ಯಡಿಯೂರಪ್ಪ ದೆಹಲಿಯಿಂದ ದಿಢೀರ್ ವಾಪಸ್: ಏನಿರಬಹುದು ಕಾರಣ?
ಬೆಂಗಳೂರು, ಸೆಪ್ಟೆಂಬರ್ 08: ಮಹತ್ವದ ಸಭೆಗೆಂದು ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ದಿಢೀರನೆ ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಯಡಿಯೂರಪ್ಪ ಅವರ ಈ ನಡೆ ಹೊಸ ರಾಜಕೀಯ ಬೆಳವಣಿಗೆಯ ಮುನ್ಸೂಚನೆ ಎನ್ನಲಾಗುತ್ತಿದೆ.
13 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಜೋರು ಪಡೆದುಕೊಂಡಿದೆ. ನಿನ್ನೆಯಷ್ಟೆ ಬೆಳಗಾವಿ ರಾಜಕೀಯ ಒಂದು ಮಗ್ಗುಲು ಹೊರಳಿಸಿ ಹೊಸ ಅಂಕಕ್ಕೆ ಪರದೆ ಏರಿಸಿಕೊಂಡಿದೆ ಹೀಗಿರುವಾಗ ಯಡಿಯೂರಪ್ಪ ಅವರು ಅತಿ ಮುಖ್ಯವಾದ ಸಭೆಯನ್ನು ಬಿಟ್ಟು ರಾಜ್ಯಕ್ಕೆ ವಾಪಸ್ಸಾಗಿದ್ದಾರೆ ಹಾಗಿದ್ದರೆ ಇದರ ಅರ್ಥವೇನು?
ಲೋಕಸಭೆ ಚುನಾವಣೆ 2019 : 6 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಷ್ಟ ಕಷ್ಟ!
ದೆಹಲಿಯಲ್ಲಿ ಇಂದು ಮತ್ತು ನಾಳೆ ಬಿಜೆಪಿ ಕಾರ್ಯಕಾರಿಣಿ ಸಭೆ ಇದೆ. ಇದು ಅತ್ಯಂತ ಮಹತ್ವದ ಸಭೆ ಆಗಿದ್ದು, ಇಂತಹಾ ಮಹತ್ವದ ಸಭೆಯನ್ನೇ ತಪ್ಪಿಸಿಕೊಂಡು ರಾಜ್ಯಕ್ಕೆ ದಿಢೀರನೆ ವಾಪಸ್ಸಾಗಿದ್ದಾರೆಂದರೆ, ಆ ಸಭೆಗಿಂತಲೂ ಮಹತ್ವವಾದ ಕಾರ್ಯ ಇಲ್ಲಿರಬಹುದು ಎಂಬುದು ಸುಲಭದ ಊಹೆ.
ತೆಕ್ಕೆಗೆ ಬಿದ್ದರಾ ಶಾಸಕರು?
ಮೈತ್ರಿ ಸರ್ಕಾರ ರಚನೆ ಆದನಂತರ ಕಾಂಗ್ರೆಸ್ನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗಿದೆ. ಕೆಲವರಂತೂ ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಕೆಂಪು ಬಾವುಟ ಹಾರಿಸಿದ್ದಾರೆ. ಅದರಲ್ಲಿ ಕೆಲವರನ್ನು ಬಿಜೆಪಿ ಸಂಪರ್ಕಿಸಿದ್ದು, ಅವರ ಜೊತೆ ಮಾತುಕತೆ ಆಡಲೆಂದೇ ಯಡಿಯೂರಪ್ಪ ಅತಿ ಮುಖ್ಯ ಸಭೆಯನ್ನು ಬಿಟ್ಟು ಎದ್ದೆನೋ-ಬಿದ್ದೆನೋ ಎಂದು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ದೆಹಲಿಯಿಂದ ಹಠಾತ್ ವಾಪಸ್ಸಾದ ಯಡಿಯೂರಪ್ಪ: ದಿಢೀರ್ ಬೆಳವಣಿಗೆ
ಶಾಸಕರನ್ನು ಸ್ವಾಗತಿಸಲು ಬಂದಿದ್ದರಾ?
ಕಾಂಗ್ರೆಸ್ನ 13 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇದೆ. ಇಂದು ಅವರನ್ನೆಲ್ಲಾ ಬಿಜೆಪಿಗೆ ಸ್ವಾಗತಿಸಲೆಂದು ಯಡಿಯೂರಪ್ಪ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂಬ ಮಾತುಗಳೂ ಜೋರಾಗಿ ಕೇಳಿಬರುತ್ತಿದೆ.
