸ್ಥಳೀಯರಲ್ಲಿ ಕಾಡತೊಡಗಿದೆ. ಮತ್ತೊಂದೆಡೆ ಘೋಟ್ನೇಕರ್ ನಡೆಯ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಹಿಸಿರುವುದು ಕಾರ್ಯಕರ್ತರಲ್ಲಿ ಅನುಮಾನ ಮೂಡಿಸಿದೆ.