ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ವಿಜಯೇಂದ್ರನನ್ನು ಮುಖ್ಯಮಂತ್ರಿ ಮಾಡೋಕೆ
ಕಾರವಾರ, ಜುಲೈ 28: "ಬಸವರಾಜ ಬೊಮ್ಮಾಯಿಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ಬಿ.ವೈ. ವಿಜಯೇಂದ್ರರನ್ನು ಸಿಎಂ ಮಾಡುವುದಕ್ಕಾಗಿ,'' ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್, "ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್. ಯಡಿಯೂರಪ್ಪನವರು ಹಿಡಿತ ಸಾಧಿಸಿದ್ದಾರೆ. ಸೂಪರ್ ಸಿಎಂ ಆಗಿ ಯಡಿಯೂರಪ್ಪ ಇನ್ನು ಮುಂದೆ ರಾಜ್ಯದಲ್ಲಿ ಅಧಿಕಾರ ಚಲಾಯಿಸುತ್ತಾರೆ. 2023ಕ್ಕೆ ಬಿಎಸ್ವೈ ಪುತ್ರ ವಿಜಯೇಂದ್ರನನ್ನು ಮುಖ್ಯಮಂತ್ರಿ ಮಾಡಲು ಬೊಮ್ಮಾಯಿಯನ್ನು ಈಗ ಸಿಎಂ ಮಾಡಿದ್ದಾರೆ,'' ಎಂದಿದ್ದಾರೆ.

"ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಪಿ. ಯೋಗೇಶ್ವರ್ ಕಳೆದ ಐದಾರು ತಿಂಗಳಿನಿಂದ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದರು. ಯತ್ನಾಳ್ ಬೋನಿನಲ್ಲಿ ಇದ್ದ ಮಂಗನ ರೀತಿ ಕೂಗಾಟ ಮಾಡಿದರೂ ಏನೂ ಮಾಡಿಕೊಳ್ಳಲಾಗಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ ಅವರಿಬ್ಬರನ್ನು ಮಂತ್ರಿ ಮಾಡಬಾರದು,'' ಎಂದು ಅಸ್ನೋಟಿಕರ್ ತಿಳಿಸಿದರು.

"ಬಿಜೆಪಿ ಬಸವರಾಜ ಬೊಮ್ಮಾಯಿಯನ್ನು ಸಿಎಂ ಆಗಿ ಮಾಡಿರುವುದು ಒಳ್ಳೆಯ ಆಯ್ಕೆ. ಇದರಿಂದ ಬಿಜೆಪಿಗೆ ಭವಿಷ್ಯದಲ್ಲಿ ಲಾಭವಾಗಲಿದೆ. ರಾಜ್ಯಕ್ಕೆ ಒಳ್ಳೆಯ ದಿನ ಬರುತ್ತದೆ. ಈಗಿನ ಸರ್ಕಾರ ಬೆಳವಣಿಗೆ ಮುಂದೆ ಜೆಡಿಎಸ್ಗೆ ಒಳ್ಳೆಯದಾಗಲಿದ್ದು, ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಎಚ್.ಡಿ. ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ,'' ಎಂದಿದ್ದಾರೆ.












Click it and Unblock the Notifications