ಯಡಿಯೂರಪ್ಪ ದೆಹಲಿಗೆ: ರಾಜ್ಯ ರಾಜಕಾರಣದ ಬಗ್ಗೆ ಬಿಸಿ-ಬಿಸಿ ಚರ್ಚೆ
ಬೆಳಗಾವಿ ಬೆಳವಣಿಗೆಯಿಂದ ಬಿಜೆಪಿಗೆ ಲಾಭ
ಬೆಳಗಾವಿಯಲ್ಲಿ ನಿನ್ನೆ ತಾನೆ ಭಾರಿ ರಾಜಕೀಯ ಬೆಳವಣಿಗೆ ನಡೆದಿದೆ. ಬೆಳಗಾವಿಯ ಹಳೆ ಹುಲಿಗಳೆಂದೆ ಕರೆಯಲಾಗುವ ಪ್ರತಿಷ್ಠಿತ ಜಾರಕಿಹೊಳಿ ಕುಟುಂಬಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಹಿನ್ನಡೆಯಾಗಿದೆ. ಇದನ್ನು ಲಾಭವನ್ನಾಗಿ ಬದಲಾಯಿಸಿಕೊಳ್ಳುವ ಉಮೇದಿನಿಂದ ಯಡಿಯೂರಪ್ಪ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ ಎಂಬ ವಾದ ಸಹ ಸತ್ಯಕ್ಕೆ ಹತ್ತಿರವಾದುದೇ ಆಗಿರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ದಿನಗಳ ಹಿಂದೆ ರಮೇಶ ಜಾರಕಿಹೊಳಿ ಅವರು ಹೇಳಿದ್ದ 'ನಮಗೆ ಹಿನ್ನಡೆ ಆದರೆ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ' ಎಂಬ ಮಾತನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಆಪ್ತರು ಹೇಳುವುದೇನು?
ಯಡಿಯೂರಪ್ಪ ವಾಪಸ್ ಬಂದಿರುವುದಕ್ಕೆ ವಿಶೇಷ ಅರ್ಥವೇನು ಇಲ್ಲ, ಅವರು ಸ್ವಾಮೀಜಿ ಅವರನ್ನು ಭೇಟಿ ಆಗಲೆಂದು ಹಠಾತ್ತನೆ ಬೆಂಗಳೂರಿಗೆ ಬಂದಿದ್ದಾರೆ ನಾಳೆ ಮತ್ತೆ ವಾಪಸ್ ಆಗುತ್ತಾರೆ ಎಂದಿದ್ದಾರೆ. ಆದರೆ ಅತಿ ಮುಖ್ಯ ಸಭೆಯನ್ನೇ ಬಿಟ್ಟು ಸ್ವಾಮೀಜಿ ಅವರನ್ನು ಕಾಣಲು ಬರುವುದು ನಂಬಲರ್ಹದಂತೆ ಕಾಣುತ್ತಿಲ್ಲ. ಅಕಸ್ಮಾತ್ ಬಿಎಸ್ವೈ ಸ್ವಾಮಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದವರಾಗಿದ್ದರೆ ಭೇಟಿಯಲ್ಲಿಯೂ ಮಹತ್ವದ ರಾಜಕೀಯ ಲೆಕ್ಕಾಚಾರವನ್ನೇ ಪರಿಗಣಿಸಬೇಕಾಗುತ್ತದೆಯೇ ವಿನಃ ಸೌಹಾರ್ಧ ಭೇಟಿ ಎಂದು ಅದನ್ನು ಪರಿಗಣಿಸಲಾಗದು.
ರಾಜಕೀಯ ಪಲ್ಲಟಕ್ಕೆ ವೇದಿಕೆ ಸಜ್ಜು?
ಕರ್ನಾಟಕದಲ್ಲಿ ಮಹತ್ತರವಾದ ರಾಜಕೀಯ ಪಲ್ಲಟವೊಂದಕ್ಕೆ ವೇದಿಕೆ ಸಜ್ಜಗೊಂಡಿದೆ ಎಂಬುದು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಯೂರೋಪ್ ಪ್ರವಾಸ, ಕುಮಾರಸ್ವಾಮಿ ಅವರು ಯಡಿಯೂರಪ್ಪ ಹಾಗೂ ಅವರ ಮಗನ ಮೇಲೆ ಮಾಡಿದ ಆರೋಪ, ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ, ಬೆಳಗಾವಿಯ ರಾಜಕೀಯ ಬೆಳವಣಿಗೆ, ಲೋಕಸಭೆ ಚುನಾವಣೆ ಸಮೀಪಿಸಿರುವುದು ಇವೆಲ್ಲವನ್ನೂ ಕೂಡಿಸಿ ನೋಡಿದಲ್ಲಿ ಮಹತ್ತರವಾದ ಬೆಳವಣಿಗೆ ಹತ್ತಿರದಲ್ಲೇ ಘಟಿಸಲಿದೆ ಎಂಬುದು ಅರಿವಾಗುತ್ತದೆ.