ದೇಶಕ್ಕೆ ಕೊಡುಗೆ ನೀಡಲು ಶ್ರಮಿಸುವಂತೆ ಯುವಕರಿಗೆ ಸಿಎಂ ಕರೆ
ಬೆಂಗಳೂರು, ಆಗಸ್ಟ್13: ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸುವ ಜತೆಗೆ ಸಂಕುಚಿತ, ಸ್ವಾರ್ಥ ಮನೋಭಾವ ತೊರೆದು ದೇಶಕ್ಕಾಗಿ ಶ್ರಮಿಸಿ ಕೊಡುಗೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯುವಜನತೆಗೆ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ವಿಧಾನಸೌಧದ ಮುಂದೆ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಸ್ವಾತಂತ್ರ್ಯ ಪೂರ್ವದಲ್ಲಿ ಜನರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಿ, ದುಡಿಯಬೇಕು. ಭವ್ಯ ಭಾರತದ ನಿರ್ಮಾಣಕ್ಕಾಗಿ ಶ್ರಮಿಸುವ ಮೂಲಕ ಕೊಡುಗೆ ನೀಡಬೇಕು ಎಂದರು.
ಬದುಕಿನ ಭಾಗವಾದ ದುಡಿಮೆಗಾಗಿ ಸೂಕ್ತವಾಗಿ ಶ್ರಮಿಸುವ ಮೂಲಕ ಯುವಕರು ದೇಶಕ್ಕೆ ತಮ್ಮ ಪಾಲನ್ನು ನೀಡಬೇಕು. ಭವಿಷ್ಯ ಮುಂದಿನ 25 ವರ್ಷಗಳ ಕಾಲ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ಯುವಕರೇ ದೇಶದ ಶಕ್ತಿ ಹಾಗೂ ಭವಿಷ್ಯ. ನಾಡಿಗೆ ನವ ಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಬೇಕಿದೆ. ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಂಕಲ್ಪ ಮಾಡಿದ್ದು, ಅದಕ್ಕೆ ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕೊಡುಗೆಯನ್ನು ನೀಡುವ ಗುರಿ ಇದೆ ಎಂದು ಅವರುಹೇಳಿದರು.

ಭಾರತದ ಶಕ್ತಿಯನ್ನು ವಿಶ್ವವೇ ಗಮನಿಸುತ್ತಿದೆ
ಯುವಕರು ಭಾರತದ ಮುಂದಿನ ಭವಿಷ್ಯವನ್ನು ನಿರ್ಮಿಸುವ ಭಾಗ್ಯಶಾಲಿಗಳು. 75 ವರ್ಷ ಎಂಬುದು ವ್ಯಕ್ತಿಗಾದರೆ ಅದೊಂದು ದೊಡ್ಡ ವಯಸ್ಸು ಆಗಿದ್ದು, ದೇಶಕ್ಕಾದರೆ ಅದು ನವ ತರುಣನ ವಯಸ್ಸಿನಂತೆ. ಯುವಕರು ತುಂಬಿರುವ ದೇಶದ ಭವ್ಯ ಭವಿಷ್ಯ ಬಲಿಷ್ಟವಾಗಬೇಕು. ದೇಶದಲ್ಲಿ ಶೇ.46 ಯುವಶಕ್ತಿ ಇದೆ. ಸರ್ಕಾರದ ವತಿಯಿಂದ 1.8ಕೋಟಿ ಧ್ವಜಗಳನ್ನು ನೀಡಿದ್ದೇವೆ. ಜನ ಸ್ವಪ್ರೇರಣೆಯಿಂದ ಧ್ವಜ ಖರೀದಿಸಿ ಹಾರಿಸಿದ್ದಾರೆ. 25 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿವೆ. ಪ್ರತಿ ಗ್ರಾಮ, ಮನೆಯಲ್ಲಿ ಧ್ವಜ ಹಾರಾಡುತ್ತಿದೆ. ತ್ರಿವರ್ಣದ ಶಕ್ತಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದ್ದು, ಭಾರತದ ಈ ಶಕ್ತಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ
ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಧಕ್ಕಿಲ್ಲ. ಹಲವರ ಹೋರಾಟ, ತ್ಯಾಗ, ಬಲಿದಾನದಿಂದ ಲಭಿಸಿದೆ. ಸಾವಿರಾರು ಜನ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಎಲ್ಲರ ಹಕ್ಕು. ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ. ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಎಲ್ಲರೂ ಸೇರಿದ್ದರು. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ. ಎಲ್ಲಿರಿಗೂ ಸೇರಿದ ಈ ಸ್ವಾತಂತ್ರ್ಯ ಲಭಿಸಲು ಅನೇಕ ಮಹನೀಯರ ಕೊಡುಗೆ ಇದೆ ಎಂದರು.

