ರಷ್ಯಾ ಪ್ರಜೆಗೆ ಗೋಕರ್ಣದಲ್ಲಿ ಆಧಾರ್ ಕಾರ್ಡ್!, ಅಪರ ಜಿಲ್ಲಾಧಿಕಾರಿ ಹೇಳಿದ್ದೇನು?
ಕಾರವಾರ, ಡಿಸೆಂಬರ್. 02:ವಿದೇಶಿ ಪ್ರಜೆಯೊಬ್ಬರಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆಧಾರ್ ಕಾರ್ಡ್ ನೀಡಿದೆ! ಇದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಷ್ಯಾ ದೇಶದ ಝಾಕಿರೋವ್ ಗಾಯಝ್ ಎಂಬುವವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಗೋಕರ್ಣದಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಅವರ ಗುರುತಿನ ಚೀಟಿಯಲ್ಲಿ C/o ಸುಬ್ರಾಯ ವಿ. ಜೋಶಿ, #168, ಸಿಂಡಿಕೇಟ್ ಬ್ಯಾಂಕ್ ಎದುರು, ಗೋಕರ್ಣ ಎಂಬ ವಿಳಾಸವಿದೆ. ಜನ್ಮ ದಿನಾಂಕದಲ್ಲಿ 1975ರ ಆಗಸ್ಟ್ 14 ಎಂದು ನಮೂದಾಗಿದೆ.
ಐದಾರು ವರ್ಷಗಳಿಂದ ತಮ್ಮ ಗೆಳತಿಯೊಂದಿಗೆ ಗೋಕರ್ಣಕ್ಕೆ ಬರುತ್ತಿರುವ ಅವರು, ಇಲ್ಲಿ 6 ರಿಂದ 8 ತಿಂಗಳ ಕಾಲ ಉಳಿದುಕೊಳ್ಳುತ್ತಾರೆ. ಇತ್ತೀಚೆಗೆ ಐದಾರು ಕೊಠಡಿಗಳಿರುವ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ಅದನ್ನು ಇತರ ವಿದೇಶಿಯರಿಗೆ ಬಾಡಿಗೆಗೆ ಕೊಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಇದೇ ಆಧಾರ್ ಕಾರ್ಡ್ ಬಳಸಿ ಬೈಕ್ ಅನ್ನೂ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾಗಿಯೂ ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಯುಐಎಇ (ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ) ಕಾನೂನು ಪ್ರಕಾರ, 182 ದಿನಗಳವರೆಗೆ ತಡೆ ಇಲ್ಲದೆ ಭಾರತದಲ್ಲಿ ವಾಸ್ತವ್ಯ ಮಾಡಿದ ವಿದೇಶಿಗ ಆಧಾರ್ ಕಾರ್ಡ್ ಹೊಂದಲು ಅರ್ಹ. ಮುಂದೆ ಓದಿ...

ಒಂದು ದಾಖಲೆ ಕೊಟ್ಟರೂ ಸಾಕು
ನಿಯಮದ ಪ್ರಕಾರ, ವಾಸ್ತವ್ಯ ಪ್ರಮಾಣಪತ್ರ ಸೇರಿ ಸಲ್ಲಿಸಬೇಕಾದ 18 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಕೊಟ್ಟರೂ ಸಾಕು. ಆದರೆ ಇದೇ ವಾಸ್ತವ್ಯದ ಪ್ರಮಾಣಪತ್ರ ಬಳಸಿ ಗೋಕರ್ಣದಂತಹ ಪ್ರವಾಸೋದ್ಯಮ ಸ್ಥಳದಲ್ಲಿ ವಿದೇಶಿಯರು ಸ್ಥಳೀಯರಂತೆ ಆಧಾರ್ ಕಾರ್ಡ್ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಪಾನ್ ಕಾರ್ಡ್ಗಳನ್ನು ಆಧಾರ್ಗೆ ಜೋಡಿಸಬೇಕು
ಕೇಂದ್ರದ ಕಾಯ್ದೆ ಪ್ರಕಾರ, ಹೀಗೆ ಕಾರ್ಡ್ ಪಡೆದ ವಿದೇಶಿಯರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಮತ್ತು ಪಾನ್ ಕಾರ್ಡ್ಗಳನ್ನು ಆಧಾರ್ಗೆ ಜೋಡಿಸಬೇಕು. ಆದರೆ, ವಿದೇಶಿಗರು ಹೀಗೆ ಮಾಡಿದ್ದಾರೋ? ಇಲ್ಲವೋ ಎನ್ನುವುದು ಮಾತ್ರ ತಿಳಿಯದಾಗಿದೆ.

ವಿದೇಶಿಗರಿಗೆ ಸಕಲ ವ್ಯವಸ್ಥೆ
ಗೋಕರ್ಣದಲ್ಲಿ ಗರಿಷ್ಠವಾಗಿ ರಷ್ಯನ್ನರು ವಿದೇಶಿ ವ್ಯವಹಾರದ ಸಾಹಸಕ್ಕೆ ಕಳೆದ ಕೆಲ ವರ್ಷಗಳಿಂದ ಮುಂದಾಗಿದ್ದಾರೆ. ಇಲ್ಲಿನ ಮನೆಗಳನ್ನು, ವಸತಿ ಗೃಹಗಳನ್ನು, ರೆಸ್ಟೋರೆಂಟ್ಗಳನ್ನು ಕೂಡ ಊಹೆಗೂ ಮೀರಿದ ಹಣ ತೆತ್ತು ಬಾಡಿಗೆಗೆ ಪಡೆಯುತ್ತಾರೆ. ಇಂತಹ ಜಾಗಗಳಲ್ಲಿ ಇಂಟರ್ನೆಟ್ ಮಾಧ್ಯಮದಿಂದ ಪ್ರವಾಸಿಗರನ್ನು ಬುಕ್ ಮಾಡುತ್ತಾರೆ. ಇಲ್ಲಿ ಅವರಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ಪಡೆಯುವುದರಲ್ಲಿ ತಪ್ಪಿಲ್ಲ
"ಕಾನೂನಿನ ಪ್ರಕಾರ, ಆಧಾರ್ ಕಾರ್ಡ್ ನೀಡುವುದಕ್ಕೂ ಪೌರತ್ವಕ್ಕೂ ಸಂಬಂಧ ಇಲ್ಲ. ವಿದೇಶಿಯರು ಕೂಡ ಯುಕ್ತ ವಾಸ್ತವ್ಯದ ಪ್ರಮಾಣಪತ್ರ ನೀಡಿ ಆಧಾರ್ ಹೊಂದಬಹುದು. ಈ ಕುರಿತಾಗಿ ಸರ್ಕಾರ ಬಹು ಚರ್ಚೆಯ ತರುವಾಯ ಈ ಹಿಂದೆಯೇ ಅಧಿಕೃತ ಸುತ್ತೋಲೆ ಹೊರಡಿಸಿದೆ. ಕಾರಣ ವಿದೇಶಿಯರು ಆಧಾರ್ ಕಾರ್ಡ್ ಪಡೆಯುವುದರಲ್ಲಿ ತಪ್ಪಿಲ್ಲ" ಎನ್ನುತ್ತಾರೆ ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್.












Click it and Unblock the Notifications