ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಹತ್ಯೆ; ಸಂಚು ಮಾಡಿ ಕೊಲೆ: ಸಿಟಿ ರವಿ
ಮೈಸೂರು,ಜುಲೈ11: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದು ವಲಯದ ಜನ ಯುದ್ಧೋತ್ಸಾಹದಲ್ಲಿ ಇರುವುದು ಕಂಡುಬರುತ್ತಿದೆ. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಹತ್ಯೆ ಪೂರ್ವ ನಿಯೋಜಿತ, ಸಂಚು ಮಾಡಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ.
ಮಂಗಳವಾರ ತಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಕೊಲೆ ನಡೆದ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ಶಾಸಕ ಶ್ರೀವತ್ಸ, ಮಾಜಿ ಶಾಸಕ ಎನ್.ಮಹೇಶ್ ಸೇರಿದಂತೆ ಹಲವರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬಳಿಕ ಶ್ರೀರಾಂಪುರ ಕಾಲೋನಿಯಲ್ಲಿರುವ ವೇಣುಗೋಪಾಲ್ ನಾಯಕ್ ನಿವಾಸಕ್ಕೆ ಭೇಟಿ ನೀಡಿದ್ರು. ಈ ವೇಳೆ ಮೃತ ವೇಣುಗೋಪಾಲ್ ನಾಯಕ್ನ ಕುಟುಂಬಸ್ಥರ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿ ಮೃತನ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇನ್ನೂ ಈ ವೇಳೆ ಮಾಧ್ಯಮಗಳ ಜೊತೆ ಸಿ ಟಿ ರವಿ ಅವರು ಮಾತಾಡಿ, ಇದು ಪೂರ್ವ ನಿಯೋಜಿತ ಹತ್ಯೆ, ಸಂಚು ಮಾಡಿಯೇ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿದೆ. ದೇಹದ ಸುಮಾರು 30 ಕಡೆ ಇರಿದಿದ್ದಾರೆ, ಶಸ್ತ್ರಾಸ್ತ್ರ ಬಳಸಿ ಕೊಲೆ ಮಾಡಲಾಗಿದೆ ಎಂದು ಹೇಳಿದರು.
ವೇಣುಗೋಪಾಲ ನಾಯಕ್ ಹನುಮ ಜಯಂತಿ ನೇತೃತ್ವ ವಹಿಸಿದ್ದ ಕಾರಣ ಈ ಕೊಲೆಯಾಗಿದೆ ಎಂಬ ಮೇಲ್ನೋಟಕ್ಕೆ ಕಂಡುಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ರಾಜ್ಯದ 16 ರಿಂದ 17 ಕಡೆ ಈ ರೀತಿ ಘಟನೆಗಳು ನಡೆದಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದು ವಲಯದ ಜನ ಮದೋನ್ಮತ್ತ ಹಾಗೂ ಯುದ್ಧೋತ್ಸಹದಲ್ಲಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸ್ಥಿತಿ ಸೃಷ್ಟಿಯಾಗಿದೆ ಎಂದರು.
ಹಿಂದೂ ಸಂಘಟನಗಳ ನೇತೃತ್ವ ವಹಿಸಿದವರನ್ನು ಮುಗಿಸುವಂತಹ ಮಾನಸಿಕತೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೊಲೆಗಾರರು ಯಾರು? ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ಸಮಗ್ರ ತನಿಖೆಯಿಂದ ಗೊತ್ತಾಗುತ್ತದೆ. ಆದರೆ, ಇದರ ಹಿಂದೆ ಭಯ ಹುಟ್ಟಿಸುವುದು, ಹಿಂದೂ ಸಂಘಟನೆಗಳ ಕೆಲಸಗಳನ್ನು ನಿಗ್ರಹಿಸುವ ಕೆಲಸ ಆಗ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಒಂದು ಉನ್ಮಾದ ಬಂದಿದೆ. ಸಣ್ಣ ಸಣ್ಣ ವಿಷಯಗಳನ್ನು ನೆಪವಾಗಿಟ್ಟುಕೊಂಡು ಹಲ್ಲೆಗೆ, ಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸಿಟಿ ರವಿ ಅವರು 5 ಲಕ್ಷ ರೂ. ಚೆಕ್ ಅನ್ನು ಬಿಜೆಪಿ ಕಡೆಯಿಂದ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ ಸಿಎನ್ ಅಶ್ವತ್ಥ ನಾರಾಯಣ, ಎನ್ ಮಹೇಶ್, ಶಾಸಕ ಶ್ರೀವತ್ಸ, ಮಾಜಿ ಎಂಎಲ್ಸಿ ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.












Click it and Unblock the Notifications