2 ಹಂತದಲ್ಲಿ ಸಂಪುಟ ವಿಸ್ತರಣೆ; ಸಿಎಂ ಯಡಿಯೂರಪ್ಪ ಲೆಕ್ಕಾಚಾರ
Recommended Video
ಬೆಂಗಳೂರು, ಜುಲೈ 31 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಯಾವಾಗ?. ಇದು ಸದ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ. ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡಲು ಲೆಕ್ಕಾಚಾರವೊಂದನ್ನು ಹಾಕಿಕೊಂಡಿದ್ದಾರೆ.
ಒಟ್ಟು 2 ಹಂತದಲ್ಲಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 10 ಪ್ರಮುಖ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ನ ಅತೃಪ್ತರು 2ನೇ ಹಂತದಲ್ಲಿ ಸಂಪುಟ ಸೇರಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಸಂಭಾವ್ಯ ಸಚಿವರ ಪಟ್ಟಿಯನ್ನು ತಕ್ಷಣ ಸಲ್ಲಿಸುವಂತೆ ರಾಜ್ಯ ಉಸ್ತುವಾರಿ ಮುರಳೀಧರರಾವ್ಗೆ ಸೂಚನೆ ಕೊಟ್ಟಿದ್ದರು. ಅನರ್ಹಗೊಂಡವರೂ ಸೇರಿಸಿ 50ಕ್ಕೂ ಹೆಚ್ಚು ಶಾಸಕರ ಹೆಸರುಗಳನ್ನು ಕಳುಹಿಸಲಾಗಿದೆ.
ಆಗಸ್ಟ್ 5ರಂದು ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಲಿದ್ದಾರೆ. ಬಳಿಕ ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸಚಿವರ ಆಯ್ಕೆಯ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಆದ್ದರಿಂದ, ಯಡಿಯೂರಪ್ಪ ಆಪ್ತರಾದ ಕೆಲವು ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದರೆ ಅಚ್ಚರಿ ಪಡಬೇಕಿಲ್ಲ ಎನ್ನುವ ಸುದ್ದಿಗಳು ಹಬ್ಬಿವೆ. ಆದ್ದರಿಂದ, ಯಾವ ನಾಯಕರು ಸಹ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡುತ್ತಿಲ್ಲ.
ಅತೃಪ್ತ ಶಾಸಕರಲ್ಲಿ ಕನಿಷ್ಠ 12 ನಾಯಕರಿಗೆ ಸಚಿವ ಸ್ಥಾನ ಒಲಿದು ಬರುವ ನಿರೀಕ್ಷೆ ಇದೆ. ಆದರೆ, ಅತೃಪ್ತರ ನ್ಯಾಯಾಲಯದ ಪ್ರಕ್ರಿಯೆ ಏನಾಗಲಿದೆ? ಎಂಬುದನ್ನು ನೋಡಿಕೊಂಡು 2ನೇ ಹಂತದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಪರಿಷತ್ ಸದಸ್ಯರು : ವಿಧಾನ ಪರಿಷತ್ ಸದಸ್ಯರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ, ಆಯನೂರು ಮಂಜುನಾಥ್ ಮತ್ತು ಎನ್. ರವಿ ಕುಮಾರ್ ಹೆಸರು ಕೇಳಿ ಬರುತ್ತಿದೆ. ರವಿ ಕುಮಾರ್ ಮಲ್ಲಿಕಾರ್ಜುನ ಖರ್ಗೆ ಸೋಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.












Click it and Unblock the Notifications