ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು
ಬೆಂಗಳೂರು, ಸೆಪ್ಟೆಂಬರ್ 24 : ಎತ್ತಿನ ಹೊಳೆ ಯೋಜನೆ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಮತ್ತು ಹೇಳಿಕೆಗಳು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಗೆ ಕಾರಣವಾಗುತ್ತಿವೆ. ಆದ್ದರಿಂದ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಲವು ಸ್ಪಷ್ಟನೆಗಳನ್ನು ನೀಡಿದೆ.
ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 24.01 ಟಿಎಂಸಿ ನೀರಿನ ಬಳಕೆಯ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ನೀರಾವರಿ ನಿಗಮದ ಮೂಲಕ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಗೆ 2012ರ ಜುಲೈ 13 ರಂದು 8323.5 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ, ಪ್ರಥಮ ಹಂತದಲ್ಲಿ 3269.5 ಕೋಟಿ ರೂ. ಮೊತ್ತದ ಏತ ನೀರಾವರಿ ಕಾಮಗಾರಿಗಳನ್ನು ಸೂಕ್ತ ಪ್ಯಾಕೇಜ್ಗಳಲ್ಲಿ ವಿಂಗಡಿಸಿ ಟೆಂಡರ್ ಆಹ್ವಾನಿಸಲು ಸೂಚಿಸಲಾಗಿತ್ತು. [ಎತ್ತಿನಹೊಳೆ : ಗೊಂದಲ ಬಗೆಹರಿಸಲು ಸಭೆ]
ಇದರಂತೆ ಅದೇ ಸಾಲಿನ ನವೆಂಬರ್ 2 ರಂದು ಈ ಕಾಮಗಾರಿಗಳಿಗಾಗಿ ಇ-ಪ್ರೊಕ್ಯೂರ್ಮೆಂಟ್ ವೇದಿಕೆಯ ಮೂಲಕ ಟೆಂಡರ್ ಆಹ್ವಾನಿಸಲಾಗಿತ್ತು. ಅಲ್ಲದೆ, 2013ರ ಜನವರಿ 21 ರಂದು ತಾಂತ್ರಿಕ ಬಿಡ್ಗಳನ್ನು ಮತ್ತು ಮಾರ್ಚ್ 15 ರಂದು ಆರ್ಥಿಕ ಬಿಡ್ಗಳನ್ನು ತೆರೆಯಲಾಗಿತ್ತು.
ಈ ಕಾಮಗಾರಿಗಳ ಟೆಂಡರ್ ಮೌಲ್ಯಮಾಪನ ವರದಿಗಳನ್ನು 2013ರ ಸೆಪ್ಟೆಂಬರ್ 28 ರಂದು ನಡೆದ ಕರ್ನಾಟಕ ನೀರಾವರಿ ನಿಗಮದ 149 ನೇ ತಾಂತ್ರಿಕ ಉಪಸಮಿತಿಯಲ್ಲಿ ಮಂಡಿಸಿದಾಗ ಸಮಿತಿಯು ಈ ಟೆಂಡರ್ಗಳಲ್ಲಿ ಸ್ಪರ್ಧಾತ್ಮಕವಿಲ್ಲದೆ ಗರಿಷ್ಠ ಟೆಂಡರ್ ಪ್ರೀಮಿಯಂಗಳನ್ನು ನಮೂದಿಸಿದ್ದು ಮತ್ತು ಟೆಂಡರ್ಗಳಲ್ಲಿ ಗುತ್ತಿಗೆದಾರರು ನಿಬಂಧನೆಯನ್ನು ಪಾಲಿಸದೇ ಇರುವುದರಿಂದ ಈ ಕುರಿತು ಸೂಕ್ತ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರವನ್ನು ನಿಗಮದ ನಿರ್ದೇಶಕರ ಮಂಡಳಿಗೆ ಒಪ್ಪಿಸಲಾಯಿತು.
2013ರ ಡಿಸೆಂಬರ್ 12 ರಂದು ನಡೆದ ಕರ್ನಾಟಕ ನೀರಾವರಿ ನಿಗಮದ 61ನೇ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ತಾಂತ್ರಿಕ ಉಪ ಸಮಿತಿಯು ಈ ಟೆಂಡರ್ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತು ಯಾವುದೇ ಖಚಿತವಾದ ಪ್ರೀಮಿಯಂನೊಂದಿಗೆ ಅಂಗೀಕರಿಸಲು ಶಿಫಾರಸು ಮಾಡದೇ ಇರುವುದರಿಂದ ಹಾಗೂ ಸ್ಪರ್ಧಾತ್ಮಕವಲ್ಲದ ಟೆಂಡರ್ಗಳಲ್ಲಿ ಅನುಸರಿಸಬೇಕಾದ ಮಾನದಂಡಗಳ ಕುರಿತು ನೀಡಿರುವ ಸರ್ಕಾರದ ಸುತ್ತೋಲೆಯ ನಿರ್ದೇಶನಗಳನ್ನು ಗಮನದಲ್ಲಿಟ್ಟು ಈ ಟೆಂಡರ್ಗಳನ್ನು ತಿರಸ್ಕರಿಸಿ, ವಿಳಂಬಕ್ಕೆ ಅವಕಾಶ ನೀಡದೇ ಕೂಡಲೇ ಪುನಃ ಟೆಂಡರ್ ಆಹ್ವಾನಿಸಲು ಮಂಡಳಿಯು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿತ್ತು.
ಡಿಸೆಂಬರ್ 31ರಂದು ಎರಡನೇ ಬಾರಿ 5 ಪ್ಯಾಕೇಜುಗಳಲ್ಲಿ ಟೆಂಡರ್ ಆಹ್ವಾನಿಸಲಾಯಿತು. ನಂತರ 2014ರ ಜನವರಿ 27 ರಂದು ತಾಂತ್ರಿಕ ಬಿಡ್ಗಳನ್ನು ಮತ್ತು ಫೆಬ್ರವರಿ 11 ರಂದು ಆರ್ಥಿಕ ಬಿಡ್ಗಳನ್ನು ತೆರೆಯಲಾಯಿತು. ಈ 5 ಪ್ಯಾಕೇಜ್ ಟೆಂಡರ್ ಕಾಮಗಾರಿಗಳಿಗೆ ಅದೇ ಸಾಲಿನ ಫೆಬ್ರವರಿ 13 ರಂದು ಜರುಗಿದ ಕರ್ನಾಟಕ ನೀರಾವರಿ ನಿಗಮದ 62 ನೇ ನಿರ್ದೇಶಕರ ಮಂಡಳಿಯಲ್ಲಿ ಅನುಮೋದನೆ ನೀಡಲಾಯಿತು. [ಎತ್ತಿನಹೊಳೆ : ಜನಪ್ರತಿನಿಧಿಗಳಿಗೆ 10 ಪ್ರಶ್ನೆಗಳು]