ಯುವಕರು ಸರಿದಾರಿಗೆ ನಡೆಯಬೇಕಾದರೆ ಅವರಿಗೆ ಕೆಲಸದ ಅಗತ್ಯವಿದೆ
ಬೆಂಗಳೂರು, ಡಿಸೆಂಬರ್ 01: ಸಮಾಜದಲ್ಲಿ ಯುವಕರು ಸರಿದಾರಿಯಲ್ಲಿ ನಡೆಯಬೇಕಾದರೆ ಅವರಿಗೆ ಉತ್ತಮ ಉದ್ಯೋಗ ಮತ್ತು ಅದರ ಜವಾಬ್ದಾರಿ ಇರಬೇಕು. ಹೀಗಾಗಿ ಅಂಬೇಡ್ಕರ್ ಆದರ್ಶ ಸೇನೆಯಿಂದ ಯುವಕರಿಗೆ ಐಟಿಯಲ್ಲಿ ಉದ್ಯೋಗ ಒದಗಿಸುವ ಗುರಿ ಹಾಕಿಕೊಂಡಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಗೌರಿಶಂಕರ ಬೆಡಸೂರೆ ತಿಳಿಸಿದರು.
ಅಂಬೇಡ್ಕರ್ ಆದರ್ಶ ಸೇನೆಯು ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯುವಕರು ಸರಿ ದಾರಿಯಲ್ಲಿ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ, ಅನೇಕ ಪದವಿಗಳನ್ನು ಪಡೆದಂತಹ ಯುವಕರಿಗೆ ಮಾಹಿತಿ, ಆತ್ಮವಿಶ್ವಾಸ ಕೊರತೆಯಿಂದ ಅವರ ಓದಿಗೆ ತಕ್ಕಂತಹ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಅವರು ಅನ್ಯದಾರಿಗಳನ್ನು ಹಿಡಿದಿರುತ್ತಾರೆ. ಅಂತಹ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಜೊತೆಗೆ ವ್ಯಕ್ತಿತ್ವ ವಿಕಸನ ಮಾಡುವುದು. ಆತ್ಮ ವಿಶ್ವಾಸ ತುಂಬುವಂತಹ ಕೆಲಸ ಮಾಡುವ ಐಟಿ ಕಂಪೆನಿಗಳು ಸೇರಿದಂತೆ ಎಲ್ಲೆಲ್ಲಿ ಉದ್ಯೋಗ ಲಭ್ಯವಿದೆಯೋ ಅಲ್ಲಿ ಅವರಿಗೆ ಉದ್ಯೋಗ ಒದಗಿಸುವ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
ಇನ್ನು ನಿರುದ್ಯೋಗಿಗಳು ಉದ್ಯೋಗಿ ಪಡೆಯುವಂತೆ ಅನುಕೂಲವಾಗಲು ಸಂಘಟನೆಯಿಂದ 'ಐಟಿ ಕನ್ನಡ ಸಪೋರ್ಟ್' ಎಂಬ ಮೊಬೈಲ್ ಆಪ್ ಸಹ ಸಿದ್ಧಪಡಿಸಿದ್ದೇವೆ. ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂತಹ ಜನರು ತಮಗೆ ಯಾವುದೇ ರೀತಿಯ ಸಾಮಾಜಿಕ ದೂರುಗಳು ಅಥವಾ ಕೆಲಸಗಳು ಆಗಬೇಕಿದ್ದರೆ ಅದನ್ನು ಅವರು ಅಲ್ಲಿ ದಾಖಲಿಸಬಹದು. ಸಂಘಟನೆಯಿಂದ ಅವರಿಗೆ ಸೂಕ್ತ ಸ್ಪಂದನೆ ಒದಗಿಸಲಾಗುವುದು. ಆದಷ್ಟು ಶೀಘ್ರವೇ ಈ ಆಪ್ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಹಿರಿಯ ನಾಗರಿಕರಿಗೆ ಅಗತ್ಯ ನೆರವು, ಸ್ಪಂದನೆ
ಬಹುಮುಖ್ಯವಾಗಿ 60 ವರ್ಷ ವಯೋಮಾನ ಮೀರಿದವರಿಗೆ ನೆರವು ನೀಡುವುದು ಸಂಘಟನೆ ಆದ್ಯ ಉದ್ದೇಶವಾಗಿದೆ. ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಇವರು ಸಾಕಷ್ಟು ತೊಂದರೆಗಳನ್ನು ಅನುವಭವಿಸುತ್ತಿರುತ್ತಾರೆ. ಈ ವಯೋಮಾನದವರು ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬಹುದು. ಪೊಲೀಸ್, ನ್ಯಾಯಾಲಯ ಸೇರಿದಂತೆ ಯಾವುದೇ ರೀತಿಯ ನೆರವು ಅಗತ್ಯ ವಿದ್ದರೂ ಸಹ ನಾವು ಅವರೊಂದಿಗೆ ನಿಂತು ಸ್ಪಂದಿಸುತ್ತೇವೆ.

ಸಂಘಟನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಎನ್.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಆದರ್ಶ ಸೇನೆಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ- ಕಾರ್ಮಿಕರ ಕಾರ್ಡ ಮಾಡಿಸಿ ಕೊಡಲಾಗುವುದು. ಇದರಿಂದ ಅವರು ಸರ್ಕಾರದ ಸೌಲಭ್ಯ ಪಡೆಯಲು ಸುಲಭವಾಗುತ್ತದೆ. ಇದಲ್ಲದೆ ಸ್ಥಳೀಯವಾಗಿ ಬಿಬಿಎಂಪಿ, ವಿವಿಧ ನಿಗಮ ಮಂಡಳಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದರು.
ಸಮಾಜದಲ್ಲಿ ನಮ್ಮ ಸಂಘಟನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲು ಸಹ ಕಾರ್ಯ ಟುವಟಿಕೆಗಳನ್ನು ವಿಸ್ತರಿಸುವ ಸಂಬಂಧ ಪ್ರವಾಸ ಮಾಡಲಾಗುವುದು. ಯಾವುದೇ ಜಾತಿ, ಧರ್ಮ, ಮತ ಬೇಧವಿಲ್ಲದೆ ನಮ್ಮ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷರಾದ ಬಸವರಾಜ್, ಜಗದೀಶ್ ಕಾಚುರ್, ಐಟಿ ಬಿಟಿ ವಿಭಾಗದ ಅಧ್ಯಕ್ಷ ಶ್ರೀನಾಥ್ ದೇಶಪಾಂಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ನರಸಿಂಹ ಮೂರ್ತಿ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಹೊನ್ನೂರಪ್ಪ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications