'ಯುವನಿಧಿ'ಗೆ ಶುಕ್ರವಾರ ಚಾಲನೆ; ನೋಂದಣಿ ಆದವರು ಎಷ್ಟು?
ಶಿವಮೊಗ್ಗ, ಜನವರಿ 11: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ 'ಯುವನಿಧಿ'ಗೆ ಶಿವಮೊಗ್ಗದಲ್ಲಿ ಶುಕ್ರವಾರ ಚಾಲನೆ ದೊರೆಯಲಿದೆ. ಈಗಾಗಲೇ ಆನ್ಲೈನ್ ಮೂಲಕ ಯೋಜನೆ ಫಲಾನುವಿಯಾಗಲು ನೋಂದಣಿಯನ್ನು ನಡೆಸಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವದಿನವಾದ ಜನವರಿ 12 ರಂದು ಆಚರಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ 5ನೇ ಗ್ಯಾರಂಟಿಯಾದ 'ಯುವನಿಧಿ' ಯೋಜನೆಗೆ ಶಿವಮೊಗ್ಗದ ಫ್ರೀಡಂಪಾರ್ಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನವರಿ 12ರಂದು ಚಾಲನೆ ನೀಡುತ್ತಿದ್ದಾರೆ.

ಯೋಜನೆಯ ಉದ್ಘಾಟನೆ ಕುರಿತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಶರಣ ಪ್ರಕಾಶ್ ಪಾಟೀಲ ಮಾಹಿತಿ ನೀಡಿದ್ದಾರೆ. ಯೋಜನೆಯಡಿ 2023ರಲ್ಲಿ ಪದವಿ/ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಕಿಲ್ ಕನೆಕ್ಟ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು ಉದ್ಯೋಗವನ್ನು ಒದಗಿಸಲು ಸಹಕರಿಸುವುದು ಮತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ನೋಂದಣಿ ಎಷ್ಟು?; ಸಚಿವರು ಮಾತನಾಡಿ, "ಪ್ರಸ್ತುತ 61,700 ಪದವಿ/ ಡಿಪ್ಲೊಮಾ ಹೊಂದಿದ ಅಭ್ಯರ್ಥಿಗಳು ಈ ಯೋಜನೆಯಡಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2022-23ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ ಡಿಪ್ಲೊಮಾ ಮುಗಿಸಿದ್ದಾರೆ" ಎಂದರು.
"ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ. ನೋಂದಣಿ ಪ್ರಕ್ರಿಯೆ ಆನ್ಲೈನ್ನಲ್ಲಿ ಉಚಿತ ಮತ್ತು ಸರಳವಾಗಿದೆ. ಕಲಿಕೆ ಜೊತೆಗೆ ಕೌಶಲ್ಯಾಭಿವೃದ್ದಿ ಇಲಾಖೆ ಮೂಲಕ ಕೌಶಲ್ಯವನ್ನು ಕಲಿಸಲಾಗುತ್ತಿದ್ದು ಸರ್ಕಾರ ಯುವಜನತೆಗೆ ನಿರುದ್ಯೋಗ ಸಮಸ್ಯೆ ಎದುರಿಸಲು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಇದರ ಸದುಪಯೋಗ ಪಡೆಯಬೇಕು" ಎಂದು ಕರೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, "ಪದವಿ/ ಡಿಪ್ಲೊಮಾ ಉತ್ತೀರ್ಣರಾದ ನಂತರ ಆರು ತಿಂಗಳಲ್ಲಿ ಉದ್ಯೋಗ ದೊರೆಯದಿದ್ದವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ" ಎಂದರು.
"ಪದವಿ ಮುಗಿದ ನಂತರ ಮುಂದೇನು ಮಾಡುವುದು? ಎಂಬ ಯೋಚನೆ ಜೊತೆಗೆ ಆರ್ಥಿಕ ಒತ್ತಡವೂ ಇರುತ್ತದೆ. ಉದ್ಯೋಗ ಹುಡುಕಲು, ಅರ್ಜಿಗಳನ್ನು ಹಾಕಲು ಯುವನಿಧಿ ನಿರುದ್ಯೋಗ ಭತ್ಯೆ ಸಹಾಯ ಮಾಡುವುದರೊಂದಿಗೆ ಒಂದು ವಿಶ್ವಾಸ ಮತ್ತು ಭರವಸೆಯನ್ನು ಯುವಜನತೆಯಲ್ಲಿ ತುಂಬಲಿದೆ" ಎಂದು ಹೇಳಿದರು.
"ಯುವನಿಧಿ ಯೋಜನೆ ಅನುಷ್ಟಾನದ ಕುರಿತಾದ ವ್ಯವಸ್ಥೆಗಳು ಉತ್ತಮವಾಗಿ ನಡೆಯುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಕಾರವಾರ, ಚಿತ್ರದುರ್ಗದಿಂದ ಸಹ ಯುಜನತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಸಾಗಿವೆ. ಗೃಹಜ್ಯೋತಿಗೆ ಶೇ.90 ರಷ್ಟು, ಗೃಹಲಕ್ಷ್ಮಿ ಶೇ.93 ರಷ್ಟು, ಅನ್ನಭಾಗ್ಯ ಶೇ.96 ರಷ್ಟು ಬಳಕೆಯಾಗುತ್ತಿದ್ದು, ಶಕ್ತಿ ಯೋಜನೆ ಮುಖಾಂತರ 200 ಕೋಟಿ ಮಹಿಳೆಯರು ಕಳೆದ 5 ತಿಂಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ" ಎಂದು ಸಚಿವರು ವಿವರಿಸಿದರು.
ನೋಂದಣಿ ಮಾಡುವುದು ಹೇಗೆ?: 'ಯುವನಿಧಿ' ಯೋಜನೆಗೆ ನೋಂದಣಿ ನಡೆಯುತ್ತಿದೆ. 2022-23ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು https://sevasindhugs.karnataka.gov.inಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
2023 ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾಗಿ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವ, ಕರ್ನಾಟಕದಲ್ಲಿ ವಾಸವಿರುವವರು ಯೋಜನೆಯಡಿ ಫಲಾನುಭವಿಗಳಾಗುತ್ತಾರೆ.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಅಭ್ಯರ್ಥಿಯ ಬ್ಯಾಂಕ್ ಪಾಸ್ಪುಸ್ತಕ, ಇತ್ಯಾದಿ ದಾಖಲಾತಿಗಳೊಂದಿಗೆ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾವಣೆ ಮಾಡಿಕೊಳ್ಳಬಹುದು.












Click it and Unblock the Notifications