ರಾಣಿ ಚನ್ನಮ್ಮಳಿಂದ ಹೋರಾಟ ಕಹಳೆ
ದೇಶಕ್ಕೆ ಸಿಕ್ಕು 75ರ ಹರೆಯದ ಈ ಸ್ವಾತಂತ್ರ್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ. ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದು ಕನ್ನಡ ನಾಡಿನ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಇದು ಕನ್ನಡ ನಾಡಿನ ಹೆಮ್ಮೆ ಆಗಿದೆ. ಸ್ವಾತಂತ್ರ್ಯ ಕ್ಕಾಗಿ ಪ್ರಾಣ ಕೊಟ್ಟವರು ರಾಜ್ಯದಲ್ಲಿ ಇದ್ದಾರೆ. ಮೈಲಾರ ಮಹಾದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಸಾಹುಕಾರ ಚೆನ್ನಯ್ಯ, ಇವರನ್ನು ನೆನಪಿಡಬೇಕು. ಹೋರಾಟಗಾರರ ಹೋರಾಟ ಪ್ರತಿಫಲವೇ ಈ ಸ್ವಾತಂತ್ರ್ಯ. ಅಂತಹ ಮಹನೀಯರು ಇತಿಹಾಸದಲ್ಲಿದ್ದವರು ಭಾರತದ ಭವಿಷ್ಯ ಬರೆದಿದ್ದಾರೆ ಎಂದು ಸ್ಮರಿಸಿದರು.

ಶ್ರೇಷ್ಠ ಭಾರತವಾಗಿಸುವ ಜವಾಬ್ದಾರಿ ನಿಮ್ಮದು
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ದಕ್ಷತೆಯಿಂದ ನಡೆಸುತ್ತಿದ್ದಾರೆ. ಧೀಮಂತ ನಾಯಕರಾದ ನರೇಂದ್ರ ಮೋದಿ ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಎಂದು ಕರೆ ಕೊಟ್ಟಿದ್ದಾರೆ. ರೈತರು, ವಿದ್ಯಾರ್ಥಿಗಳು, ಬಡವರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್' ಎಂಬುದು ಅವರ ಪ್ರಧಾನಿಯವರ ಮೂಲಮಂತ್ರವಾಗಿದೆ. ಸ್ವಾತಂತ್ರ್ಯೋತ್ಸವ 75 ವರ್ಷಗಳ ಮುಂದಿನ 25 ವರ್ಷದ ಅಮೃತಕಾಲ ದಲ್ಲಿ ವಿಶ್ವದಲ್ಲಿ ಭಾರತವನ್ನು ಶ್ರೇಷ್ಟವಾಗಿಸುವ ಜವಾಬ್ದಾರಿ ನಮ್ಮೆಲ್ಲ ಯುವಕರ ಮೇಲಿದೆ. ಇದು ನಮ್ಮ ಬದ್ಧತೆ ಮತ್ತು ಸಂಕಲ್ಪ. ಸಮಬಾಳಿನ, ಸಮಪಾಲಿನ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕೆಂದು ಬೊಮ್ಮಾಯಿ ಯುವಕರಿಗೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಈ ವೇಳೆ ಸಚಿವರಾದ ಸುಧಾಕರ್, ಬೈರತಿ ಬಸವರಾಜ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
Recommended Video












Click it and Unblock the Notifications