ಮಡಿಕೇರಿಯಲ್ಲಿ ನಿಧಿಗಾಗಿ ಮಹಿಳೆ ಕೊಂದ ಇಕ್ಬಾಲ್ ಸ್ವಾಮೀಜಿ?
ಮಡಿಕೇರಿ, ಅಕ್ಟೋಬರ್ 12 : ಮಹಿಳೆಯೊಬ್ಬರ ಶವ ದೇವರಕೋಣೆಯಲ್ಲಿ ಪತ್ತೆಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಧರಣಿ ಹಾಗೂ ಇಕ್ಬಾಲ್ ಆಲಿಯಾಸ್ ದುರ್ಗಾದತ್ತ ಕಾಳಿದಾಸ ಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಬೋಯಿಕೇರಿ ಸಮೀಪದ ಸ್ಯಾಂಡಲ್ಕಾಡು ಎಸ್ಟೇಟ್ ಬಳಿ ಸೋಮವಾರ ಆಶಾ (50) ಎಂಬುವವರ ಶವ ಪತ್ತೆಯಾಗಿದೆ. ಧರಣಿ ಎಂಬುವವರ ನಿವಾಸದಲ್ಲಿನ ದೇವರಕೋಣೆಯಲ್ಲಿ ಶವ ಪತ್ತೆಯಾಗಿದೆ. ಆಶಾ ಮೃತದೇಹದ ಮೇಲೆ ಗಾಯ ಮತ್ತು ಸುಟ್ಟ ಕಲೆಗಳು ಪತ್ತೆಯಾಗಿದ್ದು, ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. [ಕೊಪ್ಪಳ : 18 ಕೋಟಿ ನಿಧಿಗಾಗಿ ಬಾಲಕಿ ಬಲಿ ಕೊಟ್ಟರು]

ಮಹಾಲಯ ಅಮಾವಾಸ್ಯೆಯ ದಿನವೇ ಆಶಾ ಶವ ಸಿಕ್ಕಿರುವುದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿದೆ. ಆಶಾ ಅವರ ಜಮೀನಿನಲ್ಲಿರುವ ನಿಧಿಯನ್ನು ಪಡೆಯಲು ಆಕೆಯನ್ನು ಬಲಿಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಮಾಟ-ಮಂತ್ರಕ್ಕೆ ಬ್ರೇಕ್ ಹಾಕಲಿದೆ ಸರ್ಕಾರ!]
ದೇವರು ಬರುತ್ತದೆ ಎಂಬ ನಂಬಿಕೆ : ಮೃತಪಟ್ಟ ಆಶಾ ಅವರ ಮೈಮೇಲೆ ಕಾಳಿ ದೇವರು ಬರುತ್ತಿದ್ದ. ಇದನ್ನು ಬಿಡಿಸಲು ಅವರು ಧರಣಿ ಅವರ ಮನೆಗೆ ಬಂದು ಪೂಜೆ ಮಾಡಿಸುತ್ತಿದ್ದರು. ಧರಣಿ ಅವರ ಮನೆಯಲ್ಲಿ ಇಕ್ಬಾಲ್ ವಾಸವಾಗಿದ್ದ. [ಮಾಗಡಿಯ ಕಲ್ಯಾ ಗ್ರಾಮದಲ್ಲಿ ವಾಮಾಚಾರಿಗಳ ಕಾಟ]

ಇಕ್ಬಾಲ್ ಮೇಲೆ ದೇವರು ಬರುತ್ತಿದ್ದರಿಂದ ಅವರ ಹೆಸರನ್ನು ದುರ್ಗಾದತ್ತ ಕಾಳಿದಾಸ ಸ್ವಾಮಿ ಎಂದು ಬದಲಿಸಲಾಗಿತ್ತು. ಅಕ್ಕಪಕ್ಕದ ಮನೆಯವರಿಗೆ ತೊಂದರೆ ಉಂಟಾದಾಗ ಇಕ್ಬಾಲ್ ಪೂಜೆ ಮಾಡಿಸಿ ಸಮಸ್ಯೆ ಬಗೆಹರಿಸುತ್ತಿದ್ದ ಎಂದು ಸ್ಥಳೀಯರು ಹೇಳಿತ್ತಾರೆ.
ತನ್ನ ಮೈಮೇಲೆ ಕಾಳಿ ದೇವಿ ಬರುತ್ತಾಳೆ ಎಂದು ಹೇಳಿಕೊಳ್ಳುತ್ತಿದ್ದ ಆಶಾ ಧರಣಿ ಅವರ ಮನೆಯ ಪಕ್ಕದಲ್ಲಿಯೇ ಕಾಳಿ ದೇವಾಲಯ ನಿರ್ಮಿಸಲು ಜಮೀನು ಖರೀದಿ ಮಾಡಿದ್ದಳು. ದೇವಾಲಯ ನಿರ್ಮಿಸಲು ಮಹಾಲಯ ಅಮಾವಾಸ್ಯೆ ದಿನ ಪೂಜೆ ಮಾಡಿದರೆ ಒಳ್ಳೆಯಾಗುತ್ತದೆ ಎಂದು ಧರಣಿ ಮತ್ತು ಇಕ್ಬಾಲ್ ಆಶಾರನ್ನು ಮನೆಗೆ ಕರೆಸಿಕೊಂಡಿದ್ದರು.
ಭಾನುವಾರ ತಡರಾತ್ರಿ ತನಕ ಪೂಜೆ ನಡೆದಿದ್ದು, ಪೂಜೆ ಮುಗಿದ ಬಳಿಕ ಆಶಾ ಅಸ್ವಸ್ಥರಾಗಿದ್ದರು. ಮುಂಜಾನೆ ಆಶಾ ಮೈಮೇಲೆ ಮತ್ತೆ ದೇವರು ಬಂದಿದ್ದು ಅವರು ದೇವರ ಕೋಣೆಗೆ ಆಗಮಿಸಿದ್ದರು. ಆದರೆ, ಇಂದು ಧರಣಿ ಅವರು ಬಂದು ನೋಡಿದಾಗ ಆಶಾ ಮೃತಪಟ್ಟಿರುವುದು ತಿಳಿದುಬಂದಿದೆ.
ಜಮೀನಿನಲ್ಲಿ ನಿಧಿ ಇತ್ತು : ಗ್ರಾಮಸ್ಥರು ಹೇಳುವಂತೆ ಆಶಾ ಅವರು ಖರೀದಿ ಮಾಡಿದ್ದ ಜಮೀನಿನಲ್ಲಿ ನಿಧಿ ಇತ್ತು. ಈ ವಿಚಾರ ಇಕ್ಬಾಲ್ ಮತ್ತು ಧರಣಿಗೆ ತಿಳಿದಿತ್ತು. ಮಹಾಲಯ ಅಮಾವಾಸ್ಯೆ ದಿನ ಅದನ್ನು ಪಡೆಯಲು ಆಶಾ ಅವರನ್ನು ಕರೆಸಿ ಪೂಜೆ ಮಾಡಿ ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications